ಮೂಲದಲ್ಲೇ 4 ಬಗೆಯಲ್ಲಿ ಕಸ ವಿಂಗಡಿಸಿ ನೀಡಬೇಕು

KannadaprabhaNewsNetwork |  
Published : May 23, 2026, 01:30 AM IST
22ಕೆಡಿವಿಜಿ1-ದಾವಣಗೆರೆ ಮಹಾ ನಗರ ಪಾಲಿಕೆಯ ಒಂದು ನೋಟ. | Kannada Prabha

ಸಾರಾಂಶ

ದಾವಣಗೆರೆ ಮಹಾನಗರವನ್ನು ಸ್ವಚ್ಛ, ತ್ಯಾಜ್ಯಮುಕ್ತ ಹಾಗೂ ಸ್ವಸ್ಥ ನಗರವನ್ನಾಗಿಸಲು ಸಾರ್ವಜನಿಕರು ತಮ್ಮ ಮನೆ ಅಥವಾ ಉದ್ದಿಮೆಗಳಲ್ಲಿ ಉತ್ಪತ್ತಿ ಆಗುವಂತಹ ಘನತ್ಯಾಜ್ಯವನ್ನು ಕಡ್ಡಾಯವಾಗಿ ಮೂಲದಲ್ಲೇ 4 ಬಗೆಯಲ್ಲಿ ಕಸ ವಿಂಗಡಿಸಿ, ಪಾಲಿಕೆಯ ಕಸದ ಗಾಡಿಗೆ ನೀಡಬೇಕು ಎಂದು ಪಾಲಿಕೆ ಆಯುಕ್ತ ಎನ್.ಮಹಾಂತೇಶ ಮಹಾಜನತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

- ರಸ್ತೆ, ಚರಂಡಿ, ಖಾಲಿ ಸೈಟ್‌ನಲ್ಲಿ ಕಸ ಎಸೆದರೆ, ಬೆಂಕಿ ಹಚ್ಚಿದರೆ ದಂಡ, ಕ್ರಿಮಿನಲ್ ಕೇಸ್‌: ಪಾಲಿಕೆ ಆಯುಕ್ತ ಎಚ್ಚರಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಮಹಾನಗರವನ್ನು ಸ್ವಚ್ಛ, ತ್ಯಾಜ್ಯಮುಕ್ತ ಹಾಗೂ ಸ್ವಸ್ಥ ನಗರವನ್ನಾಗಿಸಲು ಸಾರ್ವಜನಿಕರು ತಮ್ಮ ಮನೆ ಅಥವಾ ಉದ್ದಿಮೆಗಳಲ್ಲಿ ಉತ್ಪತ್ತಿ ಆಗುವಂತಹ ಘನತ್ಯಾಜ್ಯವನ್ನು ಕಡ್ಡಾಯವಾಗಿ ಮೂಲದಲ್ಲೇ 4 ಬಗೆಯಲ್ಲಿ ಕಸ ವಿಂಗಡಿಸಿ, ಪಾಲಿಕೆಯ ಕಸದ ಗಾಡಿಗೆ ನೀಡಬೇಕು ಎಂದು ಪಾಲಿಕೆ ಆಯುಕ್ತ ಎನ್.ಮಹಾಂತೇಶ ಮಹಾಜನತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಸವನ್ನು ಮೂಲದಲ್ಲೇ 4 ಬಗೆಯಲ್ಲಿ ಕಡ್ಡಾಯವಾಗಿ ವಿಂಗಡಿಸಿ, ನಿಮ್ಮ ಮನೆ ಅಥವಾ ಉದ್ದಿಮೆಗಳ ಮುಂದೆ ಬರುವ ಪಾಲಿಕೆ ಕಸ ಸಂಗ್ರಹದ ವಾಹನಗಳಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಿರ್ಲಕ್ಷ್ಯ, ಅಸಡ್ಡೆ ತೋರಬಾರದು. ದಾವಣಗೆರೆ ಜಿಲ್ಲಾ ಕೇಂದ್ರವನ್ನು ಸ್ವಚ್ಛ, ತ್ಯಾಜ್ಯಮುಕ್ತ ಹಾಗೂ ಸ್ವಸ್ಥ ನಗರವನ್ನಾಗಿಸಲು ಪಾಲಿಕೆ ಜೊತೆಗೆ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.

