ಬಾಂಗ್ಲಾದೇಶದಿಂದ ವಲಸೆ ಬಂದು ಅಕ್ರಮವಾಗಿ ನೆಲೆಸಿರುವ ವಲಸಿಗರು ಕಸದ ಮಾಫಿಯಾ ಮೂಲಕ ತಮ್ಮ ಆರೋಗ್ಯವನ್ನು ಹದಗೆಡಿಸಿಕೊಳ್ಳುವುದರ ಜತೆಗೆ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದು, ಕೆರೆಗಳನ್ನು ಕಲುಷಿತ ಮಾಡುತ್ತಿದ್ದಾರೆ
ಎಂ.ನರಸಿಂಹಮೂರ್ತಿ
ಬೆಂಗಳೂರು ದಕ್ಷಿಣ : ಬಾಂಗ್ಲಾದೇಶದಿಂದ ವಲಸೆ ಬಂದು ಅಕ್ರಮವಾಗಿ ನೆಲೆಸಿರುವ ವಲಸಿಗರು ಹದ ಕಸದ ಮಾಫಿಯಾ ಮೂಲಕ ತಮ್ಮ ಆರೋಗ್ಯವನ್ನು ಹದಗೆಡಿಸಿಕೊಳ್ಳುವುದರ ಜತೆಗೆ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದು, ಕೆರೆಗಳನ್ನು ಕಲುಷಿತ ಮಾಡುತ್ತಿದ್ದಾರೆ. ಸ್ಥಳೀಯ ಮುಖಂಡರ ಸಹಾಯದಿಂದ ಬಹು ವರ್ಷಗಳಿಂದ ಎಗ್ಗಿಲ್ಲದೆ ಇಷ್ಟೇಲ್ಲಾ ಅವ್ಯವಸ್ಥೆ ನಡೆಯುತ್ತಿದ್ದರು ಸಂಬಂಧಪಟ್ಟವರು ಜನರ ಸಮಸ್ಯೆ ಆಲಿಸಲು ಮುಂದಾಗಿಲ್ಲ.
ಹೌದು, ಬೇಗೂರು ವಾರ್ಡ್ನ ವಿಶ್ವಪ್ರಿಯ ಲೇಔಟ್ ಬಳಿ ಬಾಂಗ್ಲಾ ಪ್ರಜೆಗಳು ಕಬ್ಬಿಣದ ಶೀಟ್ ಹಾಗೂ ಪ್ಲಾಸ್ಟಿಕ್ ಕವರ್ ಬಳಸಿ ಟೆಂಟ್ ನಿರ್ಮಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಒಣ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ದುರ್ಗಂಧ ಹರಡುತ್ತಿದ್ದಾರೆ. ಸರಿಯಾಗಿ ಕೂರಲು ಸಾಧ್ಯವಾಗದಂಥ ಟೆಂಟ್ಗಳಲ್ಲೇ ಸಂಸಾರ ಸಾಗಿಸುತ್ತಿರುವ ವಲಸಿಗರು ಸುಮಾರು ವರ್ಷಗಳಿಂದ ಕಸದೊಟ್ಟಿಗೆ ಬದುಕು ಸಾಗಿಸುತ್ತಿದ್ದಾರೆ. ಇದ್ಯಾವುದಕ್ಕೂ ಬಿಬಿಎಂಪಿಯ ಪರವಾನಗಿ ಪಡೆಯದೇ ಅಕ್ರಮ ಚಟುವಟಿಕೆ ಮಾಡುತ್ತಿದ್ದಾರೆ.
ರಸ್ತೆಗಳು, ಖಾಲಿ ಪ್ರದೇಶದಲ್ಲಿನ ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯವನ್ನು ಆಯ್ದು ಅವುಗಳನ್ನು ವಿಂಗಡಿಸಿ ಮಾರುವ ವೃತ್ತಿ ನಡೆಸುತ್ತಿರುವ ವಲಸಿಗರು ಮಾರಾಟವಾಗದ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಾರೆ. ಇದರಿಂದಾಗಿ ಅನೇಕ ಕೆರೆಗಳು ಕಲುಷಿತವಾಗಿ ಸರ್ವನಾಶದ ಅಂಚಿಗೆ ತಲುಪಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ. ಆದರೂ ಸ್ಥಳೀಯ ಬಿಬಿಎಂಪಿ ಆರೋಗ್ಯ ಇಲಾಖೆ ಇತ್ತ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಮೌನದ ಹಿಂದೆ ಅನುಮಾನ:
ಕಸ ವಿಲೇವಾರಿ ಸ್ಥಳದ ಸುತ್ತಮುತ್ತಲು ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಚರ್ಮ ರೋಗ, ಅಲರ್ಜಿ, ಸೊಂಕು ರೋಗಗಳು ಹರಡುವ ಭೀತಿಯಲ್ಲಿ ಜನರು ಬದುಕುತ್ತಿದ್ದಾರೆ. ಇದೆಲ್ಲಾ ಕಣ್ಣಿಗೆ ಕಾಣುತ್ತಿದ್ದರೂ ಸಂಭಂದಪಟ್ಟ ಬಿಬಿಎಂಪಿ, ಪರಿಸರ ಮಾಲಿನ್ಯ ಮಂಡಳಿ ಹಾಗೂ ಪೋಲಿಸ್ ಇಲಾಖೆಯ ದಿವ್ಯ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕ್ರಮಕ್ಕೆ ಸ್ಥಳೀಯರ ಆಗ್ರಹ:
ಕಸದ ಸಮಸ್ಯೆಯಿಂದ ನಾವು ಮತ್ತು ನಮ್ಮ ಮಕ್ಕಳು ಇಲ್ಲಿ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಕ್ರಮ ವಲಸಿಗರು ಉಳಿದುಕೊಳ್ಳಲು ಮನೆ ನಿರ್ಮಿಸಿಕೊಟ್ಟವರು, ಜಾಗ ಬಾಡಿಗೆ ನೀಡಿದವರು, ಕಸ ವಿಲೇವಾರಿ ಘಟಕದ ಮಾಲೀಕರು ಹಾಗೂ ಸರ್ಕಾರಿ ಸೌಲಭ್ಯ ಒದಗಿಸಿಕೊಟ್ಟ ಏಜೆಂಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರೀಕರು ಆಗ್ರಹಿಸಿದ್ದಾರೆ.
ವಲಸಿಗರಿಗೆ ಬಿಬಿಎಂಪಿ ಆಟೋ, ಪಕ್ಷಗಳ ಸಾಥ್
ಬಾಂಗ್ಲಾದೇಶದ ಅಕ್ರಮ ವಲಸಿಗರು ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳ ವಿಳಾಸಗಳಿರುವ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಭಾರತೀಯರಂತೆ ಬಿಂಬಿಸಿಕೊಳ್ಳುತ್ತಾರೆ. ಈ ಕಸದ ಮಾಫಿಯಾದಲ್ಲಿ ದೊಡ್ಡ ಜಾಲವೇ ಸಕ್ರಿಯವಾಗಿದ್ದು, ಟೀಕೆದಾರ್ (ಮೇಸ್ತ್ರಿ) ನೇತೃತ್ವದಲ್ಲಿ ಕಸ ವಿಲೇವಾರಿ ನಡೆಯುತ್ತದೆ. ಇದಕ್ಕೆ ಬಿಬಿಎಂಪಿ ಆಟೋಗಳು ಸಹ ಸಾಥ್ ನೀಡುತ್ತಿವೆ. ಅಲ್ಲದೆ, ವಲಸಿಗರ ಬೆನ್ನಿಗೆ ಸ್ಥಳೀಯ ಮುಖಂಡರ ತಂಡ ನಿಂತಿದ್ದು, ಒಂದು ಪಕ್ಷದ ಮತ ಬ್ಯಾಂಕ್ ಆಗಿರುವ ಈ ಅಕ್ರಮ ವಲಸಿಗರನ್ನು ರಾಜಕೀಯ ಪಕ್ಷಗಳು ರಕ್ಷಿಸುತ್ತಿದೆ ಎನ್ನಲಾಗಿದೆ.