ಗವಿಸಿದ್ಧೇಶ್ವರ ಗುರುಕುಲ ಲೋಕಾರ್ಪಣೆ

KannadaprabhaNewsNetwork |  
Published : May 04, 2026, 02:15 AM IST
ಶ್ರೀ ಗವಿಸಿದ್ಧೇಶ್ವರ ಗುರುಕುಲ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಗಳು ಮಾತನಾಡಿದರು. | Kannada Prabha

ಸಾರಾಂಶ

ವೀರಶೈವ ಲಿಂಗಾಯತ ಮಠಗಳಲ್ಲಿ ಇದುವರೆಗೂ ವಿದ್ಯಾರ್ಥಿಗಳಿಗಾಗಿ ಪ್ರಸಾದ ನಿಲಯ ದೊಡ್ಡ ಸಂಖ್ಯೆಯಲ್ಲಿ ಇವೆ. ಆದರೆ ಮಹಿಳೆಯರ ಶಿಕ್ಷಣಕ್ಕಾಗಿ ವಸತಿಸಹಿತ ಪಿಯು ಕಾಲೇಜು ಪ್ರಾರಂಭಿಸಿದ್ದು ಇದೇ ಮೊದಲು

ಕೊಪ್ಪಳ: ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕನಸಿನ ಕೂಸು, ಕೊಪ್ಪಳದಿಂದ 11 ಕಿಮೀ ದೂರದಲ್ಲಿರುವ ವಿದ್ಯಾರ್ಥಿನಿಯರ ಉಚಿತ ವಸತಿ ಕಾಲೇಜು "ಶ್ರೀ ಗವಿಸಿದ್ಧೇಶ್ವರ ಗುರುಕುಲ " ಆರಂಭವಾಗಿದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿಸಹಿತ ಪಿಯು ಹೈಟೆಕ್ ಕಾಲೇಜನ್ನು ಮಠಾಧೀಶರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಭಾನುವಾರ ಲೋಕಾರ್ಪಣೆ ಮಾಡಲಾಯಿತು.

ವೀರಶೈವ ಲಿಂಗಾಯತ ಮಠಗಳಲ್ಲಿ ಇದುವರೆಗೂ ವಿದ್ಯಾರ್ಥಿಗಳಿಗಾಗಿ ಪ್ರಸಾದ ನಿಲಯ ದೊಡ್ಡ ಸಂಖ್ಯೆಯಲ್ಲಿ ಇವೆ. ಆದರೆ ಮಹಿಳೆಯರ ಶಿಕ್ಷಣಕ್ಕಾಗಿ ವಸತಿಸಹಿತ ಪಿಯು ಕಾಲೇಜು ಪ್ರಾರಂಭಿಸಿದ್ದು ಇದೇ ಮೊದಲು ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಮಾರು 48 ಎಕರೆ ವಿಸ್ತಾರವಾದ ಕ್ಯಾಂಪಸ್‌ನಲ್ಲಿ ₹60 ಕೋಟಿ ವೆಚ್ಚದಲ್ಲಿ ತಲೆ ಎತ್ತಿರುವ ಹೈಟೆಕ್ ವಸತಿ ಕಾಲೇಜು ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತಲೂ ಕಡಿಮೆ ಇಲ್ಲ ಎನ್ನುವಂತಿದೆ.

ವಿದ್ಯಾರ್ಥಿನಿಯರಿಗೆ ಇಲ್ಲಿ ಪಿಯು ವಿಜ್ಞಾನ, ಕಲಾ ವಿಭಾಗ ಇದ್ದು, ಜತೆಗೆ ಸಿಇಟಿ, ನೀಟ್, ಜೆಇಇ ಸೇರಿದಂತೆ ಹಲವಾರು ವೃತ್ತಿ ತರಬೇತಿ ಕೋರ್ಸ್ ಉಚಿತ ಕೋಚಿಂಗ್ ಸಹ ಲಭ್ಯವಿರುತ್ತದೆ. ಕಾಲೇಜು, ತರಬೇತಿ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಆದರೆ, ವಿದ್ಯಾರ್ಥಿನಿಯರು ಊಟದ ವೆಚ್ಚ ಭರಿಸಬೇಕಾಗುತ್ತದೆ.

ವಿದ್ಯಾಕಾಶಿಯಾಗಲಿ: ಸಂಸದ ಬಸವರಾಜ ಬೊಮ್ಮಾಯಿ ಗುರುಕುಲ ಲೋಕಾರ್ಪಣೆ ಮಾಡಿ ಮಾತನಾಡಿ, ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಕೈಗೊಳ್ಳುತ್ತಿರುವ ಶೈಕ್ಷಣಿಕ ಕ್ರಾಂತಿಯಿಂದ ಕೊಪ್ಪಳ ವಿದ್ಯಾಕಾಶಿಯಾಗಲಿದೆ ಎಂದು ಹೇಳಿದರು.

ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಸತತ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದು, ಕೋವಿಡ್ ಸಮಯದಲ್ಲಿ ಅವರ ಸೇವೆ ಅನನ್ಯ ಎಂದರು.

ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಆಶ್ರಯ ಕೋರಿ ಬರುತ್ತಾರೆ. ಆದರೆ, ಅವರಿಗೆ ಅನ್ನ ನೀಡಬಹುದಾದರೂ ಆಶ್ರಯ ನೀಡುವುದು ಕಷ್ಟವಾಗುತ್ತದೆ ಎಂದು ದುಃಖ ವ್ಯಕ್ತಪಡಿಸಿದ್ದರು. ಅದನ್ನು ನೋಡಿದ ನಾನು ತಡಮಾಡದೆ ಸರ್ಕಾರದಿಂದ ಅಲ್ಪಪ್ರಮಾಣದ ನೆರವು ನೀಡಿದ್ದೆ. ಆದರೆ, ಇಷ್ಟು ದೊಡ್ಡ ಪ್ರಮಾಣದ ಶಿಕ್ಷಣ ಸಂಸ್ಥೆಯೊಂದು ಮಹಿಳೆಯರಿಗಾಗಿ ತಲೆ ಎತ್ತಲಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಅವರ ಶುದ್ಧ ಮನಸ್ಸಿನ ಸೇವೆಗಾಗಿ ಅಪಾರ ಪ್ರಮಾಣದ ನೆರವು ಹರಿದುಬರುತ್ತಿದೆ. ಅದರಲ್ಲೂ ಈಗ ಅವರು ಮಹಿಳೆಯರಿಗಾಗಿ ವಸತಿ ಪಿಯು ಕಾಲೇಜು ತೆರೆದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಮಾತನಾಡಿ, ಕೊಪ್ಪಳದಂತಹ ಪ್ರದೇಶದಲ್ಲಿ ಮಹಿಳೆಯರಿಗಾಗಿ ಹೈಟೆಕ್ ಉಚಿತ ಪಿಯು ಕಾಲೇಜು ತೆರೆದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವೀರಶೈವ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಶಿಕ್ಷಣಕ್ಕೆ ಕೊಟ್ಟಷ್ಟು ಕೊಡುಗೆ ಮತ್ಯಾವ ಸಂಸ್ಥೆಯೂ ನೀಡಿಲ್ಲ. ದುರ್ದೈವ ಎಂದರೆ ಅದರಿಂದ ಶಿಕ್ಷಣ ಪಡೆದವರು ಮರಳಿ ಏನು ಕೊಡುವುದು ಬೇಡ, ಕನಿಷ್ಠ ಸ್ಮರಿಸುವಿಕೆಯೂ ಇಲ್ಲದಿರುವುದು ನೋವಿನ ಸಂಗತಿ ಎಂದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಗವಿಸಿದ್ಧೇಶ್ವರ ಮಹಾಸ್ವಾಮೀಜಿ ವಿಶ್ವ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಈಗಾಗಲೇ ಐದು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿರುವ ಅವರು, ಈಗ ವಿದ್ಯಾರ್ಥಿನಿಯರಿಗಾಗಿ ಇಂತಹ ಗುರುಕುಲು ಸ್ಥಾಪಿಸುವುದು ನಿಜಕ್ಕೂ ಶ್ಲಾಘನೀಯ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಐಎಎಸ್ ಟಾಪರ್ ಚಿನ್ಮಯಿ ಪ್ರಶಾಂತ ಮಾತನಾಡಿದರು.

ಸಾನ್ನಿಧ್ಯವನ್ನು ಮುಂಡರಗಿಯ ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ವಹಿಸಿದ್ದರು.

ಸಂಸದ ರಾಜಶೇಖರ ಹಿಟ್ನಾಳ, ಹಾಲಪ್ಪ ಆಚಾರ್, ಶರಣೇಗೌಡ ಪಾಟೀಲ್, ಸಂಗಣ್ಣ ಕರಡಿ, ಜಿ. ವೀರಪ್ಪ ಕೆಸರಟ್ಟಿ, ಪರಣ್ಣ ಮುನವಳ್ಳಿ, ಕೆ. ಶರಣಪ್ಪ, ಸಿ.ವಿ. ಚಂದ್ರಶೇಖರ, ಮಲ್ಲಿಕಾರ್ಡುನ ನಾಗಪ್ಪ, ಶಿವರಾಮಗೌಡ, ಡಾ. ಕೆ. ಬಸವರಾಜ, ಬಸವರಾಜ ದಢೇಸ್ಗೂರು, ಸುರೇಶ ಭೂಮರಡ್ಡಿ, ನವೀನ ಗುಳಗಣ್ಣವರ, ಪ್ರಸನ್ನ ಗಡಾದ, ವಿ.ಆರ್. ಪಾಟೀಲ್, ಎಸ್.ಆರ್. ಪಾಟೀಲ್ ಇದ್ದರು.

ಗವಿಮಠದ್ದು ಮಕ್ಕಳ ಎದೆಯಲ್ಲಿ ಅಕ್ಷರದ ದೀಪ ಹಚ್ಚುವ ಸಂಕಲ್ಪ

ಗುರುಕುಲ ಲೋಕಾರ್ಪಣೆಯಲ್ಲಿ ಗವಿಸಿದ್ಧೇಶ್ವರ ಮಹಾಸ್ವಾಮೀಜಿ

ಕೊಪ್ಪಳ : ಪೂಜಿಸುವ ದೇವರ ಗುಡಿಯಲ್ಲಿನ ದೀಪ ಹಚ್ಚುವುದಕ್ಕಿಂತ ದೀಪವೇ ಇಲ್ಲದ ಗುಡಿಸಲಲ್ಲಿನ ಮಕ್ಕಳ ಎದೆಯಲ್ಲಿ ಅಕ್ಷರದ ಹಣತೆ ಹಚ್ಚುವುದು ಗವಿಮಠ ಶ್ರೀಗಳ ಪರಂಪರೆ ಮತ್ತು ಸಂಕಲ್ಪವಾಗಿದೆ ಎಂದು ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಹೇಳಿದರು.

ಗವಿಸಿದ್ಧೇಶ್ವರ ಗುರುಕುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐದು ಸಾವಿರ ವಿದ್ಯಾರ್ಥಿಗಳನ್ನು ಪೂರ್ಣಗೊಳಿಸುವುದೇ ನಮ್ಮ ಆಶಯವಾಗಿತ್ತು. ಆದರೆ, ವಿದ್ಯಾರ್ಥಿನಿಯರಿಗೂ ಇಂಥದ್ದೊಂದು ವಸತಿ ಕಾಲೇಜು ಮಾಡಬೇಕು ಎಂದಾಗ ವಿದ್ಯಾರ್ಥಿನಿಯರಿಗಾಗಿ ಗುರುಕುಲ ಮಾಡುವ ಬಯಕೆ ಮಾಡಲಾಯಿತು. ಎಲ್ಲರ ಕಳಕಳಿ ಮತ್ತು ಕೊಡುಗೈ ದಾನಿಗಳಿಂದ ಇಂಥದ್ದೊಂದು ದೊಡ್ಡ ಶಿಕ್ಷಣ ಸಂಸ್ಥೆ ಹೆಣ್ಣುಮಕ್ಕಳಿಗಾಗಿ ತಲೆ ಎತ್ತಿದೆ ಎಂದರು.

ಮರಿಶಾಂತವೀರ ಮಹಾಸ್ವಾಮಿಜಿಗಳ ಸತ್ಪರಂಪರೆ ಮತ್ತು ಶಿವಶಾಂತವೀರ ಮಹಾಸ್ವಾಮೀಜಿಗಳು ಹಾಕಿಕೊಟ್ಟ ದಾರಿಯಂತೆ ನಾವು ನಡೆಯುತ್ತಿದ್ದೇವೆ ಎಂದರು.

ಇದನ್ನು ನಾನು ನಿರಂತರವಾಗಿ ನಡೆಸಿಕೊಂಡು ಹೋಗುವುದು ಹೇಗೆ ಎನ್ನುವ ಚಿಂತೆ ನನಗೆ ಇಲ್ಲ. ಗವಿಸಿದ್ಧೇಶ್ವರ ಜೋಳಿಗೆಯ ಶಕ್ತಿ ಇರುವವರೆಗೂ ನಡೆಸಿಕೊಂಡು ಹೋಗುತ್ತದೆ. ಅದು ಇಲ್ಲದ ಕಾಲಕ್ಕೆ ಯಾರಿಗೆ ಶಕ್ತಿ ಇರುತ್ತದೆ ಅವರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಈಗ ವಿದ್ಯಾರ್ಥಿನಿಯರಿಗಾಗಿ ಇಂಥದ್ದೊಂದು ಶಿಕ್ಷಣ ಸಂಸ್ಥೆ ಮಾಡಿದ್ದೇವೆ. ಮುಂದೆ ಗವಿಸಿದ್ಧ ಶಕ್ತಿ ನೀಡಿದರೆ ವಿದ್ಯಾರ್ಥಿಗಳಿಗೂ ಮಾಡುತ್ತೇನೆ. ಜೋಳಿಗೆ ಶಕ್ತಿ ಇರುವವರೆಗೂ ಹೀಗೆ ಮಾಡುತ್ತಲೇ ಇರುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಹಗಾರರಿಂದ ಸದಭಿರುಚಿಯ ಕವನ, ಕಥೆಗಳು ಹೊರಹೊಮ್ಮಲಿ: ದಿನೇಶ ಹೊಳ್ಳ
ಆಧುನಿಕೀಕರಣದ ಪರಿಣಾಮವಾಗಿ ಗುಬ್ಬಚ್ಚಿಗಳ ಸಂಖ್ಯೆ ಕುಸಿತ: ಸಂಗಮೇಶ ಪ್ರಭಾಕರ್