ಉದ್ಯಾನ ನಗರಿ ಈಗ ಅಕ್ಷರಶಃ ಬೆಂದಕಾಳೂರು

KannadaprabhaNewsNetwork |  
Published : Apr 18, 2026, 03:45 AM IST
...ಉದ್ಯಾನ ನಗರಿ ಈಗ ಅಕ್ಷರಶಃ ಬೆಂದಕಾಳೂರು! | Kannada Prabha

ಸಾರಾಂಶ

ಉದ್ಯಾನ ನಗರಿ, ಹವಾನಿಯಂತ್ರಿತ ನಗರ ಎಂಬ ಖ್ಯಾತಿವೆತ್ತ ಬೆಂದಕಾಳೂರು ಅಕ್ಷರಶಃ ಬಿಸಿಲಿನ ತಾಪಕ್ಕೆ ಬೇಯುತ್ತಿದ್ದು, ಹೀಟ್‌ ಸ್ಟ್ರೋಕ್‌ಗೆ ತುತ್ತಾಗಿ ನಗರದ 10 ಮಂದಿ ನಾಗರೀಕರು ಅಸ್ವಸ್ಥರಾಗಿದ್ದಾರೆ ಎಂದು ಪಾಲಿಕೆಯ ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಉದ್ಯಾನ ನಗರಿ, ಹವಾನಿಯಂತ್ರಿತ ನಗರ ಎಂಬ ಖ್ಯಾತಿವೆತ್ತ ಬೆಂದಕಾಳೂರು ಅಕ್ಷರಶಃ ಬಿಸಿಲಿನ ತಾಪಕ್ಕೆ ಬೇಯುತ್ತಿದ್ದು, ಹೀಟ್‌ ಸ್ಟ್ರೋಕ್‌ಗೆ ತುತ್ತಾಗಿ ನಗರದ 10 ಮಂದಿ ನಾಗರೀಕರು ಅಸ್ವಸ್ಥರಾಗಿದ್ದಾರೆ ಎಂದು ಪಾಲಿಕೆಯ ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಮಾರ್ಚ್ 1ರಿಂದ ಏಪ್ರಿಲ್ 16ರವರೆಗೆ ಬಿಸಿಲಿನಿಂದಾಗಿ ನಗರದಲ್ಲಿ 10 ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರಿಗೆ ಪಾಲಿಕೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಸಂತೈಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟು ಮಂದಿ ಅಸ್ವಸ್ಥರಾಗಿದ್ದು, ಇವುಗಳನ್ನು ಶಂಕಿತ ಹೀಟ್ ಸ್ಟ್ರೋಕ್ ಪ್ರಕರಣಗಳೆಂದು ಪರಿಗಣಿಸಲಾಗಿದೆ.

