ಹಳೆ ವಿದ್ಯಾರ್ಥಿಯಿಂದ ಶಾಲೆಗೆ ಪ್ರಿಂಟರ್‌ ಕೊಡುಗೆ

KannadaprabhaNewsNetwork | Published : Jan 3, 2025 12:32 AM

ಅರಸೀಕೆರೆ ನಗರಕ್ಕೆ ಸಮೀಪದ ಕೆಲ್ಲಂಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಾದ ಶಂಕರ್ ಅವರಿಂದ ಪ್ರಿಂಟರ್ ಕೊಡುಗೆಯನ್ನು ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಶಂಕರ್ ಅವರು ಈ ಶಾಲೆಗೆ ಮೊದಲು ಸುಮಾರು 50 ಸಾವಿರ ರು. ಮೌಲ್ಯದ ವಾಟರ್ ಫಿಲ್ಟರ್‌ ಅನ್ನು ನೀಡಿದ್ದಾರಲ್ಲದೆ ತಮ್ಮ ಮೊಮ್ಮಗಳು ಬೇಬಿ ಹಂಸಿತಾಳ ಹುಟ್ಟುಹಬ್ಬದ ಸವಿನೆನಪಿನಲ್ಲಿ ಈ ಕೊಡುಗೆಯನ್ನು ಶಾಲೆಗೆ ನೀಡುತ್ತಿರುವುದು ಸಂತೋಷ ತಂದಿದೆ ಎಂದು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗ್ರಾಮೀಣ ಪ್ರದೇಶದ ಕನ್ನಡ ಶಾಲೆಯಲ್ಲಿ ತಾವು ಓದಿದ್ದನ್ನು ಸ್ಮರಿಸಿಕೊಂಡು ಶಾಲೆಗೆ ಆಗಾಗ್ಗೆ ಕೊಡುಗೆಗಳನ್ನು ನೀಡುತ್ತಿರುವ ಶಂಕರ್ ಅವರ ಸೇವೆ ಶ್ಲಾಘನೀಯ ಎಂದು ಶಿಕ್ಷಣ ಸಂಯೋಜಕ ಚಿದಾನಂದ್ ಅಭಿಪ್ರಾಯಪಟ್ಟರು. ಅವರು ನಗರಕ್ಕೆ ಸಮೀಪದ ಕೆಲ್ಲಂಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಾದ ಶಂಕರ್ ಅವರಿಂದ ಪ್ರಿಂಟರ್ ಕೊಡುಗೆಯನ್ನು ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಶಂಕರ್ ಅವರು ಈ ಶಾಲೆಗೆ ಮೊದಲು ಸುಮಾರು 50 ಸಾವಿರ ರು. ಮೌಲ್ಯದ ವಾಟರ್ ಫಿಲ್ಟರ್‌ ಅನ್ನು ನೀಡಿದ್ದಾರಲ್ಲದೆ ತಮ್ಮ ಮೊಮ್ಮಗಳು ಬೇಬಿ ಹಂಸಿತಾಳ ಹುಟ್ಟುಹಬ್ಬದ ಸವಿನೆನಪಿನಲ್ಲಿ ಈ ಕೊಡುಗೆಯನ್ನು ಶಾಲೆಗೆ ನೀಡುತ್ತಿರುವುದು ಸಂತೋಷ ತಂದಿದೆ ಎಂದು ಶ್ಲಾಘಿಸಿದರು. ಶಿಕ್ಷಣ ಇಲಾಖೆಯ " ನನ್ನ ಶಾಲೆ ನನ್ನ ಕೊಡುಗೆ " ಎಂಬ ಧ್ಯೆಯವಾಕ್ಯದೊಡನೆ ವೆಬ್ಸೈಟ್ ಒಂದನ್ನು ತೆರೆದಿದ್ದು ದಾನಿಗಳು ಅದರಲ್ಲಿ ಯಾವುದೇ ಶಾಲೆಯನ್ನು ಬೇಕಾದರೂ ಆಯ್ಕೆ ಮಾಡಿಕೊಂಡು ತಮ್ಮ ಕೊಡುಗೆಗಳನ್ನು ಕೊಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಶಂಕರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಬಹಳ ಕಾಳಜಿಯಿಂದ ವ್ಯಾಸಂಗ ಮಾಡಬೇಕು. ನಾನು ಈ ಶಾಲೆಯಲ್ಲಿ ವ್ಯಾಸಂಗ ಮಾಡಿ ಬಂದವನು ಈ ಶಾಲೆ ಶತಮಾನೋತ್ಸವವನ್ನು ಆಚರಿಸಿಕೊಂಡಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಿಮಗೆ ದೊರೆತಿರುವ ಸೌಲಭ್ಯಗಳನ್ನು ಬಳಸಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು. ರಮ್ಯಾ ವಿನಯ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರುಗಳನ್ನು ನೆನಪಿನಲ್ಲಿ ಇಟ್ಟುಕೊಂಡಾಗ ಮಾತ್ರ ಶ್ರೇಯಸ್ಸನ್ನು ಕಾಣಲು ಸಾಧ್ಯ. ನಮಗೆ ಜ್ಞಾನಾರ್ಜನೆ ನೀಡಿರುವ ಶಿಕ್ಷಕರ ನೆನಪು ಸದಾ ನಮ್ಮ ಮನಗಳಲ್ಲಿ ಇರಬೇಕೆಂದು ಅವರು ವಿದ್ಯಾರ್ಥಿಗಳಿಗೆ ಹಿತನುಡಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ಶಂಕರ್ ಅವರು, ತಾವು ಓದಿದ ಶಾಲೆಯ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದಾರೆ, ಬೆಂಗಳೂರಿನಲ್ಲಿರುವ ಅವರು ತಮ್ಮ ಮೊಮ್ಮಗಳ ಹುಟ್ಟುಹಬ್ಬವನ್ನು ತಾವು ಓದಿದ ಗ್ರಾಮೀಣ ಶಾಲೆಯಲ್ಲಿ ಆಚರಿಸಿಕೊಳ್ಳಲು ಕುಟುಂಬ ಸಮೇತರಾಗಿ ಆಗಮಿಸಿ ಶಾಲೆಗೆ ಕೊಡುಗೆಯನ್ನು ನೀಡಿದ್ದಾರೆ. ಶಾಲೆಯ ಮೇಲಿನ ಅವರ ಅಭಿಮಾನ ನಿರಂತರವಾಗಿರಲಿ ಎಂದು ಆಶಿಸಿ ಎಲ್ಲರಿಗೂ ಶುಭಕೋರಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ವೇತಾ ಹುಟ್ಟುಹಬ್ಬ ಆಚರಿಸಿಕೊಂಡ ಪುಟಾಣಿ ಹಂಸಿತಾ ಹಾಗೂ ಶಾಲಾ ಮಕ್ಕಳಿಗೆ ಶುಭಕೋರಿದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್ ಹಾಗೂ ಸದಸ್ಯರು, ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು. ಶಿಕ್ಷಕ ಪುಟ್ಟಸ್ವಾಮಿ ಕಾರ್ಯಕ್ರಮವನ್ನ ನಡೆಸಿಕೊಟ್ಟರು.