ವಿಷ್ಣು ಸ್ಮಾರಕಕ್ಕೆ 10 ಗುಂಟೆ ಕೊಡಿ: ಭಾರತಿ

KannadaprabhaNewsNetwork |  
Published : Sep 04, 2025, 01:00 AM IST
Bharathi Vishnuvardhana 1 | Kannada Prabha

ಸಾರಾಂಶ

 ಅಭಿಮಾನ್‌ ಸ್ಟುಡಿಯೋದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಅವರ ಸಮಾಧಿ ಸ್ಥಳದಲ್ಲಿ 10 ಗುಂಟೆ ಜಾಗವನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿಡುವಂತೆ ಅವರ ಪತ್ನಿ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ ಅನಿರುದ್ಧ್‌ ವಿಷ್ಣುವರ್ಧನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ 

 ಬೆಂಗಳೂರು :  ನಗರದ ಉತ್ತರಹಳ್ಳಿ ರಸ್ತೆಯ ಅಭಿಮಾನ್‌ ಸ್ಟುಡಿಯೋದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಅವರ ಸಮಾಧಿ ಸ್ಥಳದಲ್ಲಿ 10 ಗುಂಟೆ ಜಾಗವನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿಡುವಂತೆ ಅವರ ಪತ್ನಿ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ ಅನಿರುದ್ಧ್‌ ವಿಷ್ಣುವರ್ಧನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಅವರು, ಸೆ.18ರಂದು ವಿಷ್ಣುವರ್ಷನ್‌ ಅವರ ಹುಟ್ಟುಹಬ್ಬವಿದೆ. ಅಷ್ಟರೊಳಗೆ 10 ಗುಂಟೆ ಭೂಮಿಯನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮೀಸಲಿಡಲು ಅನುಮತಿಸಬೇಕು ಎಂದು ಕೋರಿಕೆ ಇಟ್ಟರು. ಇದೇ ವೇಳೆ, ವಿಷ್ಣುವರ್ಧನ್‌ ಅವರಿಗೆ ‘ಕರ್ನಾಟಕ ರತ್ನ’ ಕೊಡಬೇಕೆಂದು ಕೂಡ ಇದೇ ವೇಳೆ ಮನವಿ ಮಾಡಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಇದ್ದರು.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ ಅವರು, ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರದಿಂದ 10 ಗುಂಟೆ ಜಾಗ ಮೀಸಲಿಟ್ಟು ಅಭಿಮಾನಿಗಳು ಅಲ್ಲಿಗೆ ಬಂದು ವಿಷ್ಣು ಸಮಾಧಿಗೆ ನಮಸ್ಕಾರ ಮಾಡಿಕೊಂಡು ಹೋಗಲು ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಇದು ವಿಷ್ಣು ಅಭಿಮಾನಿಗಳ ಆಸೆ ಹಾಗೂ ಕೋರಿಕೆಯಾಗಿದೆ. ಆದಷ್ಟು ಇದು ಸೆ.18ರ ಒಳಗೆ ಈ ಕುರಿತು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನಿವ ಮಾಡಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದರು.

ನಟ ಅನಿರುದ್ಧ್‌ ಮಾತನಾಡಿ, ವಿಷ್ಣುವರ್ಷನ್‌ ಅವರ ಸಮಾಧಿ ಸ್ಥಳದಲ್ಲಿ ಈ ಹಿಂದೆ ನಾವೇ ಮಂಟಪ ಕಟ್ಟಿದ್ದೆವು. ಆ ಜಾಗದ ವಿವಾದ ಆದ ಬಳಿಕ ಅದನ್ನು ಕೆಡವಲಾಗಿದೆ. ಸರ್ಕಾರ ಜಾಗ ನೀಡಿದರೆ ಮತ್ತೆ ಅಲ್ಲಿ ನಾವೇ ಮಂಟಪ ಕಟ್ಟುತ್ತೇವೆ. ಮುಖ್ಯಮಂತ್ರಿ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಸೆ.18ರೊಳಗೆ ಈ ಜಾಗ ಮೀಸಲಿಡಲು ಕಷ್ಟ ಆಗಬಹುದು. ಅರಣ್ಯ ಇಲಾಖೆಯೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ ಎಂದರು. ಸ್ಥಳದಲ್ಲೇ ಇದ್ದ ಇಲಾಖೆಯ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್‌ ಅವರೊಂದಿಗೂ ಮಾತನಾಡಿದ್ದಾರೆ. ಅವರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ತಿಳಿಸಿದರು.

ಭೂ ವಿವಾದದ ಹಿನ್ನೆಲೆಯಲ್ಲಿ ಅಭಿಮಾನ್‌ ಸ್ಟುಡಿಯೋದಲ್ಲಿದ್ದ ವಿಷ್ಣು ಸಮಾಧಿ ಧ್ವಂಸಗೊಳಿಸಿದ ಬಳಿಕ ಸರ್ಕಾರ ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು ಎಂದು ವಶಕ್ಕೆ ಪಡೆಯಲು ಮುಂದಾಗಿದೆ. ಈ ಜಾಗವನ್ನು 1970ರಲ್ಲಿ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಿ ನಟ ಬಾಲಣ್ಣ ಅವರ ಕುಟುಂಬಕ್ಕೆ ಅಭಿಮಾನ್‌ ಸ್ಟುಡಿಯೋ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ, ಗುತ್ತಿಗೆ ನಿಯಮಾವಳಿ ಉಲ್ಲಂಘಿಸಿ ಈಗಾಗಲೇ 10 ಎಕರೆ ಮಾರಾಟ ಮಾಡಿದ್ದಾರೆ. ಉಳಿದ 10 ಎಕರೆಯನ್ನು ಮಾರಾಟ ಮಾಡಲು ಹಣ ಪಡೆದಿರುವ ಆರೋಪದ ಮೇಲೆ ಗುತ್ತಿಗೆ ರದ್ದು ಮಾಡಿ ವಶಕ್ಕೆ ಪಡೆಯಲು ಮುಂದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