ಕನ್ನಡಪ್ರಭ ವಾರ್ತೆ ಮೈಸೂರು
ಪರಿಷತ್ ಮೈಸೂರು ಘಟಕದ ಅಧ್ಯಕ್ಷ ನಾಗರಾಜ್ ಬೈರಿ ಅಧ್ಯಕ್ಷತೆ ವಹಿಸಿದ್ದರು. ಹವ್ಯಾಸಿ ಸುಗಮ ಸಂಗೀತ ಗಾಯಕರಿಗೆ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ 2 ದಿನದ ಸಾರ್ವಜನಿಕ ವೇದಿಕೆ ಕಾರ್ಯಕ್ರಮದಲ್ಲಿ ಸುಮಾರು 48 ಮಂದಿ ಹವ್ಯಾಸಿ ಗಾಯಕರು ತಮ್ಮ ಪ್ರತಿಭೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು.
ಸುಮಾರು 120 ಮಂದಿ ಗಾಯಕರನ್ನು ಹೂಟಗಳ್ಳಿಯ ಅನಂತೇಶ್ವರ ಭವನದಲ್ಲಿ ಆಡಿಷನ್ ಮೂಲಕ ಆಯ್ಕೆ ಮಾಡಲಾಗಿತ್ತು. ಮೊದಲನೇ ದಿನದ ಮುಖ್ಯ ಅತಿಥಿಯಾಗಿದ್ದ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಸುಗಮ ಸಂಗೀತ ಪರಿಷತ್ ಮೈಸೂರು ಘಟಕದ ಈ ಅರ್ಥಪೂರ್ಣ ಕಾರ್ಯಕ್ರಮ ಶ್ಲಾಘಿಸಿ 48 ಮಂದಿ ಹವ್ಯಾಸಿ ಗಾಯಕರಿಗೆ ವೇದಿಕೆ ಒದಗಿಸಿಕೊಡುವ ಮೂಲಕ ಅವರಿಗೆ ಆತ್ಮವಿಶ್ವಾಸ ತುಂಬಿದ್ದೀರಿ ಎಂದರು.ಮುಂದಿನ ದಸರಾ ವಸ್ತು ಪ್ರದರ್ಶನದಲ್ಲಿ ಪರಿಷತ್ ನ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು. ಮುಂದಿನ ವರ್ಷದ ಈ ರೀತಿ ಕಾರ್ಯಕ್ರಮಗಳಲ್ಲಿ ಹೆಸರಾಂತ ಸಂಗೀತ ನಿರ್ದೇಶಕರನ್ನು ಆಹ್ವಾನಿಸಲು ಸಲಹೆ ನೀಡಿದರು.
ಪರಿಷತ್ ನ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ವಿ. ಬೈರಿ ಮಾತನಾಡಿ ಪರಿಷತ್ ನ ಉದ್ದೇಶವಾದ ಸುಗಮ ಸಂಗೀತ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ, ಪ್ರಾರಂಭವಾದ ಕೇವಲ ಎಂಟು ತಿಂಗಳಲ್ಲಿ ಮೈಸೂರು ಘಟಕವು ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೊಟ್ಟಿದ್ದು, ಅವುಗಳಲ್ಲಿ ಗೀತೋತ್ಸವ, ಜೋಗದ ಸಿರಿ ಬೆಳಕಿನಲ್ಲಿ, ಸುಗಮ ಸಂಗೀತ ಕಲಿಕಾ ಶಿಬಿರ ಹಾಗೂ ಕವಿಯ ನೋಡಿ ಕವಿತೆ ಕೇಳಿ ಮುಖ್ಯವಾದುದು ಎಂದರು.
ಈಗ 48 ಮಂದಿ ಹವ್ಯಾಸಿ ಗಾಯಕರಿಗೆ ಗೀತಧಾರೆ ಮೂಲಕ ವೇದಿಕೆ ಒದಗಿಸಲಾಗಿದ್ದು ಸುಗಮ ಸಂಗೀತ ಕ್ಷೇತ್ರದ ಅಭಿವೃದ್ಧಿಗೆ ಆಹರ್ನಿಷಿ ದುಡಿಯುತಿದೆ ಎಂದರು.ಈ ಎರಡು ದಿನದ ಕಾರ್ಯಕ್ರಮದಲ್ಲಿ ಮೈಸೂರಿನ ಖ್ಯಾತ ಕವಿ ಜಯಪ್ಪ ಹೊನ್ನಾಳಿ, ಡಾ.ವೈ.ಡಿ. ರಾಜಣ್ಣ, ಆಡಿಷನ್ ನ ತೀರ್ಪುಗಾರರಾಗಿದ್ದ ಡೇವಿಡ್ ಪ್ರತಿಭಾಂಜಲಿ, ಪ್ರೊ.ಎ.ಡಿ. ಶ್ರೀನಿವಾಸ್, ರಾಜೇಶ್ ಪಡಿಯಾರ್, ಇಂದ್ರಾಣಿ ಅನಂತರಾಮ್, ರಶ್ಮಿ ಚಿಕ್ಕಮಗಳೂರು ಅವರು ಭಾಗವಹಿಸಿ ಹಾವ್ಯಾಸಿ ಗಾಯಕರಿಗೆ ಸ್ಪೂರ್ತಿ ತುಂಬಿದರು. ವಾದ್ಯದಲ್ಲಿ ಕೀಬೋರ್ಡ್ ಗಣೇಶ್ ಭಟ್, ಇಂದು ಶೇಖರ್ ತಬಲದಲ್ಲಿ, ಪ್ರದೀಪ್ ಗಿಟಾರ್ ನಲ್ಲಿ ಹಾಗೂ ಕಿರಣ್ ರಿದಂ ಪ್ಯಾಡ್ ನುಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಅಜಯ್ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ನ. ಗಂಗಾಧರಪ್ಪ, ಕಾರ್ಯದರ್ಶಿ ಸಿರಿಬಾಲು, ಮಾಧ್ಯಮ ಸಲಹೆಗಾರ ಎನ್. ಬೆಟ್ಟೇಗೌಡ ಇದ್ದರು.