ಅಂಕೋಲಾ: ನಿರಂತರ ಮಳೆ ಹಾಗೂ ಗಂಗಾವಳಿ ನದಿಯ ಅಪಾರ ಹರಿವಿನ ನಡುವೆ ನದಿಯಲ್ಲಿ ತೇಲಿ ಹೋದ ಗ್ಯಾಸ್ ಟ್ಯಾಂಕರ್ ಅನ್ನು ಸುರಕ್ಷಿತವಾಗಿ ದಡಕ್ಕೆ ತಂದು ಟ್ಯಾಂಕರ್ನಲ್ಲಿದ್ದ ಅನಿಲ ಲೀಕೇಜ್ ಆಗದ ರೀತಿಯಲ್ಲಿ ಮಂಗಳೂರಿನಿಂದ ಬಂದ ವಿಶೇಷ ಘಟಕದವರು ಸುರಕ್ಷಿತ ನಿಯಂತ್ರಿತ ವಿಧಾನಗಳಿಂದ ಗ್ಯಾಸ್ಅನ್ನು ನೀರಿನಲ್ಲಿ ಮಿಶ್ರಣ ಮಾಡಿ ಅಪಾಯವಾಗದ ರೀತಿಯಲ್ಲಿ ಖಾಲಿ ಮಾಡುವ ಕಾರ್ಯಾಚರಣೆ ನಡೆಸಿದರು.ಎಚ್ಪಿ ಕಂಪನಿಗೆ ಸೇರಿದ ಅಡುಗೆ ಅನಿಲದ ಗ್ಯಾಸ್ ಟ್ಯಾಂಕರ್ ಇದಾಗಿದ್ದು, ಕಂಪನಿಯ ಜನರಲ್ ಮ್ಯಾನೇಜರ್ ಚೆನೈನಿಂದ ಆಗಮಿಸಿದ್ದು, ಇವರ ನೇತೃತ್ವದಲ್ಲಿ ಗ್ಯಾಸ್ ಟ್ಯಾಂಕರ್ ರಕ್ಷಣೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.ಎಚ್ಪಿ ಕಂಪನಿಯ ಸ್ಟಾಂಡರ್ಡ್ ಅಪರೇಟಿಂಗ್ ಸಿಸ್ಟಮ್ (ಎಸ್ಒಪಿ) ಪ್ರಕಾರ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಗುರುವಾರ ಬೆಳಗ್ಗೆ 7 ಗಂಟೆಯಿಂದ ಮೊದಲು ನದಿಯಲ್ಲಿ ತೇಲಿ ಹೋದ ಟ್ಯಾಂಕರ್ಅನ್ನು ಸಗಡಗೇರಿ ನದಿಯ ದಡಕ್ಕೆ ರೋಪ್ ಮೂಲಕ ಎಳೆದು ತರುವ ಕಾರ್ಯಾಚರಣೆ ನಡೆಯಿತು. ಎಲ್ಲ ತಾಂತ್ರಿಕ ಹಾಗೂ ವೈಜ್ಞಾನಿಕ ಕ್ರಮಗಳು ನಡೆದ ಮೇಲೆ ಮಧ್ಯಾಹ್ನ 2 ಗಂಟೆಯಿಂದ ಗ್ಯಾಸ್ಅನ್ನು ನೀರಲ್ಲಿ ಮಿಶ್ರಣ ಮಾಡಿ ನಾಶಪಡಿಸುವ ಪ್ರಕ್ರಿಯೆ ನಡೆದಿದೆ.ಪರಿಣಿತರ ಮಾರ್ಗದರ್ಶನದಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಜನರನ್ನು ದೂರ ಸರಿಸಿ ಕಾರ್ಯಾಚರಣೆ ನಡೆಯಿತು. ಎಚ್ಪಿ ಕಂಪನಿಯ ಸ್ಟಾಂಡರ್ಡ್ ಅಪರೇಟಿಂಗ್ ಸಿಸ್ಟಮ್ನ 20 ಪರಿಣಿತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕದ 4 ವಾಹನಗಳು ಸ್ಥಳದಲ್ಲಿ ಕಾಯ್ದಿಡಲಾಗಿತ್ತು. ಗುರುವಾರ ರಾತ್ರಿ 8 ಗಂಟೆಗೆ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ಲಭ್ಯವಾಗಿದೆ.ಈ ಕಾರ್ಯಾಚರಣೆಗಾಗಿಯೇ ಸಗಡಗೇರಿ ಗ್ರಾಮಸ್ಥರನ್ನು ಸಂಪೂರ್ಣವಾಗಿ ಸ್ಥಳಾಂತರಿಸಿ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಗುರುವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗುಡ್ಡ ಕುಸಿಯುವ ಲಕ್ಷಣ ಕಂಡುಬಂದಿದ್ದರಿಂದ ಸುಮಾರು 20 ನಿಮಿಷ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಸ್ಥಳದಲ್ಲಿದ್ದ ಭಟ್ಕಳದ ಉಪವಿಭಾಗಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಚುರುಕು ಪಡೆದುಕೊಂಡಿತು.