ಹಾನಗಲ್ಲ: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯನ್ನು ಸತ್ಯವಾಗಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ರೋಶನಿ ಸಮಾಜ ಸೇವಾ ಸಂಸ್ಥೆಯ ಕಾಳಜಿ ಮಾದರಿಯಾಗಿದುದಲ್ಲದೆ, ಇದರೊಂದಿಗೆ ಸಮಾಜಮುಖಿ ಸೇವೆಯ ಮೂಲಕ ಜನೋಪಯೋಗಿ ಕಾರ್ಯದಲ್ಲಿ ಯಶಸ್ಸು ಕಂಡಿದೆ ಎಂದು ನ್ಯಾಯವಾದಿ ರವಿಬಾಬು ಪೂಜಾರ ತಿಳಿಸಿದರು.ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ರೋಶನಿ ಸಮಾಜ ಸೇವಾ ಸಂಸ್ಥೆಯ ಕಾರ್ಯ ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆದಿದ್ದು, ಪ್ರತಿವರ್ಷ 20 ಹೆಣ್ಣುಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಇದು 27 ವರ್ಷಗಳಿಂದ ನಿರಂತರವಾಗಿ ನಡೆದ ಕಾರ್ಯ ನಡೆದಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅನಾಥ ಮಕ್ಕಳ ಶೈಕ್ಷಣಿಕ ಹಿತಕ್ಕೆ ಮಾಡುತ್ತಿರುವ ಸೇವೆ ಗಮನಾರ್ಹ ಎಂದರು. ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ತಂದೆ- ತಾಯಿ, ಪೋಷಕರಿಲ್ಲದ ಬಡ ಮಕ್ಕಳನ್ನು ಗುರುತಿಸಿ ಬಟ್ಟೆ, ಲೇಖನ ಸಾಮಗ್ರಿ, ಪುಸ್ತಕಗಳನ್ನು ನೀಡುವುದಲ್ಲದೆ, ಅಂತಹ ಮಕ್ಕಳ ಕಲಿಕೆಗೆ ಬೇಕಾಗುವ ಎಲ್ಲ ವೆಚ್ಚವನ್ನು ಸಂಸ್ಥೆ ಭರಿಸುತ್ತದೆ. ಮಕ್ಕಳ ಬಗೆಗೆ ನಿರಂತರ ಕಾಳಜಿ ವಹಿಸುತ್ತದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ನಮ್ಮ ಸಂಕಲ್ಪವಾಗಿದೆ. ಮಕ್ಕಳಲ್ಲಿಯೂ ಕೃತಜ್ಞತಾ ಭಾವ ಬೆಳೆಸುವ ಅಗತ್ಯವಿದೆ. ನಮ್ಮ ಜತೆಗೆ ಕೈ ಜೋಡಿಸಿ ಹಲವು ಮಹನೀಯರು ಆರ್ಥಿಕ ನೆರವು ನೀಡುತ್ತಿದ್ದಾರೆ. ಅಂತಹ ದಾನಿಗಳನ್ನು ಅಭಿನಂದಿಸುವುದು ಕೂಡ ನಮ್ಮ ಕರ್ತವ್ಯ ಎಂದರು.ನಿವೃತ್ತ ವೈದ್ಯಾಧಿಕಾರಿ ಡಾ. ಎನ್.ಎಫ್. ಕಮ್ಮಾರ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿ, ಶಿಕ್ಷಣದಿಂದ ಎಲ್ಲ ಅವಿಷ್ಕಾರ ಸಾಧ್ಯ. ಸಮಾಜದಲ್ಲಿ ಉತ್ತಮ ವಾತಾವರಣದಕ್ಕೆ ಶಿಕ್ಷಣ ಅತ್ಯಂತ ಮುಖ್ಯವಾದುದು. ರೋಶನಿ ಎಂದರೆ ನಿಜವಾದ ಬೆಳಕು ಎಂಬಂತೆ ಸಂಸ್ಥೆ ಸೇವಾ ಕಾರ್ಯದಲ್ಲಿದೆ. ಮಾನವ ಹಕ್ಕು ಸಮಿತಿ ಸದ್ಯಸ ಪೈರೋಜಾ ಶಿರಬಡಗಿ ಮಾತನಾಡಿದರು. ದೀಪಾ ಬಾಂಳಬೀಡ, ನಿರ್ಮಲಾ ಮಡಿವಾಳರ, ಕಾವೇರಿ, ಚಂದ್ರಿಕಾ, ಹನುಮಂತ ಬೆಳ್ಳನಕೆರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.