ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿಕೊಳ್ಳಿ-ಡಾ. ಸಮುದ್ರಿ

KannadaprabhaNewsNetwork | Published : Jun 10, 2025 10:42 AM

ಕೋವಿಡ್‌ ನಂತರವಂತೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಬಂದಿದ್ದು, ವರ್ಷಕ್ಕೊಮ್ಮೆಯಾದರೂ ರಕ್ತದೊತ್ತಡ, ಮಧುಮೇಹ ಸಂಬಂಧಿಸಿದಂತೆ ಆರೋಗ್ಯ ತಪಾಸಣೆಯನ್ನು ತಪ್ಪದೇ ಮಾಡಿಸಿಕೊಳ್ಳಬೇಕು ಎಂದು ಭಾರತಿಯ ರೆಡ್‌ಕ್ರಾಸ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಎಂ.ಡಿ. ಸಮುದ್ರಿ ಹೇಳಿದರು.

ಲಕ್ಷ್ಮೇಶ್ವರ: ಕೋವಿಡ್‌ ನಂತರವಂತೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಬಂದಿದ್ದು, ವರ್ಷಕ್ಕೊಮ್ಮೆಯಾದರೂ ರಕ್ತದೊತ್ತಡ, ಮಧುಮೇಹ ಸಂಬಂಧಿಸಿದಂತೆ ಆರೋಗ್ಯ ತಪಾಸಣೆಯನ್ನು ತಪ್ಪದೇ ಮಾಡಿಸಿಕೊಳ್ಳಬೇಕು ಎಂದು ಭಾರತಿಯ ರೆಡ್‌ಕ್ರಾಸ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಎಂ.ಡಿ. ಸಮುದ್ರಿ ಹೇಳಿದರು.

ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ದಿ. ನಿಂಗಪ್ಪ ಸಕ್ರಪ್ಪ ಪ್ಯಾಟಿಯವರ 25ನೇ ಪುಣ್ಯಸ್ಮರಣಾರ್ಥ ಗದಗಿನ ಇಂಡಿಯನ್‌ ರೆಡ್‌ಕ್ರಾಸ್‌ ಸಂಸ್ಥೆ ಹಾಗೂ ಹಾವೇರಿಯ ಸ್ಪಂದನಾ ಕಣ್ಣಿನ ಆಸ್ಪತ್ರೆ ಮತ್ತು ಬಂಕಾಪುರದ ಕಾರ್ತಿಕೇಯ ಹಾಸ್ಪಿಟಲ್‌ ಸಹಯೋಗದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಕೋವಿಡ್‌ ನಂತರ ಜನರು ಆರೋಗ್ಯ ಬಗ್ಗೆ ಹೆಚ್ಚು ಜಾಗೃತಗೊಂಡವರಂತೆ ಕಂಡು ಬಂದಿದ್ದರು. ಆದರೆ, ಇದು ಹೆಚ್ಚು ದಿನಗಳು ಮುಂದುವರೆಯದೇ ಮತ್ತೆ ನಿಷ್ಕಾಲಜಿ ವಹಿಸುವುದು ಮುಂದುವರೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.ನೇತ್ರ ತಜ್ಞ ಡಾ. ಸಂತೋಷ ಗುಡಗೇರಿ ಮಾತನಾಡಿ, ಬಹುದಿನಗಳಿಂದ ತಲೆನೋವು ಮುಂದುವರೆದಿದ್ದರೇ ಹಾಗೂ ಪದೆಪದೇ ಕಣ್ಣು ಮಂಜು ಆಗುವುದು, ಕಣ್ಣು ನೋವು ಬರುತ್ತಿದ್ದರೇ ತಕ್ಷಣವೇ ನೇತ್ರ ತಜ್ಞರ ಹತ್ತಿರ ಹೋಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಅಗತ್ಯ ಸಲಹೆ ಪಡೆದುಕೊಳ್ಳಬೇಕು. ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದರೇ ಯಾವುದೇ ಕಾರಣಕ್ಕೆ ಅನಗತ್ಯ ಕಾರಣಗಳ ನೆಪವೊಡ್ಡಿ ಮುಂದೂಡದೇ ವೈದ್ಯರ ಸಲಹೆ ತಕ್ಷಣವೇ ಪಾಲಿಸಲು ಮುಂದಾಗಿ ಎಂದು ಕಿವಿಮಾತು ಹೇಳಿದರು.

