ಕನ್ನಡಪ್ರಭ ವಾರ್ತೆ ಹಾಸನ
ನಗರದ ಎ.ವಿ.ಕೆ ಕಾಲೇಜಿನಲ್ಲಿ ಬುಧವಾರ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಮಹಿಳೆಯರು ಎರಡನೇ ಪ್ರಜೆಯಾಗಿ ಏಕೆ ಜೀವನ ಮಾಡುತ್ತಿದ್ದೇವೆ ಎಂಬ ಜಿಜ್ಞಾಸೆ ನಮಗೂ ಇದೆ. ಶಿಕ್ಷಣ ಒಂದು ಆಭರಣ. ಕಾಲ ಬದಲಾಗಿದೆ ಹೆಣ್ಣು ಮಕ್ಕಳು ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಿ ಸ್ವತಂತ್ರರಾಗಿ ಇರಬೇಕು. ನೀವು ಇನ್ನೊಬ್ಬರ ಬಳಿ ಕೈ ಚಾಚುವುದಕ್ಕಾಗಿ ಜನಿಸಿಲ್ಲ. ನಿಮಗೆ ನಿಮ್ಮದೇ ಆದಂತಹ ಗುರುತು, ಶಕ್ತಿ ಇದೆ ಅದನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದರು.
ನಿಮ್ಮ ಕಾಲೇಜಿನ ದಿನಗಳುಸುಂದರ ಜೀವನದ ಆರಂಭವಾಗಿದೆ. ಇನ್ಸ್ಟಾಗ್ರಾಂ, ಫೇಸ್ಬುಕ್, ಡ್ರೆಸ್ಸಿಂಗ್, ಪ್ರೀತಿ ಸಂಬಂಧಗಳು ಎಂದು ಸಮಯ ಕಳೆಯುವುದು ಯಾವುದೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಬೇಕಿಲ್ಲದ ವಿಷಯಗಳಿಗೆ ಹೆಚ್ಚಿನ ಗಮನಕೊಡುವುದನ್ನು ಬಿಟ್ಟು, ನೀವು ನಿಜವಾಗಿಯೂ ಗೌರವಯುತವಾಗಿ ಬದುಕಲು ಶಿಕ್ಷಣ ಪಡೆಯುವುದರ ಮೂಲಕ ಪ್ರತಿಯೊಬ್ಬರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.ಉದ್ಯೋಗವನ್ನು ತೆಗೆದುಕೊಳ್ಳಲೇಬೇಕು ಎಂಬ ದೃಢ ನಿರ್ಧಾರದಿಂದ ಪ್ರತಿನಿತ್ಯ ೧೨ರಿಂದ ೧೪ ಗಂಟೆಗಳು ನಿರಂತರವಾಗಿ ಓದುವಾಗ ನಿಮ್ಮ ಸಂಬಂಧಿಕರು ಸೇರಿದಂತೆ ಅನೇಕರು ನಿಮ್ಮನ್ನು ನಿರುತ್ಸಾಹಗೊಳಿಸಿ, ಅನುಮಾನ ಪಡುತ್ತಾರಲ್ಲದೆ, ನಿಮ್ಮನ್ನು ತುಳಿಯುವುದಕ್ಕೆ ಪ್ರಯತ್ನಿಸುತ್ತಾರೆ ಅದನ್ನು ಮೆಟ್ಟಿನಿಂತು ಧೈರ್ಯವಾಗಿ ನಿಮ್ಮ ಗುರಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಮೊದಲು ನಿಮ್ಮನ್ನು ನೀವು ಗೌರವಿಸಿಕೊಂಡರೆ ಇತರರು ನಿಮ್ಮನ್ನು ಗೌರವಿಸುತ್ತಾರೆ. ಹಾಗಾಗಿ ನಿಮ್ಮ ಮೇಲೆ ನೀವು ಅಗೌರವವನ್ನು ಹೊಂದಬೇಡಿ. ನೀವು ಏನು ಎಂದು ಮತ್ತೊಬ್ಬರು ವ್ಯಾಖ್ಯಾನಿಸುವುದಕ್ಕೆ ಅವಕಾಶ ಕೊಡಬೇಡಿ. ನಿಮ್ಮ ಬಲಹೀನತೆ ಮತ್ತುನಿಮ್ಮ ಶಕ್ತಿ ಏನು ಎಂಬುದು ನಿಮಗೆ ಗೊತ್ತಿದೆ ಎನ್ನುವ ಆತ್ಮವಿಶ್ವಾಸ ನಿಮ್ಮಲ್ಲಿರಬೇಕು ಎಂದರು.
ವಿವೇಕಾನಂದ, ಸುಭಾಷ್ ಚಂದ್ರಬೋಸ್, ಭಗತ್ಸಿಂಗ್, ಚಂದ್ರಶೇಖರ್ ಆಜಾದ್ ಈ ರೀತಿಯಾಗಿ ಸ್ವಾತಂತ್ರ್ಯ ಹೋರಾಟಗಾರರು ಜೊತೆಗೆ ಬಸವಣ್ಣ, ಅಂಬೇಡ್ಕರ್ ಅವರ ಚಿಂತನೆಗಳ ಕುರಿತಾದ ಪುಸ್ತಕಗಳು ಅದರಲ್ಲೂ ಕನ್ನಡ ಸಾಹಿತ್ಯದ ಮೆರುಗನ್ನು ಹೆಚ್ಚಿಸಿದಂತಹ ಕುವೆಂಪು, ದ.ರಾ ಬೇಂದ್ರೆ, ಶಿವರಾಮ್ ಕಾರಂತ್, ಗಿರೀಶ್ ಕಾರ್ನಾಡ್ ಅವರ ಸಮಗ್ರ ಪುಸ್ತಕಗಳನ್ನು ಓದುತ್ತಿದ್ದೆ. ಅದರಲ್ಲೂ ಮಹಿಳಾಪರ ವಾದವನ್ನು ಮಂಡಿಸುವಂತಹ ವೈದೇಹಿ, ನೇಮಿಚಂದ್ರರವರಂತಹ ಲೇಖಕರ ಪುಸ್ತಕವನ್ನು ಹೆಚ್ಚು ಓದುತ್ತಿದ್ದೆ ಎಂದು ಅವರ ವಿದ್ಯಾರ್ಥಿ ಜೀವನದ ಕುರಿತು ಸವಿವರವಾಗಿ ಹಂಚಿಕೊಂಡರು.