ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮರಿತಿಬ್ಬೇಗೌಡರು ಶಿಕ್ಷಕ ಮತದಾರರಿಗೆ ಚಿರಪರಿಚಿತರು. ಸತತ ನಾಲ್ಕು ಅವಧಿಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಶಿಕ್ಷಣ ಕ್ಷೇತ್ರದ ಸರ್ವ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹೋರಾಟ ನಡೆಸಿರುವ ಸಮರ್ಥ ಹೋರಾಟಗಾರ ಎಂದರು.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದ ಮರಿತಿಬ್ಬೇಗೌಡರು ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಪರ ಕೆಲಸ ಮಾಡಿ ಜಿಲ್ಲೆಯಲ್ಲಿ ಪಕ್ಷದ ಶಕ್ತಿ ಹೆಚ್ಚಿಸಿದ್ದಾರೆ. ಕಾಂಗ್ರೆಸ್ ಅಧಿಕಾರದ್ದು ಶಿಕ್ಷಕ ಸಮುದಾಯ ಮರಿತಿಬ್ಬೇಗೌಡರನ್ನು ಪುನರಾಯ್ಕೆ ಮಾಡಿ ಶಾಸನ ಸಭೆಗೆ ಕಳುಹಿಸಿದರೆ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಬಹುದೊಡ್ಡ ಶಕ್ತಿಯಾಗಲಿದ್ದಾರೆ ಎಂದರು.ಜೆಡಿಎಸ್-ಬಿಜೆಪಿ ಮೈತ್ರಿಕೂಟ ಗೊಂದಲ ಗೂಡಾಗಿದೆ. ಮೊದಲು ಬಿಜೆಪಿ ಈ.ಸಿ.ನಿಂಗರಾಜೇಗೌಡ ಅವರ ಹೆಸರನ್ನು ಪ್ರಕಟಿಸಿ ಕೈಬಿಟ್ಟಿದ್ದಾರೆ. ಹಿರಿಯ ಹೋರಾಟಗಾರ ಕೆ.ಟಿ.ಶ್ರೀಕಂಠೇಗೌಡರಿಗೂ ಟಿಕೆಟ್ ನೀಡಿಲ್ಲ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇಲ್ಲದ ಕೆ.ವಿವೇಕಾನಂದ ಅವರಿಗೆ ಟಿಕೆಟ್ ನೀಡಿದೆ ಎಂದು ಟೀಕಿಸಿದರು.
ಜೆಡಿಎಸ್ ಹೋರಾಟಗಾರನಿಗೆ ಟಿಕೆಟ್ ನೀಡಿಲ್ಲ. ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಕನಿಷ್ಠ ಪದವೀಧರರೂ ಅಲ್ಲ. ಇವರು ಒಂದೇ ಒಂದು ದಿನ ಶಿಕ್ಷಕರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿಲ್ಲ. ಶಿಕ್ಷಣ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸುವ ಸಾಮರ್ಥ್ಯ ಮರಿತಿಬ್ಬೇಗೌಡರಿಗೆ ಮಾತ್ರ ಇದೆ. ಇವರನ್ನು ಕಳೆದುಕೊಂಡರೆ ಸದನದಲ್ಲಿ ಶಿಕ್ಷಕರ ಧ್ವನಿ ಕಳೆದು ಹೋಗಲಿದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ನಮ್ಮ ಸರ್ಕಾರ ಶಿಕ್ಷಕರ ಸಮಸ್ಯೆ ಪರಿಹರಿಸಲು ಬದ್ಧವಾಗಿದೆ. ಮರಿತಿಬ್ಬೇಗೌಡ ಪುನರಾಯ್ಕೆಯಾದರೆ ಅವರು ಮತ್ತೆ ಮೇಲ್ಮನೆಯ ಉಪ ಸಭಾಪತಿಯಾಗಲಿದ್ದಾರೆ. ಇದರ ಲಾಭ ಶಿಕ್ಷಕ ಸಮುದಾಯಕ್ಕೆ ಸಿಗಲಿದೆ ಎಂದರು.ಈ ವೇಳೆ ಕರ್ನಾಟಕ ನಗರಾಭಿವೃದ್ಧಿ ಮೂಲ ಸೌಕರ್ಯ ಹಾಗೂ ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಕಲ್ಪತರು ವಿದ್ಯಾ ಸಂಸ್ಥೆ ಅಧ್ಯಕ್ಷ ವಿಠಲಾಪುರ ಜಯರಾಂ, ನಿವೃತ್ತ ಪ್ರಾಂಶುಪಾಲ ರಾಜಯ್ಯ, ಮುಖಂಡರಾದ ಹೊಸಹೊಳಲು ಶಿವಣ್ಣ, ಐಚನಹಳ್ಳಿ ಶಿವಣ್ಣ, ಸಿ.ಬಿ.ಚೇತನಕುಮಾರ್ ಸೇರಿದಂತೆ ಹಲವರು ಇದ್ದರು.