ಗೌಡಗೆರೆ ಚಾಮುಂಡೇಶ್ವರಿದೇವಿ ಅದ್ಧೂರಿ ರಥೋತ್ಸವ

KannadaprabhaNewsNetwork |  
Published : Jul 25, 2025, 12:31 AM IST
ಪೊಟೋ೨೪ಸಿಪಿಟಿ೧: ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರಕ್ಕೆ ಹರಿದು ಬಂದ ಜನಸಾಗರ. | Kannada Prabha

ಸಾರಾಂಶ

ಆಷಾಢ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಭೀಮನ ಅಮಾವಾಸ್ಯೆಯಂದು ಸಹ ಲಕ್ಷಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಬುಧವಾರ ಮಧ್ಯರಾತ್ರಿಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಕೇವಲ ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಕ್ಷೇತ್ರದಲ್ಲಿ ನಡೆದ ಭೀಮನ ಅಮಾವಾಸ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಾ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ತಾಲೂಕಿನ ಗೌಡಗೆರೆ ಗ್ರಾಮದ ಶ್ರೀಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ರಥೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.

ಭೀಮನ ಅಮಾವಾಸ್ಯೆ ಪ್ರಯುಕ್ತ ಗುರುವಾರ ಮಧ್ಯರಾತ್ರಿ ಎರಡು ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಅಮ್ಮನವರ ಮೂಲ ಮೂರ್ತಿಗೆ ಅಭಿಷೇಕ ಮಾಡಲು ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅಮಾವಾಸ್ಯೆ ಪ್ರಯುಕ್ತ ದೇವಿಗೆ ಮೂರು ಮಹಾಮಂಗಳಾರತಿ ನಡೆದವು. ಮುಂಜಾನೆ ೪.೨೮ಕ್ಕೆ ತಾಯಿಗೆ ಮೊದಲ ಮಹಾ ಆರತಿ ಜರುಗಿತು. ಬೆಳಗ್ಗೆ ೭.೨೮ಕ್ಕೆ 2ನೇ ಮಂಗಳಾರತಿ ಹಾಗೂ ಮಧ್ಯಾಹ್ನ ೧೨.೨೮ ಗಂಟೆಗೆ 3ನೇ ಮಹಾಮಂಗಳಾರತಿ ಜರುಗಿತು. ಸಹಸ್ರಾರು ಭಕ್ತರು ದೇವಿಯ ದೀಪಾರತಿಯನ್ನು ಕಣ್ತುಂಬಿಕೊಂಡರು.

ತಾಯಿಗೆ ವಿಶೇಷ ಅಭಿಷೇಕ, ಅಲಂಕಾರ, ನೂರೆಂಟು ಹಾಲರವಿ ಸೇವೆ ನಡೆಯಿತು. ಮಧ್ಯಾಹ್ನ ರಥೋತ್ಸವಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು. ಗರ್ಭಗುಡಿಯಲ್ಲಿರುವ ಅಮ್ಮನವರ ಮೂಲ ವಿಗ್ರಹವನ್ನು ರಥದಲ್ಲಿ ಕುಳ್ಳರಿಸಿ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ರಥೋತ್ಸವಕ್ಕೆ ಭಕ್ತರು ಹಣ್ಣು ದವನ ಎಸೆದು ಹರಕೆ ಸಲ್ಲಿಸಿದರು. ನವ ವಧು-ವರರು ರಥೋತ್ಸವದಲ್ಲಿ ಹೆಚ್ಚಾಗಿ ಭಾಗವಹಿಸಿದ್ದು, ಈ ಬಾರಿಯ ವಿಶೇಷವಾಗಿತ್ತು.

ಹರಿದುಬಂದ ಭಕ್ತಸಾಗರ:

ಆಷಾಢ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಭೀಮನ ಅಮಾವಾಸ್ಯೆಯಂದು ಸಹ ಲಕ್ಷಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಬುಧವಾರ ಮಧ್ಯರಾತ್ರಿಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಕೇವಲ ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಕ್ಷೇತ್ರದಲ್ಲಿ ನಡೆದ ಭೀಮನ ಅಮಾವಾಸ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಾ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಕೃತಕ ಜಲಪಾತ ಲೋಕಾರ್ಪಣೆ:

ಭೀಮನ ಅಮಾವಾಸ್ಯೆ ಪ್ರಯುಕ್ತ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕೃತಕ ಜಲಪಾತವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಿದರು. ದೇವಿಯ ಹಿಂಭಾಗದಲ್ಲಿರುವ ಕೃತಕ ಪರ್ವತದ ತುದಿಯಿಂದ ನೀರು ಧುಮ್ಮಿಕ್ಕಿ ಹರಿಯುವ ವ್ಯವಸ್ಥೆ ಭಕ್ತರ ಕಣ್ಮನ ಸೆಳೆಯಿತು. ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಶೀಲಾ ಯೋಗೇಶ್ವರ್, ತಹಸೀಲ್ದಾರ್ ಗಿರೀಶ್, ಡಿವೈಎಸ್ಪಿ ಗಿರಿ ಇತರರು ಉಪಸ್ಥಿತರಿದ್ದರು.‘ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರ ನಮ್ಮ ಜಿಲ್ಲೆಗೆ ಒಂದು ಕಿರೀಟವಿದ್ದಂತೆ. ಲಕ್ಷಾಂತರ ಮಂದಿಯ ಆರಾಧಾನಾ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ನೆರವು ಕೊಡಿಸುವ ಜವಾಬ್ದಾರಿ ವಹಿಸುತ್ತೇನೆ. ಈಗಾಗಲೇ ಚನ್ನಪಟ್ಟಣದಿಂದ ಕ್ಷೇತ್ರಕ್ಕೆ ಬರುವ ಮುಖ್ಯ ರಸ್ತೆ ಡಾಂಬರೀಕರಣ ಹಾಗೂ ಅಭಿವೃದ್ಧಿಗೆ ೩೨ ಕೋಟಿ ರು. ಹಣ ಮಂಜೂರು ಮಾಡಿಸಲಾಗಿದೆ. ಇನ್ನುಳಿದ ಅಭಿವೃದ್ಧಿಗೂ ಸಹಕರಿಸುವೆ’.

-ಯೋಗೇಶ್ವರ್‌, ಶಾಸಕರು‘ಪ್ರತಿವರ್ಷವೂ ಭೀಮನ ಅಮಾವಾಸ್ಯೆ ಬಹಳ ವಿಶೇಷವಾಗಿ ನಡೆಯುತ್ತದೆ. ಈ ಬಾರಿ ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಯಾವುದೇ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆ ಸೇರಿ ತಾಲೂಕು ಆಡಳಿತ ಸಹಕಾರ ನೀಡಿದೆ. ಇದಲ್ಲದೇ ಸಾವಿರಾರು ಭಕ್ತರು ಸ್ವಯಂಸೇವಕರಾಗಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕ್ಷೇತ್ರದ ವತಿಯಿಂದ ತುಂಬು ಹೃದಯದ ಧನ್ಯವಾದಗಳು’.

- ಡಾ.ಮಲ್ಲೇಶ್ ಗುರೂಜೀ, ಕ್ಷೇತ್ರದ ಧರ್ಮದರ್ಶಿಗಳು

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್