ಗಣೇಶೋತ್ಸವಕ್ಕೆ ಜನಪರ ಹೋರಾಟಗಳ ಕನ್ನಡಿ!

KannadaprabhaNewsNetwork |  
Published : Sep 20, 2026, 03:00 AM IST
ಹುಬ್ಬಳ್ಳಿಯ ಹಿರೇಪೇಟೆ, ಭೂಸಪೇಟೆ ಹಾಗೂ ಕಂಚಗಾರ ಓಣಿಯ ಶ್ರೀ ಗಣೇಶೋತ್ಸವ ಮಂಡಳಿಯಿಂದ ಪ್ರದರ್ಶಿಸಲಾಗುತ್ತಿರುವ ಶ್ರೀ ಮಹಾಕಾಲೇಶ್ವರ ಜ್ಯೋತಿರ್ಲಿಂಗ ರೂಪಕ. | Kannada Prabha

ಸಾರಾಂಶ

ಗಣೇಶೋತ್ಸವವೆಂದರೆ ಭಕ್ತಿ, ಸಂಭ್ರಮ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ. ಆದರೆ, ಹುಬ್ಬಳ್ಳಿಯ ಹಿರೇಪೇಟೆ, ಭೂಸಪೇಟೆ ಹಾಗೂ ಕಂಚಗಾರ ಓಣಿಯ ಶ್ರೀ ಗಣೇಶೋತ್ಸವ ಮಂಡಳಿಯು ಗಣೇಶನ ಮಂಟಪದಲ್ಲೇ ಜನರ ಸಮಸ್ಯೆ, ನಾಡಿನ ಹೋರಾಟ ಹಾಗೂ ದೇಶದ ಪ್ರಮುಖ ಘಟನೆಗಳು ಸನ್ನಿವೇಶಗಳಾಗಿ ರೂಪ ಪಡೆದು ಜನಜಾಗೃತಿಗೆ ವೇದಿಕೆಯಾಗಿವೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ

ಗಣೇಶೋತ್ಸವವೆಂದರೆ ಭಕ್ತಿ, ಸಂಭ್ರಮ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ. ಆದರೆ, ಹುಬ್ಬಳ್ಳಿಯ ಹಿರೇಪೇಟೆ, ಭೂಸಪೇಟೆ ಹಾಗೂ ಕಂಚಗಾರ ಓಣಿಯ ಶ್ರೀ ಗಣೇಶೋತ್ಸವ ಮಂಡಳಿಯು ಗಣೇಶನ ಮಂಟಪದಲ್ಲೇ ಜನರ ಸಮಸ್ಯೆ, ನಾಡಿನ ಹೋರಾಟ ಹಾಗೂ ದೇಶದ ಪ್ರಮುಖ ಘಟನೆಗಳು ಸನ್ನಿವೇಶಗಳಾಗಿ ರೂಪ ಪಡೆದು ಜನಜಾಗೃತಿಗೆ ವೇದಿಕೆಯಾಗಿವೆ.

1974ರಲ್ಲಿ ಆರಂಭವಾದ ಮಂಡಳಿ ಇದೀಗ 53ನೇ ವರ್ಷಕ್ಕೆ ಕಾಲಿಟ್ಟಿದ್ದು, ಧಾರ್ಮಿಕ ಆಚರಣೆಯ ಜತೆಗೆ ಸಾಮಾಜಿಕ ಕಾಳಜಿಯ ಪರಂಪರೆಯನ್ನೂ ಮುಂದುವರಿಸಿಕೊಂಡು ಬಂದಿದೆ. 1998-99ರಲ್ಲಿ ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಗಳಾದ ಹುಬ್ಬಳ್ಳಿಯಲ್ಲಿ ಹೈಕೋರ್ಟ್ ಪೀಠ ಹಾಗೂ ನೈಋತ್ಯ ರೈಲ್ವೆ ವಲಯ ಕಚೇರಿ ಸ್ಥಾಪನೆಗಾಗಿ ನಡೆದ ಹೋರಾಟಕ್ಕೆ ಬೆಂಬಲವಾಗಿ ಹೈಕೋರ್ಟ್ ಪೀಠದ ಸನ್ನಿವೇಶ ಹಾಗೂ ರೈಲಿನ ಮಾದರಿ, 2004ರಲ್ಲಿ ಸೇತುಸಮುದ್ರಂ ಯೋಜನೆ ವಿರುದ್ಧದ ರಾಮಸೇತು ಉಳಿವಿನ ಅಭಿಯಾನ, 2016ರ ಕಳಸಾ-ಬಂಡೂರಿ ಹೋರಾಟದ ವೇಳೆ ಕರ್ನಾಟಕದಲ್ಲಿ ಹುಟ್ಟಿ ಗೋವಾದಲ್ಲಿ ಸಮುದ್ರ ಸೇರುವ ನದಿಗಳ ಸನ್ನಿವೇಶ ರೂಪಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು. ಹೋರಾಟ ನಿರತ ರೈತರಿಂದ ಗಣೇಶನಿಗೆ ಪೂಜೆ ಸಲ್ಲಿಸಲಾಗಿತ್ತು. 2018ರಲ್ಲಿ ಮಾಜಿ ಪ್ರಧಾನಿ ದಿ. ಅಟಲ್‌ಬಿಹಾರಿ ವಾಜಪೇಯಿ ಹಾಗೂ ಮಾಜಿ ರಾಷ್ಟ್ರಪತಿ ದಿ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮರಣಾರ್ಥ ಪೋಕ್ರಾನ್ ಅಣುಪರೀಕ್ಷೆ, ವಿಂಗ್ ಕಮಾಂಡರ್ ಅಭಿನಂದನ್ ಅವರ ಪಾಕಿಸ್ತಾನದಿಂದ ಸುರಕ್ಷಿತ ವಾಪಸಾತಿಯ ಘಟನೆಯನ್ನೂ ಸನ್ನಿವೇಶದ ಮೂಲಕ ಪರಿಚಯಿಸಿತ್ತು.

