ಗಣೇಶ ವಿಸರ್ಜನೆ ಮೆರವಣಿಗೆಯ ಶೋಭಾಯಾತ್ರೆ

KannadaprabhaNewsNetwork |  
Published : Sep 09, 2025, 01:01 AM IST
 ಕಂಪ್ಲಿಯಲ್ಲಿ ಹಿಂದೂ ಮಹಾ ಮಂಡಳಿಯಿಂದ ಭವ್ಯ ಗಣೇಶ ವಿಸರ್ಜನೆ ಮೆರವಣಿಗೆಯ ಶೋಭಯಾತ್ರೆ ಜರುಗಿತು.  | Kannada Prabha

ಸಾರಾಂಶ

ಪಟ್ಟಣದಲ್ಲಿ ಹಿಂದೂ ಮಹಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಸೋಮವಾರ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದಲ್ಲಿ ಹಿಂದೂ ಮಹಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಸೋಮವಾರ ಅದ್ಧೂರಿಯಾಗಿ ಜರುಗಿತು. ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕವಾಗಿ ನಡೆದ ಈ ಮೆರವಣಿಗೆಯಲ್ಲಿ ಪಟ್ಟಣ ಹಾಗೂ ತಾಲೂಕಿನ ಮೂಲೆಮೂಲೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಪಾಲ್ಗೊಂಡು ಗಣೇಶನಿಗೆ ಜಯಕಾರ ಹಾಕಿದರು.

ಗಂಗಾ ನಗರದಿಂದ ಆರಂಭಗೊಂಡ ಮೆರವಣಿಗೆ ಉದ್ಭವ ಮಹಾಗಣಪತಿ ದೇವಸ್ಥಾನದ ಮುಂಭಾಗ, ಡಾ. ರಾಜ್ ಕುಮಾರ್ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ ತಲುಪಿತು. ಅಲ್ಲಿಂದ ಮರಳಿ ರಾಜಕುಮಾರ್ ರಸ್ತೆ ಮೂಲಕ ಸಂಚರಿಸಿ ಕೊನೆಗೆ ತುಂಗಭದ್ರಾ ನದಿ ತಟದಲ್ಲಿ ಸಮಾವೇಶಗೊಂಡು ವಿಸರ್ಜನೆ ನೆರವೇರಿಸಲಾಯಿತು.

ಧಾರ್ಮಿಕ ಕಾರ್ಯಕ್ರಮಗಳು:

ವಿಸರ್ಜನೆ ಮೆರವಣಿಗೆಯ ಅಂಗವಾಗಿ ದೇವರ ಅಭಿಷೇಕ, ಮಹಾ ಮಂಗಳಾರತಿ ಹಾಗೂ ವಿವಿಧ ಪೂಜಾಕಾರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಭಕ್ತರು ಕೈಮುಗಿದು ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದರು.

ಸಾಂಪ್ರದಾಯಿಕ ಕಲೆಗಳ ಪ್ರದರ್ಶನ:

ಮೆರವಣಿಗೆಯಲ್ಲಿ ಕೋಲಾಟ, ಮರಗಾಲುನಡಿಗೆ, ನಂದಿ ಕೋಲು, ಕುದುರೆ ಕುಣಿತ, ಡೊಳ್ಳು ಕುಣಿತ, ತಪ್ಪಡಿ, ತಾಷ ರಾಮ್ ಡೋಲ್, ಕಹಳೆ ಸೇರಿದಂತೆ ವಿವಿಧ ಜನಪದ ಮಂಗಳವಾದ್ಯಗಳ ಸಂಭ್ರಮ, ಉತ್ಸಾಹವನ್ನು ಹೆಚ್ಚಿಸಿತು. ಬಣ್ಣ ಬಣ್ಣದ ಅಲಂಕಾರಗಳಿಂದ ಮೆರವಣಿಗೆ ಇನ್ನಷ್ಟು ಕಂಗೊಳಿಸಿತು.

ಭಕ್ತರ ಸಂಭ್ರಮ:

ಅಂಬೇಡ್ಕರ್ ವೃತ್ತದಿಂದ ಆರಂಭವಾದ ಧ್ವನಿವರ್ಧಕ ಸದ್ದಿಗೆ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಎಲ್ಲರೂ ನೃತ್ಯ ಮಾಡಿ ಸಂಭ್ರಮಿಸಿದರು. ಭಕ್ತಿಯಿಂದ ಕೂಡಿದ ಹರ್ಷೋದ್ಗಾರಗಳು ಸುತ್ತಮುತ್ತಲನ್ನು ಪ್ರಫುಲ್ಲಗೊಳಿಸಿತು.

ವಿಶೇಷತೆ:

ಈ ಮೆರವಣಿಗೆಯಲ್ಲಿ ಹಿಂದೂ ಮಹಾ ಮಂಡಳಿಯ ಪದಾಧಿಕಾರಿಗಳ ಜತೆಗೆ ಸರ್ವ ಸಮುದಾಯದ ಭಕ್ತರು ಪಾಲ್ಗೊಂಡಿದ್ದರು. ಶಿಸ್ತಿನ ವಾತಾವರಣದಲ್ಲಿ ನಡೆದ ಮೆರವಣಿಗೆಯು ಪಟ್ಟಣದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಏಕತೆಯ ಸಂಕೇತವಾಗಿ ಪರಿಣಮಿಸಿತು.

ಭದ್ರತೆ: ಹಿಂದೂ ಮಹಾ ಮಂಡಳಿ ಗಣೇಶ ಮೂರ್ತಿ ವಿಸರ್ಜನೆ ಶೋಭಾಯಾತ್ರೆಯ ನಿಮಿತ್ತ ಪಟ್ಟಣದಲ್ಲಿ ಕುಡುತಿನಿ ಡಿವೈಎಸ್‌ಪಿ ಪ್ರಸಾದ್ ಗೋಖಲೆ, ಕಂಪ್ಲಿ ಪಿಐ ಕೆ.ಬಿ. ವಾಸುಕುಮಾರ್ ವಿವಿಧ ಠಾಣಾ ವ್ಯಾಪ್ತಿಯ ಸಿಪಿಐ, ಪಿಎಸ್‌ಐ, ಎಎಸ್‌ಐ, ಪೊಲೀಸ್ ಪೇದೆಗಳು ಸೇರಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ನೀಡಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು