ಹೂವಿನಹಡಗಲಿ: ಪಟ್ಟಣದ ಶಾಖಾ ಗವಿಸಿದ್ದೇಶ್ವರ ಮಠದ 30ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ, ಭಕ್ತರು ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ, ಶ್ರದ್ಧಾ ಮನೋಭಾವನೆಯಿಂದ ಸೇವೆ ಮಾಡಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ಷಟಸ್ಥಲ ಧ್ವಜಾರೋಹಣ ವೀರಶೈವ ಧರ್ಮದ ಪರಂಪರೆಯಾಗಿದೆ. ಉತ್ತಮ ಕಾರ್ಯ ಮಾಡುವ ಮುನ್ನ ಯಾವುದೇ ವಿಘ್ನಗಳು ಎದುರಾಗದಂತೆ ಸಂಕಲ್ಪ ಮಾಡಲು ಷಟಸ್ಥಲ ಧ್ವಜಾರೋಹಣ ಮಾಡಲಾಗುತ್ತಿದೆ ಎಂದು ಹೇಳುತ್ತಾ, ಷಟಸ್ಥಲಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗವಿಮಠದ ಡಾ.ಹಿರಿ ಶಾಂತವೀರ ಸ್ವಾಮೀಜಿ ಮಾತನಾಡಿ, ಮಠದಲ್ಲಿ ಜಾತ್ರೆಯ ಅಂಗವಾಗಿ ನಿರಂತರ ಕಾರ್ಯಕ್ರಮಗಳು ಜರುಗುತ್ತವೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಕ್ತರ ಸಹಕಾರದಿಂದ ಜಾತ್ರಾ ಮಹೋತ್ಸವ ಯಶಸ್ವಿಯಾಗಲಿ ಎಂದರು.
ಶರಣೆ ನಿಂಬಕ್ಕ ಅಮ್ಮನವರು, ವೀರಶೈವ ಲಿಂಗಾಯತ ಸಮಾಜ ನಗರ ಘಟಕದ ಅಧ್ಯಕ್ಷ ಮುಂಡವಾಡದ ಉಮೇಶ್, ಎ.ಜೆ. ವೀರೇಶ್, ಲೀಲಾ ಆಟವಾಳಗಿ, ಎಚ್.ಕೆ. ಗಂಗಮ್ಮ, ವಾಲಿ ಶೆಟ್ಟರ್ ಮುರಿಗೆಪ್ಪ, ಹಕ್ಕಂಡಿ ಶಿವನಾಗಪ್ಪ, ಎಂ.ಪಿ.ಎಂ. ಕೊಟ್ರಯ್ಯ, ಕೋಡಿಹಳ್ಳಿ ಕೊಟ್ರೇಶ್, ಎಚ್.ಎಂ. ಪಟದಯ್ಯ, ನಜೀರ್ ಸಾಹೇಬ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.