ವಿಶೇಷ ವರದಿ ಗದಗ
ಪರಿಸರಕ್ಕೆ ಹಾನಿಯಾಗುವ ಪಿಒಪಿ ಗಣಪತಿ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿ, ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟಕ್ಕೆ ಉತ್ತೇಜನ ನೀಡಿದ್ದು, ಮಣ್ಣಿನ ಗಣೇಶನ ಮೂರ್ತಿಗಳು ಒಂದೇ ಸೂರಿನಡಿ ಜನತೆಗೆ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ಮೂರ್ತಿಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.
25ಕ್ಕೂ ಹೆಚ್ಚು ಮಳಿಗೆ: ಮೊದಲು ಗಣಪತಿ ಮೂರ್ತಿಗಳನ್ನು ಖರೀದಿಸಲು ಸಾರ್ವಜನಿಕರು ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದರು. ಆದರೆ ಗದಗ ಎಪಿಎಂಸಿ ಆವರಣದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಗದಗ ಜಿಲ್ಲೆ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಯೇ ಕಲಾವಿದರು ಒಂದೇ ಕಡೆ 25ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮಾರಾಟ ಮಳಿಗೆ ತೆರೆದಿದ್ದು ಗ್ರಾಹಕರಿಗೆ ಅನುಕೂಲವಾಗಿದೆ. ನಮಗೆ ಯಾವ ಗಣೇಶ ಮೂರ್ತಿಬೇಕು ಆಯ್ಕೆ ಮಾಡಿ ಖರೀದಿಸಲು ಅವಕಾಶವಿದ್ದು, ಇದರಿಂದ ಗ್ರಾಹಕರಿಗೆ ಸಮಯದ ಉಳಿತಾಯ ಜತೆಗೆ ಆಯ್ಕೆ ಮಾಡಿ ಖರೀದಿಸಲು ಅನುಕೂಲವಾಗಿದೆ ಎನ್ನುತ್ತಾರೆ ಗ್ರಾಹಕರು.ಬಹು ರೂಪದ ಮೂರ್ತಿಗಳು:ಬಲಮುರಿ ಗಣಪತಿ, ಬಾಲ ಗಣಪತಿ, ಡೊಳ್ಳುಹೊಟ್ಟೆ, ಕಮಲ, ಚಕ್ರ, ತ್ರಿಶೂಲ,ಶಿವನ ವೇಷ, ಛತ್ರಪತಿ ಶಿವಾಜಿ, ಆಕಳು ಗಣಪತಿ, ಕಮಲದ ಗಣಪತಿ, ನವಿಲು ಗಣಪತಿ, ಮಹಾರಾಜ ಗಣಪತಿ, ಕೃಷ್ಣ ಗಣಪತಿ, ಚಂದ್ರ, ಸಾಯಿಬಾಬಾ, ಆಂಜನೇಯ, ವೀಣೆ ಹಿಡಿದ ಗಣಪತಿ ಹೀಗೆ ನಾನಾ ರೂಪದ ಗಣಪತಿಗಳು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಲಭ್ಯ ಇವೆ.
ಒಂದೇ ಸೂರಿನಡಿ ಗಣೇಶ ಮೂರ್ತಿ ಮಾರಾಟ ಮಳಿಗೆ ತೆರೆಯಲು ಅವಕಾಶ ಕೊಟ್ಟಿದ್ದರಿಂದ ಗ್ರಾಹಕರಿಗೆ ಹಾಗೂ ಮಾರಾಟಗಾರರಿಗೆ ಅನುಕೂಲಕರವಾಗಿದೆ. ನಮ್ಮಲ್ಲಿ ₹250, ₹800 ರಿಂದ ₹2500 ವರೆಗೂ ಮೂರ್ತಿಗಳ ಗಾತ್ರಕ್ಕೆ ತಕ್ಕಂತೆ ದರವಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಬೇಡಿಕೆ ಹೆಚ್ಚಾಗಿದ್ದು, ಮೂರ್ತಿಗಳ ಮಾರಾಟ ಉತ್ತಮವಾಗಿದೆ ಎಂದು ಗಣೇಶ ಮೂರ್ತಿ ತಯಾರಕ ಎಸ್.ಬಿ.ಕಿತ್ತೂರ ತಿಳಿಸಿದ್ದಾರೆ.