ರಾಜ್ಯವಾರು ಪಟ್ಟಿಯಲ್ಲಿ ಗಣಿ ಬಳ್ಳಾರಿ ಜಿಲ್ಲೆ ಚೇತರಿಕೆ

KannadaprabhaNewsNetwork |  
Published : May 10, 2024, 01:36 AM IST
ದ | Kannada Prabha

ಸಾರಾಂಶ

ಕಳೆದ ವರ್ಷ ಬಳ್ಳಾರಿ ಜಿಲ್ಲೆ ಶೇ. 80.84ರಷ್ಟು ಫಲಿತಾಂಶ ಪಡೆದು ರಾಜ್ಯಮಟ್ಟದಲ್ಲಿ 31ನೇ ಸ್ಥಾನದಲ್ಲಿತ್ತು.

ಕೆ.ಎಂ. ಮಂಜುನಾಥ್

ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು, ಗಣಿ ಜಿಲ್ಲೆ ಬಳ್ಳಾರಿ ಕಳೆದ ವರ್ಷಕ್ಕಿಂತ ಈ ಬಾರಿ ರಾಜ್ಯವಾರು ಪಟ್ಟಿಯಲ್ಲಿ ಒಂದಷ್ಟು ಚೇತರಿಕೆ ಕಂಡಿದೆ. ಆದರೆ, ಶೇಕಡಾವಾರು ಫಲಿತಾಂಶದಲ್ಲಿ ಇಳಿಮುಖವಾಗಿದೆ.

ಕಳೆದ ವರ್ಷ ಬಳ್ಳಾರಿ ಜಿಲ್ಲೆ ಶೇ. 80.84ರಷ್ಟು ಫಲಿತಾಂಶ ಪಡೆದು ರಾಜ್ಯಮಟ್ಟದಲ್ಲಿ 31ನೇ ಸ್ಥಾನದಲ್ಲಿತ್ತು. ಈ ಬಾರಿ 28ನೇ ಸ್ಥಾನಕ್ಕೆ ಚೇತರಿಕೆ ಕಂಡಿದೆಯಾದರೂ ಫಲಿತಾಂಶ ಶೇ. 64.99ಕ್ಕೆ ಕುಸಿದಿದೆ.

ನಿರೀಕ್ಷೆಯಂತೆಯೇ ಜಿಲ್ಲೆಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಫಲಿತಾಂಶ ಇಳಿಮುಖವಿದ್ದು, ಖಾಸಗಿ ಶಾಲೆಗಳು ಹೆಚ್ಚಿನ ಫಲಿತಾಂಶ ಪಡೆದಿವೆ. ವಿಷಯವಾರು ಫಲಿತಾಂಶದಲ್ಲಿ ತೃತೀಯ ಭಾಷೆಯಲ್ಲಿ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ವಿಜ್ಞಾನ ವಿಷಯದಲ್ಲಿ ಕಡಿಮೆಯಾಗಿದೆ. ನಗರದ ಕೌಲ್ ಬಜಾರ್ ಪ್ರದೇಶದ ರಾಯಲ್ ಇಂಗ್ಲಿಷ್ ಮಾಧ್ಯಮ ಶಾಲೆಗೆ ಶೂನ್ಯ ಫಲಿತಾಂಶ ಬಂದಿದೆ.

ಜಿಲ್ಲೆಯ ಟಾಪ್ 10 ಫಲಿತಾಂಶ ಪಡೆದ ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಾಗಿದ್ದು, ಶೇ. 98ರಷ್ಟು ಫಲಿತಾಂಶ ಪಡೆದಿರುವ ಸಂಡೂರು ತಾಲೂಕಿನ ಆದರ್ಶ ವಿದ್ಯಾಶಾಲೆಯ ವಿದ್ಯಾರ್ಥಿಯಾಗಿದ್ದಾನೆ.