ಸ್ತ್ರೀರೋಗ ತಜ್ಞ ಬಸವರಾಜ ನರೇಗಲ್ಲ ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯಕ್ಕೆ ಪೂರಕವಾಗುವಂತ ಕಬ್ಬಿಣ ಅಂಶವುಳ್ಳ, ಪ್ರೋಟಿನ್‌, ಕ್ಯಾಲ್ಸಿಯಂವುಳ್ಳ ಆಹಾರ ಸೇರಿದಂತೆ ನಾರು ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವ ಮೂಲಕ ಆರೋಗ್ಯ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ. ದೇಹದಲ್ಲಿ ಏನಾದರೂ ವ್ಯತ್ಯಾಸವಾದರೇ ತಜ್ಞ ವೈದ್ಯರ ಹತ್ತಿರ ತಪ್ಪದೇ ತಪಾಸಣೆ ಮಾಡಿಕೊಳ್ಳಲೇ ಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಚಂದ್ರಶೇಖರಪ್ಪ ಅಂಗಡಿ, ಬಸವಣ್ಣೆಪ್ಪ ಅಂಗಡಿ, ಮಹಾಂತಗೌಡ ಪಾಟೀಲ, ನಾಗಪ್ಪ ಅಕ್ಕೂರ, ಗುರುಸಿದ್ದಯ್ಯ ಹಿರೇಮಠ, ಚನವೀರಯ್ಯ ಹಿರೇಮಠ, ಹಾಲಪ್ಪ ಅಂಗಡಿ, ಬಸವರಾಜ ನಿಂ.ಪ್ಯಾಟಿ, ಷಣ್ಮುಕಪ್ಪ ಪ್ಯಾಟಿ, ಗುಳಪ್ಪ ಅಕ್ಕೂರ, ತಿರಕಪ್ಪ ಅಕ್ಕೂರ, ಗೋವಿಂದಪ್ಪ ಬಾರಕೇರ, ಸೋಮಣ್ಣ ಅಕ್ಕೂರ, ನಿಂಗಪ್ಪ ಕಂಬಳಿ, ಸೋಮಲಪ್ಪ ಲಮಾಣಿ ಸೇರಿದಂತೆ ಗ್ರಾಮದ ಗಣ್ಯ ಮುಖಂಡರು ಉಪಸ್ಥಿತರಿದ್ದರು.

ಸೊಳ್ಳೆಬತ್ತಿ, ತಾಡಪಲ್‌, ಊರುಗೋಲು ವಿತರಣೆ:ಇಂಡಿಯನ್‌ ರೆಡ್‌ಕ್ರಾಸ್‌ ಸಂಸ್ಥೆ ವತಿಯಿಂದ ಬಡವರಿಗೆ ಸೊಳ್ಳೆಪರದೆ, ತಾಡಪಲ್‌ ಸೇರಿದಂತೆ ಸೊಳ್ಳೆಬತ್ತಿಗಳನ್ನು ವಿತರಿಸಲಾಯಿತು. ಮೊಣಕಾಲು ನೋವಿನಿಂದ ಬಳಲುವವರಿಗೆ ಊರುಗೋಲುಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಡಾ.ಮಲ್ಲಿಕಾರ್ಜುನ ಕನಕಗಿರಿ, ಡಾ.ಮಹೇಶ ಪ್ಯಾಟಿ ಸೇರಿದಂತೆ ಗದಗಿನ ಡಿಜಿಎಂ ಕಾಲೇಜಿನ ಬಿಎಎಂಎಸ್‌ ವಿದ್ಯಾರ್ಥಿಗಳು ಸುಮಾರು 500ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡುವ ಮೂಲಕ ವಿಶೇಷ ಕಾಳಜಿ, ಅಗತ್ಯ ಸಲಹೆ ಹಾಗೂ ಔಷಧಿಗಳನ್ನು ನೀಡಿದರು.