ಕನ್ನಡಪ್ರಭ ವಾರ್ತೆ ಹುಳಿಯಾರು
ಇಲ್ಲಿನ ಪಟ್ಟಣ ಪಂಚಾಯಿತಿ ಮುಂದೆ ರಾಜ್ಯ ರೈತ ಸಂಘದ ಚಂದ್ರಣ್ಣ ಬಣದ ರೈತರನ್ನು ಭೇಟಿ ಮಾಡಿದ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಬೆಂಬಲ ನೀಡಿದರು. ಈ ವೇಳೆ ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ ಕಸವನ್ನು ಕೊರಿಯರ್ ಮೂಲಕ ಅಧಿಕಾರಿಗಳಿಗೆ ಕಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ , ಹುಳಿಯಾರು ಪಟ್ಟಣವು ಶರವೇಗದಲ್ಲಿ ಬೆಳೆಯುತ್ತಿದ್ದು ಇಲ್ಲಿನ ವ್ಯಾಪಾರ ವಹಿವಾಟು ಜನರ ಓಡಾಟ ಹೆಚ್ಚಾಗಿದ್ದು ಕಸ ವಿಲೇವಾರಿ ಮಾಡದೆ ಸಾಂಕ್ರಾಮಿಕ ರೋಗಗಳು ಉಲ್ಬಣಿಸುವ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ,ಹುಳಿಯಾರು ಸುತ್ತ ಸಾಕಷ್ಟು ಸರ್ಕಾರಿ ಜಮೀನಿದ್ದು ಅದರಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸದೆ ಕಸವನ್ನು ಕಗ್ಗಂಟಾಗಿಸಿದೆ. ಪರಿಸರವನ್ನು ಕಲುಷಿತಗೊಳಿಸಿದ್ದಾರೆ ಹಾಗಾಗಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಚಿಕ್ಕನಾಯಕನಹಳ್ಳಿ ಸರ್ಕಲ್ ಇನ್ಸಪೆಕ್ಟರ್ , ಡಿಸಿ, ಎಸಿ, ತಹಸೀಲ್ದಾರ್ಗೂ ದೂರು ನೀಡಿದ್ದು ಒಬ್ಬರು ಕಣ್ಣೆತ್ತಿ ನೋಡಿಲ್ಲ ಎಂದು ಆರೋಪಿಸಿದರು. ಹುಳಿಯಾರು ಸಮೀಪದ ಕೆರೆ ಸೂರಗೊಂಡನಳ್ಳಿಯ ಸರ್ವೇ ನಂಬರ್ 57ರ ಗೋಮಾಳ ಜಮೀನಿನು ಇದ್ದು ಅದರಲ್ಲಿ ಇಟ್ಟಿಗೆ ಕಾರ್ಖಾನೆ ನಡೆಸುತ್ತಿದ್ದಾರೆ. ಇಂತಹ ಜಾಗವನ್ನು ವಶಪಡಿಸಿಕೊಂಡು ಕಸ ವಿಲೇವಾರಿ ಘಟಕ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.