ಈ ಸಂಬಂಧ ಪಾಲಿಕೆ ತೀವ್ರ ಕಟ್ಟೆಚ್ಚರ ವಹಿಸಿದೆ. ಪಾಲಿಕೆಯ ಆರೋಗ್ಯ ಅಧಿಕಾರಿಗಳು ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳುವ ವಿಧಾನಗಳ ಕುರಿತು ನಗರ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವಂತೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯ 369 ವಾರ್ಡ್ ಗಳ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾಧಿಕಾರಿಗಳು ಬಿಸಿಲಿನ ಸಮಯದಲ್ಲಿ ಆರೋಗ್ಯ ಕೇಂದ್ರಗಳಲ್ಲಿಯೇ ಇದ್ದು ಬಿಸಿಲಿನ ತಾಪದಿಂದ ಬಳಲಿ ಬರುವ ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸಿರಾಜ್ ಮದನಿ ಕನ್ನಡಪ್ರಭಕ್ಕೆ ತಿಳಿಸಿದರು.ಈ ಪ್ರಕರಣಗಳಲ್ಲಿ ಜನರು ಅವರ ದೇಹದಲ್ಲಿ ನೀರಿನ ಅಂಶ ಕಡಿಮೆ ಇದ್ದು ದೇಹ ಡಿಹೈಡ್ರೇಟ್ ಆಗಿರುವುದು ಕಂಡು ಬಂದಿದೆ. ಕೆಲವರು ಬಿಸಿಲಿನ ಸಮಯದಲ್ಲಿ ನಿಲುಗಡೆ ಮಾಡಿರುವ ವಾಹನಗಳಲ್ಲಿ ಕುಳಿತುಕೊಂಡು ಬಿಸಿಲಿನ ತಾಪಕ್ಕೆ ಸಿಲುಕಿರುವುದು ಕಂಡು ಬಂದಿದೆ. ತಲೆಸುತ್ತು, ಸುಸ್ತಾಗುವುದು, ಕಣ್ಣು ಮಂಜಾಗುವುದು ಕಂಡು ಬಂದಲ್ಲಿ ಕೂಡಲೆ ಹತ್ತಿರದ ಪಾಲಿಕೆಯ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆಯಬಹುದು ಎಂದು ಅಧಿಕಾರಿ ತಿಳಿಸಿದರು.

ಜಾಗೃತಿ ಭಿತ್ತಿಪತ್ರ: ಇಂತಹ ಸಮಯದಲ್ಲಿ ಎಳನೀರು, ಮಜ್ಜಿಗೆ ಸೇವಿಸುವುದು, ತಂಪಾದ ಪಾನೀಯ ಸೇವಿಸುವುದು ಉತ್ತಮ. ಈ ಸಂದೇಶಗಳಿರುವ ಭಿತ್ತಿ ಪತ್ರಗಳನ್ನು 143 ಪ್ರಾಥಮಿಕ ಆರೋಗ್ಯ ಕೇಂದ್ರ, 242 ನಮ್ಮ ಕ್ಲಿನಿಕ್ ಗಳಲ್ಲಿ ಬಿತ್ತರಿಸಲಾಗಿದೆ. ಜನತೆ ಅನುಸರಿಸಬೇಕಾದ ಕ್ರಮಗಳು

ನಗರದಲ್ಲಿ ಬಿಸಿಲು ಹೆಚ್ಚಾದ ಸಮಯದಲ್ಲಿ ನೀರು ಹೆಚ್ಚು ಸೇವಿಸಬೇಕು, ಎಳನೀರು, ಮಜ್ಜಿಗೆ ಸೇವಿಸುವುದು, ತಂಪಾದ ಪಾನೀಯ ಸೇವಿಸುವುದು ಉತ್ತಮ, ಜಿಮ್ ಗಳಲ್ಲಿ ಹೆಚ್ಚು ವ್ಯಾಯಾಮ ಮಾಡುವುದು ಸೂಕ್ತವಲ್ಲ. ಹೆಚ್ಚು ಕಾಟನ್ ಬಟ್ಟೆಗಳನ್ನು ಧರಿಸುವುದು ಉತ್ತಮ. ಬಿಸಿಲಿನಲ್ಲಿ ನಿಲುಗಡೆ ಮಾಡಿರುವ ವಾಹನಗಳ ಮೇಲೆ ಗಂಟೆಗಟ್ಟಲೆ ಕುಳಿತುಕೊಳ್ಳುವುದು ಹೀಟ್ ಸ್ಟ್ರೋಕ್ ಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನಿಂದ ಪಾರಾಗಲು ಪೌರಕಾರ್ಮಿಕರಿಗೆ ಕೂಲಿಂಗ್ ಕಿಟ್
ಕುಡಿದು ಟೆಸ್ಟ್‌ ಡ್ರೈವ್‌ ಕಾರು ಚಲಾಯಿಸಿ ವಾಹನಗಳಿಗೆ ಗುದ್ದಿಸಿದ್ದವನಿಗೆ ಗೂಸಾ