ಸಂತ್ರಸ್ತರ ಕೈಹಿಡಿದ ಹಿರಿಯರು:

1999ರ ಕಾರ್ಗಿಲ್ ಯುದ್ಧದ ಸಂಕಷ್ಟದ ಸಂದರ್ಭದಲ್ಲಿ ಸಂಘದ ಮುಖಂಡರಾಗಿದ್ದ ದಿ. ರಾಘಣ್ಣ ಸವಣೂರ, ಗುರುಸಿದ್ದಪ್ಪ ಮಟ್ಟಿ, ಕೃಷ್ಣಪ್ಪ ಚನ್ನಗಿರಿ, ರಾಮಣ್ಣ ಕೊಪ್ಪರ, ಜಡಿಯಪ್ಪ ಜಾಬಿನ, ಅಣ್ಣಪ್ಪ ಜಾಡಗುಂಡಿ ಹಾಗೂ ಹಿರಿಯರಾದ ಮೋಹನ ಸವಣೂರ, ಅಪ್ಪಣ್ಣ ಬೆಂಡಿಗೇರಿ ಅವರು ಸಂಘದ ಖಾತೆಯಲ್ಲಿದ್ದ ₹50 ಸಾವಿರವನ್ನು ಕಾರ್ಗಿಲ್ ನಿಧಿಗೆ, ₹ 50 ಸಾವಿರವನ್ನು ಒಡಿಶಾ ಚಂಡಮಾರುತ ಸಂತ್ರಸ್ತರಿಗೆ ನೀಡಿದ್ದರು. ಪ್ರಸ್ತುತ ಮಂಡಳಿಯ ಗಣೇಶೋತ್ಸವ ಮಂಡಳಿ ಅಧ್ಯಕ್ಷರಾಗಿ ಗೋಪಾಲ ಸವಣೂರ, ಕಾರ್ಯದರ್ಶಿಯಾಗಿ ಪವನ್‌ ಶಿರೋಳ, ಉಪಾಧ್ಯಕ್ಷರಾಗಿ ಹರ್ಷ ಶಿರೋಳ, ವಿನಾಯಕ ಕಾಳೇಕರ, ಆಶಿಸ್‌ ಸವಣೂರ, ಮಂಜು ಹವಳಪ್ಪನವರ, ಅಮಿತ್‌ ಕೊಪ್ಪರ, ರಾಹುಲ್ ಗಾರೆ, ಕಾರ್ತಿಕ ತುಳುವಳ್ಳಿ ಕಾರ್ಯನಿರ್ವಹಿಸುತ್ತಿದ್ದಾರೆ.2028ರ ಕುಂಭಮೇಳಕ್ಕೆ ಈಗಲೇ ಜಾಗೃತಿ

ಉಜ್ಜಯಿನಿಯಲ್ಲಿ 2028ರಲ್ಲಿ ಕುಂಭಮೇಳ ನಡೆಯಲಿದೆ. ಈ ಹಿನ್ನೆಲೆ ಈ ಬಾರಿ ಮಹಾಕಾಲೇಶ್ವರ ಜ್ಯೋತಿರ್ಲಿಂಗದ ಪೌರಾಣಿಕ ಕಥೆಯನ್ನು ಸನ್ನಿವೇಶಗೊಳಿಸಲಾಗಿದೆ. ಶ್ರೀಕರ ಬಾಲಕನ ಶಿವಭಕ್ತಿ, ದೂಷಣ ರಾಕ್ಷಸನ ದಾಳಿ ಹಾಗೂ ಭಕ್ತರ ರಕ್ಷಣೆಗಾಗಿ ಮಹಾಕಾಲ ರೂಪದಲ್ಲಿ ಶಿವ ಪ್ರತ್ಯಕ್ಷನಾದ ಕಥೆ ದೃಶ್ಯರೂಪದಲ್ಲಿ ಮೂಡಿಬಂದಿದೆ.ಇಲ್ಲಿ ಪ್ರತಿ ವರ್ಷವೂ ನೈಜ ಸನ್ನಿವೇಶ ಪ್ರಸ್ತುತ ಪಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ 2028ರಲ್ಲಿ ಉಜ್ಜಯಿನಿಯಲ್ಲಿ ಕುಂಭಮೇಳ ನಡೆಯಲಿರುವ ಹಿನ್ನೆಲೆ ಮಹಾಕಾಲೇಶ್ವರ ಜ್ಯೋತಿರ್ಲಿಂಗದ ಪೌರಾಣಿಕ ಕಥೆ ಪ್ರಸ್ತುತಪಡಿಸಲಾಗುತ್ತಿದೆ.

ಮಲ್ಲಿಕಾರ್ಜುನ ಶಿರಗುಪ್ಪಿ, ಶ್ರೀಗಜಾನನೋತ್ಸವ ಮಂಡಳಿ ಟ್ರಸ್ಟ್‌ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಗಲು ನಿರಂತರ ೭ ಗಂಟೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿ
ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಿರುವವರ ಪೈಕಿ ನಾನೂ ಒಬ್ಬ-ಸಚಿವ ಲಮಾಣಿ