ತ್ಯಾಜ್ಯವನ್ನು ಪ್ರಮುಖವಾಗಿ 4 ಬಗೆಯಲ್ಲಿ ಮೂಲದಲ್ಲೇ ವಿಂಗಡಿಸಿ, ನೀಡುವುದು ಕಡ್ಡಾಯವಾಗಿದೆ. ಕೊಳೆಯುವ ಹಸಿ ತ್ಯಾಜ್ಯ, ಕೊಳೆಯದ ಒಣ ತ್ಯಾಜ್ಯ (ಮರು ಬಳಕೆಗೆ ಯೋಗ್ಯ ಹಾಗೂ ಯೋಗ್ಯವಲ್ಲದ ದಹನಕಾರಿ ತ್ಯಾಜ್ಯ), ಸ್ಯಾನಿಟರಿ ತ್ಯಾಜ್ಯ (ಬಳಸಿದ ತಕ್ಷಣವೇ ಕಂಪನಿ ಒದಗಿಸಿದ ಪೌಚ್ ಅಥವಾ ಪಾಲಿಕೆ ಸೂಚಿಸಿದ ರೀತಿಯಲ್ಲಿ) ಸುತ್ತಿ ನೀಡಬೇಕು, ವಿಶೇಷ ಆರೈಕೆ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಭಾಗಿಸಿಯೇ ನೀಡುವುದು ಇನ್ನು ಕಡ್ಡಾಯ ಎಂದು ಹೇಳಿದ್ದಾರೆ.

ಬೃಹತ್ ತ್ಯಾಜ್ಯ ಉತ್ಪಾದಕರೂ ಪಾಲಿಕೆ ಸೂಚನೆ ಕಡ್ಡಾಯ ಪಾಲಿಸಬೇಕು. ಹೋಟೆಲ್‌, ಕಲ್ಯಾಣ ಮಂಟಪ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ವಸತಿ ಸಮುಚ್ಛಯಗಳು ದಿನವೊಂದಕ್ಕೆ 100 ಕೆ.ಜಿ.ಗಿಂತಲೂ ಹೆಚ್ಚು ತ್ಯಾಜ್ಯ ಉತ್ಪಾದಿಸಿದಲ್ಲಿ ಅಥವಾ 20 ಸಾವಿರ ಚದರ ಮೀಟರ್‌ಗಿಂದ ಹೆಚ್ಚಿನ ವಿಸ್ತೀರ್ಣ ಹೊಂದಿದ್ದಲ್ಲಿ ಅಥವಾ ದಿನಕ್ಕೆ 40 ಸಾವಿರ ಲೀಟರ್ ನೀರು ಬಳಕೆ ಮಾಡುತ್ತಿದ್ದಲ್ಲಿ ಅಂತಹವರನ್ನು ಬೃಹತ್ ತ್ಯಾಜ್ಯ ಉತ್ಪಾದಕರೆಂದು ಪರಿಗಣಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಅಂತಹ ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮ ಆವರಣದಲ್ಲೇ ಹಸಿ ಕಸವನ್ನು ಸಂಸ್ಕರಿಸಬೇಕು. ಹೀಗೆ ಸಂಸ್ಕರಿಸಿ, ಕಾಂಪೋಸ್ಟ್ ಗೊಬ್ಬರ, ಬಯೋಗ್ಯಾಸ್ ಉತ್ಪಾದನೆ ಮಾಡಬೇಕು. ​ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರೀಕೃತ ಪೋರ್ಟಲ್‌ನಲ್ಲಿ ಬಿಡಬ್ಲ್ಯುಜಿ ಎಂಬುದಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಇದನ್ನು ​ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಮತ್ತು ದಂಡವನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ರಸ್ತೆ, ಚರಂಡಿ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುವುದು ಅಥವಾ ಕಸಕ್ಕೆ ಬೆಂಕಿ ಹಚ್ಚುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಾಲಿಕೆ ನಿಯಮ, ಸೂಚನೆ, ಆದೇಶಗಳನ್ನು ಉಲ್ಲಂಘಿಸುವವರಿಗೆ ಘನತ್ಯಾಜ್ಯ ನಿರ್ವಹಣೆ ಉಪ ವಿಧಿಗಳನ್ವಯ ದಂಡ ವಿಧಿಸಲಾಗುವುದು. ಅಂತಹ ತಪ್ಪು ಪುನಃ ಮರುಕಳಿಸಿದರೆ ಪರಿಸರ ಸಂರಕ್ಷಣಾ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಸಹ ದಾಖಲು ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಎನ್. ಮಹಾಂತೇಶ ಎಚ್ಚರಿಸಿದ್ದಾರೆ.

