ಕುಷ್ಟಗಿ: ತಾಲೂಕಿನ ಶಾಲೆಗಳ ಅಭಿವೃದ್ಧಿಗಾಗಿ ಸುಮಾರು ₹22 ಕೋಟಿ ಅನುದಾನ ಮಂಜೂರಾಗಿದೆ. ಅನುದಾನದಲ್ಲಿ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ತಾಲೂಕಿನ ಕಂದಕೂರ ಗ್ರಾಮದಲ್ಲಿ 2020-21ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಸುಮಾರು ₹50 ಲಕ್ಷದಲ್ಲಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಐದು ನೂತನ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಸಾಧನೆಗೆ ಶಿಕ್ಷಣವೇ ಆಸರೆ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ನರೇಗಾದಲ್ಲಿ ಶಾಲೆಯ ಹಾಗೂ ಗ್ರಾಮದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಕ್ರಿಯಾಯೋಜನೆ ರೂಪಿಸಲು ಸೂಚಿಸುತ್ತೇನೆ ಎಂದರು.ಅನುದಾನದಲ್ಲಿ ಕುಷ್ಟಗಿ ಕ್ಷೇತ್ರದಲ್ಲಿ ಶಾಲೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಶಾಲೆಯಲ್ಲಿ ಸಿಗುವ ಶಿಕ್ಷಣದ ಜೊತೆಗೆ ಪಾಲಕರು ಮನೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಆಗ ಮಾತ್ರ ಭವಿಷ್ಯದ ಅತ್ಯುನ್ನತ ಪ್ರಜೆಗಳನ್ನು ಹುಟ್ಟಿಹಾಕಲು ಸಾಧ್ಯ. ಆದಷ್ಟು ಮಕ್ಕಳಿಗೆ ಮೊಬೈಲ್ ಬಳಕೆ ತಪ್ಪಿಸಿ ಮಕ್ಕಳಿಗೆ ಅಭ್ಯಾಸ ಮಾಡಲು ಒತ್ತು ನೀಡಬೇಕು. ಮೊಬೈಲ್ನಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲವೂ ಇರುತ್ತೆ. ಹೀಗಾಗಿ ಮಕ್ಕಳು ಮೊಬೈಲ್ ದಾಸರಾಗದೇ ಶಿಕ್ಷಣಕ್ಕೆ ಹೆಚ್ಚಿನ ಒಲವು ನೀಡಬೇಕು ಎಂದರು.ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ಗ್ರಾಪಂನಿಂದ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡಿಕೊಡಬೇಕು. ಸಾರ್ವಜನಿಕರು ಶಾಲೆಯ ಅಭಿವೃದ್ಧಿ ಕಡೆ ಗಮನ ಕೊಡಬೇಕು. ಎಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಮಕ್ಕಳ ಭವಿಷ್ಯ ಉಜ್ವಲವಾಗಲಿ. ಶಿಕ್ಷಕರ ಕಾರ್ಯಕ್ಕೆ ಸಹಕಾರ ಇರಬೇಕು ಎಂದರು.ತಾಪಂ ಇಒ ನಿಂಗಪ್ಪ ಮಸಳಿ ಮಾತನಾಡಿ, ಶಾಲೆಗೆ ಅಭಿವೃದ್ಧಿಗೆ ಇಲಾಖೆಯಿಂದ ಸಾಧ್ಯವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡಲು ಪಿಡಿಒಗಳಿಗೆ ಸೂಚನೆ ನೀಡಲಾಗುವುದು ಎಂದರು.ಎಸ್ಡಿಎಮ್ಸಿ ಅಧ್ಯಕ್ಷ ಮಾರುತಿ ಹಲಗಿ ಮಾತನಾಡಿ, ನಮ್ಮ ಶಾಲೆಗೆ ಇಂಗ್ಲಿಷ್ ಶಿಕ್ಷಕರು, ದೈಹಿಕ ಶಿಕ್ಷಕರು, ಪೀವನ್ ಬೇಕು. ಅಡುಗೆ ಕೋಣೆ, ಇಕೋ ಪಾರ್ಕ್, ಶುದ್ಧ ಕುಡಿಯುವ ನೀರಿನ ಘಟಕ, ಮೂತ್ರಾಲಯ ಸೌಲಭ್ಯ ಕೊಡಬೇಕು ಎಂದರು.ಈ ಸಂದರ್ಭದಲ್ಲಿ ಬಸವರಾಜ ಹಳ್ಳೂರು, ವಿಜಯಕುಮಾರ ಹಿರೇಮಠ, ಅಶೋಕ ಬಳೂಟಗಿ, ಶರಣಪ್ಪ ಬಿಜಕಲ್, ಕಂದಕೂರಪ್ಪ ವಾಲ್ಮೀಕಿ, ವೀರೇಶಯ್ಯ ಮಠಪತಿ , ಶರಣಪ್ಪ ಗೋಪಾಳಿ, ನಿಂಗಪ್ಪ ಕುರ್ನಾಳ, ಎಸ್.ವೈ. ಚೆನ್ನಿ, ಬಸವರಾಜ ಕಾಮನೂರು, ಆದೇಶ ಜೆಇ, ಇರ್ಫಾನ್ ಪಠಾಣ, ಭೀಮನಗೌಡ ಪೊಲೀಸ್ ಪಾಟೀಲ, ಚಂದ್ರಹಾಸ ಬಾವಿಕಟ್ಟಿ, ಸಲೀಮಸಾಬ ಟೆಂಗುಂಟಿ, ಮಂಜುನಾಥ್ ಸಂಕಿನ ಸೇರಿದಂತೆ ಶಾಲಾ ಶಿಕ್ಷಕರು ಶಿಕ್ಷಕಿಯರು ಗ್ರಾಮಸ್ಥರು ಇದ್ದರು.