14,441 ವಿದ್ಯಾರ್ಥಿಗಳು ಉತ್ತೀರ್ಣ: ಪರೀಕ್ಷೆಗೆ ನೋಂದಣಿಯಾಗಿದ್ದ 22,419 ವಿದ್ಯಾರ್ಥಿಗಳ ಪೈಕಿ 14,441 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಪೈಕಿ ಬಾಲಕಿಯರು 8105 ಉತ್ತೀರ್ಣಗೊಂಡಿದ್ದು, 6336 ಬಾಲಕರು ಉತ್ತೀರ್ಣರಾಗಿದ್ದಾರೆ.

ಸಂಡೂರು ತಾಲೂಕು ಅತಿಹೆಚ್ಚು (ಶೇ. 75.55)ರಷ್ಟು ಫಲಿತಾಂಶ ಪಡೆದರೆ, ಬಳ್ಳಾರಿ ಪೂರ್ವ ವಲಯಕ್ಕೆ (ಶೇ. 54.71) ಅತಿ ಕಡಿಮೆ ಫಲಿತಾಂಶ ಬಂದಿದೆ. ಸಿರುಗುಪ್ಪ ತಾಲೂಕು (ಶೇ. 69.93) ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಬಳ್ಳಾರಿ ಪಶ್ಚಿಮ ವಲಯ (ಶೇ. 62.89) ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಶೇ. 99ರಷ್ಟು ಫಲಿತಾಂಶ ಪಡೆದಿದ್ದು, ಏಳು ವಿದ್ಯಾರ್ಥಿಗಳು ಶೇ. 98ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದ್ದಾರೆ.

ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಮೂರು ತಿಂಗಳಿನಿಂದ ಸತತ ಪ್ರಯತ್ನ ನಡೆಸಿತ್ತು. ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ವಿತರಣೆ, ಪರೀಕ್ಷಾಪೂರ್ವ ಸಿದ್ಧತೆ, ನಿರಂತರ ಕಿರು ಪರೀಕ್ಷೆಗಳು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಡೆ ವಿಶೇಷ ಗಮನ, ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ವಿಶೇಷ ತರಗತಿ ಸೇರಿದಂತೆ ನಾನಾ ಕಸರತ್ತು ನಡೆದಿತ್ತು. ಜಿಲ್ಲಾಡಳಿತದ ನಿರಂತರ ಪ್ರಯತ್ನ ಒಂದಷ್ಟು ಫಲ ನೀಡಿದೆ. ಬಳ್ಳಾರಿ ಜಿಲ್ಲೆಯ ಅತಿ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳು:

1) ಯು. ವೆಂಕಟ್ ರಾಹುಲ್- ರಾಜುಬಾಯಿ ಇಂಗ್ಲಿಷ್ ಮಾಧ್ಯಮ ಶಾಲೆ, ಕಮ್ಮಿಂಗ್ ರಸ್ತೆ, ಬಳ್ಳಾರಿ ಶೇ. 99

