ಬಹಿರಂಗ ಸವಾಲಿಗೆ ಸೂಕ್ತ ಪ್ರತ್ಯುತ್ತರ ನೀಡಿ: ಸಂಸದ ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : May 14, 2024, 01:03 AM ISTUpdated : May 14, 2024, 01:12 PM IST
ಬಿಜೆಪಿ ಮುಖಂಡರು ಕಾರ್ಯಕರ್ತರ ಸಭೆಯಲ್ಲಿ ಸಂಸದ ರಾಘವೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ವಿಧಾನ ಪರಿಷತ್‌ ಪದವೀಧರ ಕ್ಷೇತ್ರಕ್ಕೆ ಡಾ.ಧನಂಜಯ ಸರ್ಜಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು ಇದರೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಶಿಕ್ಷಕರ ಕ್ಷೇತ್ರಕ್ಕೆ ಬೋಜೆಗೌಡ ಸ್ಪರ್ಧಿಸಲಿದ್ದು ಮೈತ್ರಿ ಕೂಟದ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಗೆಲುವಿಗೆ ಶ್ರಮಿಸಲು ಮನವಿ ಮಾಡಿದರು.  

  ಶಿಕಾರಿಪುರ :  ತಾಲೂಕಿನ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯ, ಸೌಲಭ್ಯಗಳ ಕಲ್ಪಿಸಿಕೊಟ್ಟರೂ ಚುನಾವಣೆಯಲ್ಲಿ ವಿರೋಧಿ ಅಭ್ಯರ್ಥಿ ಜಯಗಳಿಸುವ ಬಗ್ಗೆ ಬಹಿರಂಗ ಸವಾಲು ಹಾಕುವ ವಿರೋಧಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ಕೆಲಸ ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.

ಪಟ್ಟಣದ ಕುಮದ್ವತಿ ವಸತಿ ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ವಿಧಾನ ಪರಿಷತ್‌ಗೆ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪಕ್ಷದ ಮುಖಂಡರು ಪ್ರಮುಖ ಕಾರ್ಯಕರ್ತರು, ಮಹಿಳಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ ಈಗಾಗಲೇ ವಿಧಾನಪರಿಷತ್‌ಗೆ ಚುನಾವಣೆಗಳು ಘೋಷಣೆಯಾಗಿದೆ. ಮತದಾರರ ಮನವೊಲಿಕೆಗೆ ಹೆಚ್ಚಿನ ಸಮಯಾವಕಾಶವಿಲ್ಲವಾಗಿದೆ ಜೂನ್ 3 ರಂದು ಚುನಾವಣೆ ನಿಗದಿಯಾಗಿದ್ದು ಕಡಿಮೆ ಅವಧಿಯಲ್ಲಿ ಕಾರ್ಯಕರ್ತರು ಮತದಾರರನ್ನು ಭೇಟಿಯಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಗೆಲುವಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕಾಗಿದೆ ಎಂದ ಅವರು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮುಖಂಡರು ಕಾರ್ಯಕರ್ತರು ದಣಿದಿದ್ದು ಕುಟುಂಬದ ಜತೆ ಸಮಯ ನೀಡದೆ ಪಕ್ಷಕ್ಕಾಗಿ ಅಮೂಲ್ಯ ಸಮಯ ನೀಡಿದ್ದನ್ನು ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.

ಸವಾಲಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಿ:

ವಿಧಾನ ಪರಿಷತ್‌ ಪದವೀಧರ ಕ್ಷೇತ್ರಕ್ಕೆ ಡಾ.ಧನಂಜಯ ಸರ್ಜಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು ಇದರೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಶಿಕ್ಷಕರ ಕ್ಷೇತ್ರಕ್ಕೆ ಬೋಜೆಗೌಡ ಸ್ಪರ್ಧಿಸಲಿದ್ದು ಮೈತ್ರಿ ಕೂಟದ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಗೆಲುವಿಗೆ ಶ್ರಮಿಸಲು ಮನವಿ ಮಾಡಿದರು. ಆಯನೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು ಈ ಬಾರಿ ಸೂಕ್ತ ಉತ್ತರ ನೀಡಬೇಕಾದ ಸವಾಲಿನ ಚುನಾವಣೆಯಾಗಿದೆ. ಪರಿಷತ್ತಿನಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಬಹು ಮುಖ್ಯವಾದ ವಿ.ಪ ಸ್ಥಾನವನ್ನು ಪಕ್ಷ ಗೆಲ್ಲುವುದು ಅನಿವಾರ್ಯವಾಗಿದ್ದು ಈ ದಿಸೆಯಲ್ಲಿ ಮುಂದಿನ 15 ದಿನ ಹೆಚ್ಚಿನ ರೀತಿಯಲ್ಲಿ ಶ್ರಮ ವಹಿಸುವಂತೆ ತಿಳಿಸಿದರು.

ವೇದಿಕೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಉಪಾಧ್ಯಕ್ಷ ವಸಂತಗೌಡ, ಜೆಡಿಎಸ್ ಅಧ್ಯಕ್ಷ ಯೋಗೀಶ ಬೆಂಕಿ, ಮುಖಂಡ ಗುರುಮೂರ್ತಿ, ಟಿ.ಎಸ್ ಮೋಹನ, ಹಾಲಪ್ಪ, ಮಹೇಶ್ ಹುಲ್ಮಾರ್, ಗಾಯತ್ರಿದೇವಿ, ಭೂಕಾಂತ್, ಚಂದ್ರಪ್ಪ, ಬಂಗಾರಿನಾಯ್ಕ, ಸಿದ್ರಾಮಪ್ಪ, ಶಶಿಧರ ಚುರ್ಚುಗುಂಡಿ, ನಿವೃತ್ತ ಬಿಎಸ್ಎನ್ಎಲ್ ಇಂಜಿನಿಯರ್ ಶಿವಪ್ಪ, ಈರಾನಾಯ್ಕ, ಜಯಣ್ಣ ಮತ್ತಿತರರಿದ್ದರು.

ಬಿಜೆಪಿ ಗೆಲುವಿನ ಬಗ್ಗೆ ಸಂದೇಹ ಬೇಡ: ಬಿವೈಆರ್‌

* ಹಳೇ ಟ್ರ್ಯಾಕ್ಟರ್ ಪಣಕ್ಕಿಟ್ಟರೆ ನಾವು ಹೊಸ ಟ್ರ್ಯಾಕ್ಟರ್ ಪಣಕ್ಕಿಡೋಣ

ಸಾಮಾಜಿಕ ಜಾಲತಾಣದಲ್ಲಿ ತಾಲೂಕಿನ ಕಲ್ಮನೆ ಗ್ರಾಮದ ವ್ಯಕ್ತಿಯೊಬ್ಬ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಈ ಬಗ್ಗೆ ಟ್ರ್ಯಾಕ್ಟರ್ ಪಣಕ್ಕಿಟ್ಟಿರುವುದಾಗಿ ಬಹಿರಂಗವಾಗಿ ಸವಾಲು ಹಾಕಿದ್ದು ನೋವಿನ ಸಂಗತಿ ಎಂದು ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಕ್ಕೆ ರಸ್ತೆ, ನೀರಾವರಿ, ಶಾಲೆ ಸಹಿತ ಅಗತ್ಯವಾದ ಸಕಲ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಸತತ 40 ವರ್ಷಗಳ ತಪಸ್ಸಿಗೆ ಬೆಲೆ ಇಲ್ಲವಾ ? ಎಂದು ಪ್ರಶ್ನಿಸಿದರು. ಅನಾರೋಗ್ಯ ಪೀಡಿತರು, ಗರ್ಭಿಣಿಯರ ಹಗಲು ರಾತ್ರಿಯ ಪರಿವಿಲ್ಲದೆ ಆಸ್ಪತ್ರೆಗೆ ದಾಖಲಿಸಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಇದು ಅಪಮಾನವಾಗಬೇಕು. ಅವರು ಹಳೇ ಟ್ರ್ಯಾಕ್ಟರ್ ಪಣಕ್ಕಿಟ್ಟರೆ ನಾವು ಹೊಸ ಟ್ರ್ಯಾಕ್ಟರ್ ಪಣಕ್ಕಿಡೋಣ. ಬಿಜೆಪಿ ಗೆಲುವಿನ ಬಗ್ಗೆ ಸಂದೇಹ ಬೇಡ. ಬಹಿರಂಗ ಸವಾಲು ಹಾಕುವ ವಿರೋಧಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ದರ್ಪತನವನ್ನು ಕಾರ್ಯಕರ್ತರು ಬೆಳೆಸಿಕೊಳ್ಳಬೇಕು ಎಂದು ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