ಕನ್ನಡಪ್ರಭ ವಾರ್ತೆ ಬೀದರ್
ಗುರುವಾರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರೂ ಸಹೋದರರಂತೆ ಇದ್ದು ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗುವಂತೆ ಎಲ್ಲ ಮಹಾತ್ಮರೂ ತಿಳಿಸಿದ್ದಾರೆ, ಅದನ್ನು ನಾವೆಲ್ಲರೂ ಪಾಲಿಸಬೇಕು ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ಕರೆ ನೀಡಿದರು.
ವಾಲ್ಮಿಕಿ ಭವನದ ಕಂಪೌಂಡ್ ಗೋಡೆಗಾಗಿ ₹10ಲಕ್ಷ ನೀಡಬೇಕೆಂದು ಸಮಾಜದ ಮುಖಂಡ ಮಾರುತಿ ಮಾಸ್ಟರ್ ಅವರ ಮನವಿಗೆ ಸ್ಪಂದಿಸಿ ಕೂಡಲೇ ₹10ಲಕ್ಷ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಸಂಸದ ಸಾಗರ ಖಂಡ್ರೆ ಮಾತನಾಡಿ, ಮಹಾತ್ಮರ ಜಯಂತಿ ಆಚರಿಸಿದರೆ ಸಾಲದು, ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಡಾ.ರಾಮಚಂದ್ರ ಗಣಾಪೂರ ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿಯವರು 24 ಸಾವಿರ ಶ್ಲೋಕಗಳನ್ನು ರಚಿಸಿ ಸಮಾಜಕ್ಕೆ ನೀಡಿದ್ದಾರೆ. ತ್ರೇತಾಯುಗದಿಂದ ಕಲಿಯುಗದವರೆಗೆ ಅವರ ರಾಮಾಯಣದ ಮಹಾಕಾವ್ಯ ಛಾಪು ಮೂಡಿಸಿ ಪ್ರಸಿದ್ದಿ ಪಡೆದಿದೆ. ವಾಲ್ಮೀಕಿ ಮಹರ್ಷಿ ಅವರು ಜಗತ್ತು ಮೆಚ್ಚುವಂತಹ ಕಾವ್ಯ ನೀಡಿದ್ದು ಅದರಲ್ಲಿ ರಾಜ, ಪ್ರಜೆ, ಪತಿ, ಸಹೋದರರು ಹೇಗೆ ಇರಬೇಕು ಎಂಬುದನ್ನುಬಿಂಬಿಸಿದ್ದಾರೆಮ ಅವರ ಸಂದೇಶಗಳು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಟೋಕರಿ ಕೋಲಿ ಸಮಾಜದ ವಿದ್ಯಾರ್ಥಿನಿ ಆರತಿ ಗಣಪತಿ ಅವರು ಎಸ್ಎಸ್ಎಲ್ಸಿಯಲ್ಲಿ 625ಕ್ಕೆ 620 ಅಂಕ ಗಳಿಸಿದ್ದಕ್ಕೆ ಸರ್ಕಾರದಿಂದ ₹1ಲಕ್ಷ ಚೆಕ್ ನೀಡಿ ಅಭಿನಂದಿಸಲಾಯಿತು.