2) ಬಿ. ಕೀರ್ತನಾ- ಸಂತಜೋಸಫ್ ಇಂಗ್ಲಿಷ್ ಮಾಧ್ಯಮ ಶಾಲೆ, ಕೌಲ್‌ಬಜಾರ್, ಬಳ್ಳಾರಿ ಶೇ. 99

3) ಡಿ. ಮಣಿಕಂಠ- ಎಸ್‌ಇಎಸ್ ಇಂಗ್ಲಿಷ್ ಮಾಧ್ಯಮ ಶಾಲೆ, ಸಿರುಗುಪ್ಪ ಶೇ. 99

4) ಸಾಯಿಸಾಕೇತ್ ವಿರಾಜ್ ನಂದಿ ಶಾಲೆ, ಕಂಟೋನ್ಮೆಂಟ್, ಬಳ್ಳಾರಿ ಶೇ. 98

5) ಜಿ. ರೇಷ್ಮಾ- ರಾಜುಬಾಯಿ ಇಂಗ್ಲಿಷ್ ಮಾಧ್ಯಮ ಶಾಲೆ, ಕಮ್ಮಿಂಗ್ ರಸ್ತೆ, ಬಳ್ಳಾರಿ ಶೇ. 98

6) ಪಿ. ನಂದು- ಶ್ರೀ ಸಂತ ಫಿಲಾಮಿನಾ ಪ್ರೌಢಶಾಲೆ, ಕಂಟೋನ್ಮೆಂಟ್, ಬಳ್ಳಾರಿ ಶೇ. 98

7) ಜಿ. ಕೀರ್ತಿ- ವೆಂಕಯ್ಯ ಪ್ರೌಢಶಾಲೆ, ಎಮ್ಮಿಗನೂರು, ಕಂಪ್ಲಿ ತಾಲೂಕು ಶೇ. 98

8) ಕೆ. ತ್ರಿಶಾ-ವಿಜಡಮ್‌ಲ್ಯಾಂಡ್ ಪ್ರೌಢಶಾಲೆ, ಸಂಗನಕಲ್ಲು, ಬಳ್ಳಾರಿ. ಶೇ. 98

9) ಅರುಣ್‌- ಆರ್‌ಎಸ್‌ಜಿ ಶ್ರೀ ವಾಸವಿ ಶಾಲೆ, ಇನ್‌ಫ್ಯಾಂಟ್ರಿ ರಸ್ತೆ, ಬಳ್ಳಾರಿ ಶೇ. 98

10) ಎಚ್. ಸುದೀಪ್- ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ), ಸಂಡೂರು ಶೇ. 98 ಬಳ್ಳಾರಿ ಜಿಲ್ಲೆಯ ತಾಲೂಕುವಾರು ಫಲಿತಾಂಶ:

1) ಸಂಡೂರು ಶೇ.75.55

2) ಸಿರುಗುಪ್ಪ ಶೇ.69.93

3) ಬಳ್ಳಾರಿ ಪಶ್ಚಿಮ ಶೇ.62.89

4) ಬಳ್ಳಾರಿ ಪೂರ್ವ ಶೇ.54.71

ವಿಷಯವಾರು ಫಲಿತಾಂಶ:

1) ಪ್ರಥಮ ಭಾಷೆ ಶೇ.77

2) ದ್ವಿತೀಯ ಭಾಷೆ ಶೇ.73

3) ತೃತೀಯ ಭಾಷೆ ಶೇ.78

4) ಗಣಿತ ಶೇ.70

5) ವಿಜ್ಞಾನ ಶೇ.67

6) ಸಮಾಜ ವಿಜ್ಞಾನ ಶೇ.74

ಈ ಬಾರಿ ನೈಜ ಫಲಿತಾಂಶ ಬಂದಿದೆ. ಜಿಲ್ಲಾಡಳಿತ, ಜಿಪಂ ಸಿಇಒ ನಿರಂತರ ಪ್ರಯತ್ನದ ಫಲವಾಗಿ ಜಿಲ್ಲೆ ರಾಜ್ಯಮಟ್ಟದ ಸ್ಥಾನದಲ್ಲಿ ಒಂದಷ್ಟು ಸುಧಾರಿಸಿದೆ. ಈ ವರ್ಷ ಫಲಿತಾಂಶ ಮತ್ತಷ್ಟು ಉತ್ತಮಗೊಳಿಸುವ ದಿಸೆಯಲ್ಲಿ ಕೆಲಸ ಮಾಡುತ್ತೇವೆ. ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿದ ಇಲಾಖೆಯ ಸಿಬ್ಬಂದಿಗೆ ಧನ್ಯವಾದ ಹೇಳುವೆ ಎನ್ನುತ್ತಾರೆ ಬಳ್ಳಾರಿ ಡಿಡಿಪಿಐ ಉಮಾದೇವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನ ಮರ ಕಡಿದಿದ್ದಕ್ಕೆ ವಿಧಾನಸೌಧ ಬಳಿ ಸರ್ಕಾರಿ ಶ್ರೀಗಂಧ ಮರ ಕತ್ತರಿಸಿದ ರೈತ!
ಸಿದ್ದರಾಮಯ್ಯ , ನಾನು ಕದ್ದು ಮುಚ್ಚಿ ಮಾತಾಡಿಲ್ಲ, ನಮ್ಮಲ್ಲಿ ಗೊಂದಲವೂ ಇಲ್ಲ : ಡಿಸಿಎಂ