- ಜಿಲ್ಲೆ 35 ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳ ಸ್ಥಾಪನೆ: ಎಸ್ಪಿ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ ಗೌರಿ, ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ ಜಿಲ್ಲೆಯ ಪ್ರಮುಖ 35 ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ಒಳ ಹಾಗೂ ಹೊರ ಹೋಗುವ ವ್ಯಕ್ತಿ ಹಾಗೂ ವಾಹನಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಜಿಲ್ಲೆ ಹಾಗೂ ಠಾಣಾ ಮಟ್ಟದಲ್ಲಿ ರೌಡಿ ಹಾಗೂ ಮತೀಯ ಗೂಂಡಾಗಳ ಪೆರೇಡ್ ನಡೆಸಿ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಸೌಹಾರ್ದತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಈಗಾಗಲೇ 25 ಜನ ರೌಡಿ ಮತ್ತು ಮತೀಯ ಗೂಂಡಾಗಳನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ 8, ಪೊಲೀಸ್ ಉಪ ವಿಭಾಗ ಮಟ್ಟದಲ್ಲಿ 60 ಹಾಗೂ ಠಾಣಾ ಮಟ್ಟದಲ್ಲಿ 335 ಶಾಂತಿ ಸೌಹಾರ್ಧ ಸಭೆಗಳನ್ನು ನಡೆಸಿ, ಸೌಹಾರ್ದತೆ ಕಾಪಾಡುವ ದೃಷ್ಠಿಯಿಂದ ಸೂಕ್ತ ನಿಯಮಗಳನ್ನು ಸಹ ಸೂಚಿಸಲಾಗಿದೆ. ಕಾನೂನು, ಸುವ್ಯವಸ್ಥೆ, ಶಾಂತಿ ಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ನೆರೆಕಾವಲು ಪಡೆ, ಪೊಲೀಸ್ ಮಿತ್ರಪಡೆ ಹಾಗೂ ಜಂಟಿ ಕೈಗಳು ಪಡೆಗಳ ಸ್ವಯಂ ಸೇವಕರುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭ ಅಪರಾಧಗಳನ್ನು ತಡೆಗಟ್ಟುವ, ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 18 ಸಾವಿರದ 400 ಸಿ.ಸಿ. ಟಿ.ವಿ.ಗಳನ್ನು ಹಾಕಲಾಗಿದೆ. ಡ್ರೋನ್ ಕ್ಯಾಮೆರಾಗಳ ಮೂಲಕ ಹದ್ದಿನ ಕಣ್ಣು ಇಡಲಾಗಿದೆ ಎಂದಿದ್ದಾರೆ.ದಾವಣಗೆರೆ ನಗರ ಹಾಗೂ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಿದ್ದು, ಸಾರ್ವಜನಿಕರಲ್ಲಿ ಭಯಮುಕ್ತ, ಶಾಂತಿ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಲು ಜಿಲ್ಲಾ ಪೊಲೀಸ್ ವಿಶ್ವಾಸ ಮೂಡಿಸಲಾಗಿದೆ. ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ಅಂದಾಜು 2329 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪಿಸುತ್ತಿರುವ ಬಗ್ಗೆ ತಿಳಿದುಬಂದಿದೆ. ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
- - --25ಕೆಡಿವಿಜಿ31: ಉಮಾ ಪ್ರಶಾಂತ್