- - -

(ಬಾಕ್ಸ್‌)

* ಜನರು ಪಾಲಿಸಬೇಕಾದ ಇತರೆ ಪ್ರಮುಖ ನಿಯಮ - ​ಬಲ್ಕೀ ತ್ಯಾಜ್ಯಗಳಾದ ತೋಟಗಾರಿಕೆ ಕಸ, ಹಳೆ ಹಾಸಿಗೆ, ದಿಂಬು, ಹಾಸಿಗೆ, ಹೊದಿಕೆ, ಚಾಪೆಗಳನ್ನು ಪ್ರತ್ಯೇಕವಾಗಿ ಹಸ್ತಾಂತರಿಸಬೇಕು.

- ಪಾಲಿಕೆ ನಿಗದಿಪಡಿಸಿದ ಮಾಸಿಕ ಬಳಕೆದಾರರ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.

- ​100ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ಆಯೋಜಿಸುವ ಮುನ್ನ ಪಾಲಿಕೆಗೆ ಮಾಹಿತಿ ನೀಡಿ, ಅಗತ್ಯ ಶುಲ್ಕ ಪಾವತಿಸಿ ತ್ಯಾಜ್ಯ ಸಂಗ್ರಹಣಾ ವಾಹನಗಳ ಸೇವೆ ಪಡೆಯಬೇಕು.

- ​ಕಸದ ಪ್ರಮಾಣ ತಗ್ಗಿಸಲು ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣವಾಗಿ ನಿಲ್ಲಿಸಬೇಕು.

- - -

(ಕೋಟ್‌) ದಾವಣಗೆರೆ ​ನಗರದ ಸ್ವಚ್ಛತೆಯ ಹಿತದೃಷ್ಟಿಯಿಂದ ಸಾರ್ವಜನಿಕರು, ಉದ್ದಿಮೆದಾರರು ಹಾಗೂ ಬೀದಿಬದಿ ವ್ಯಾಪಾರಿಗಳು ಪಾಲಿಕೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು. ಪಾಲಿಕೆ ನಿಯಮ, ಆದೇಶ, ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ, ಪಾಲಿಕೆ ನಿಯಮಗಳ ಅನುಸಾರ ಸೂಕ್ತ ಕಾನೂನು ಕ್ರಮ, ದಂಡ, ಕ್ರಿಮಿನಲ್ ಕೇಸ್ ಸಹ ದಾಖಲಿಸಲು ಪಾಲಿಕೆ ಮುಂದಾಗಲಿದೆ.

- ಎನ್.ಮಹಾಂತೇಶ, ಆಯುಕ್ತ, ದಾವಣಗೆರೆ ಮಹಾನಗರ ಪಾಲಿಕೆ.

- - -

-22ಕೆಡಿವಿಜಿ2: ಎನ್.ಮಹಾಂತೇಶ, ಪಾಲಿಕೆ ಆಯುಕ್ತ.

-22ಕೆಡಿವಿಜಿ1-ದಾವಣಗೆರೆ ಮಹಾ ನಗರ ಪಾಲಿಕೆಯ ಒಂದು ನೋಟ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತೋತ್ಸವದಲ್ಲಿ ವಿವಿಧ ಕಲಾವಿದರಿಂದ ನಾದ ಝೇಂಕಾರ
ಉತ್ತಮ ಸಮಾಜ ನಿರ್ಮಾಣವೇ ಭೀಮ್‌ ಆರ್ಮಿ ಉದ್ದೇಶ