ಭೀಮಣ್ಣ ನಾಯ್ಕರಿಗೆ ಸುಳ್ಳು ಹೇಳುವ ಶಾಸಕ ಪ್ರಶಸ್ತಿ ಕೊಡಿ: ಅನಂತಮೂರ್ತಿ ಹೆಗಡೆ

KannadaprabhaNewsNetwork | Published : Feb 5, 2025 12:32 AM

ಸಾರಾಂಶ

ಸೂಪರ್ ಸ್ಪೆಷಾಲಿಟಿ ಸಾಮಗ್ರಿ ತೆಗೆದು ಹಾಕಿ, ಕೇವಲ ₹೬ ಕೋಟಿ ಒಳಗಡೆ ಪ್ರಸ್ತಾವನೆ ಸಲ್ಲಿಸಿ ಎಂದು ಆಸ್ಪತ್ರೆಯ ಹಿಂದಿನ ಆಡಳಿತಾಧಿಕಾರಿಗಳ ಮೇಲೆ ನಿರಂತರ ಒತ್ತಡ ಹಾಕಿದ್ದರು. ಅವರು ಒಪ್ಪದೇ ಅವರನ್ನು ಬದಲಾವಣೆ ಮಾಡಿಸಿದರು ಎಂದು ಅನಂತಮೂರ್ತಿ ಹೆಗಡೆ ಆರೋಪಿಸಿದರು.

ಶಿರಸಿ: ರಾಜ್ಯದ ೨೨೪ ಶಾಸಕರಲ್ಲಿ ಹೆಚ್ಚು ಸುಳ್ಳು ಹೇಳುವ ಶಾಸಕ ಪ್ರಶಸ್ತಿ ಇದ್ದರೆ ಅದನ್ನು ಶಿರಸಿಯ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಕೊಡಬೇಕು ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆ ಎಂದು ತೀರ್ಮಾನ ಮಾಡಿ ₹೬ ಕೋಟಿ ಹಣಕ್ಕಿಂತ ಜಾಸ್ತಿ ಅನುದಾನ ಸಾಧ್ಯವಿಲ್ಲ ಎಂದು ಸರ್ಕಾರ ತಿರಸ್ಕಾರ ಮಾಡಿದ ಮೇಲೆ ಆಸ್ಪತ್ರೆಯ ರೂಪವನ್ನೇ ಕೆಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಸೂಪರ್ ಸ್ಪೆಷಾಲಿಟಿ ಸಾಮಗ್ರಿ ತೆಗೆದು ಹಾಕಿ, ಕೇವಲ ₹೬ ಕೋಟಿ ಒಳಗಡೆ ಪ್ರಸ್ತಾವನೆ ಸಲ್ಲಿಸಿ ಎಂದು ಆಸ್ಪತ್ರೆಯ ಹಿಂದಿನ ಆಡಳಿತಾಧಿಕಾರಿಗಳ ಮೇಲೆ ನಿರಂತರ ಒತ್ತಡ ಹಾಕಿದ್ದರು. ಅವರು ಒಪ್ಪದೇ ಅವರನ್ನು ಬದಲಾವಣೆ ಮಾಡಿಸಿದರು. ಕಳೆದ ನ. ೨೦ರಂದು ಡಾ. ನೇತ್ರಾವತಿ ಸಿರ್ಸಿಕರ್ ಅಧಿಕಾರ ಸ್ವೀಕರಿಸಿದ್ದರು. ಬಳಿಕ ನ. ೨೬ರಂದು ₹೫.೨೦ ಕೋಟಿ ವೆಚ್ಚದ ವೈದ್ಯಕೀಯ ಉಪಕರಣಗಳ ಪ್ರಸ್ತಾವನೆ ಕಳಿಸುತ್ತಿರಿ. ಇದೇನಾ ನಿಮ್ಮ ಆಡಳಿತ ವೈಖರಿ? ಎಂದು ಪ್ರಶ್ನಿಸಿದರು.

ಆಸ್ಪತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ₹೧೮.೫ ಕೋಟಿ ಉಪಕರಣಕ್ಕೆ ಬಂದಿದೆ ಎಂದಿದ್ದೀರಿ. ಎಲ್ಲಿ ಬಂದಿದೆ ಬರಿ ಸುಳ್ಳು. ಇನ್ನೂ ಸಾಮಗ್ರಿಗಾಗಿ ಟೆಂಡರ್ ಕರೆಯಲಿಲ್ಲ ಎನ್ನುವುದೂ ಮಾಹಿತಿ ಹಕ್ಕು ಇಲಾಖೆಯಡಿ ದಾಖಲೆ ಸಿಕ್ಕಿದೆ. ಆಸ್ಪತ್ರೆಯ ಶೇ. ೮೦ರಷ್ಟು ಕೆಲಸ ಮುಗಿದು ಐದು ತಿಂಗಳಾದರೂ ಇದುವರೆಗೆ ಟೆಂಡರ್ ಕರೆಯದಿರುವುದಕ್ಕೆ ಕಾರಣ ತಿಳಿಸಬೇಕು. ಯಾವುದೇ ವೈದ್ಯರ ನೇಮಕಾತಿ ಆಗಿಲ್ಲ. ಈ ಹಿಂದೆ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಧ್ವನಿ ಎತ್ತುತ್ತಿದ್ದ ಕಾಂಗ್ರೆಸ್ ಸರ್ಕಾರ ಈಗ ತನ್ನ ನಿಲುವು ಬದಲಿಸಿದೆ ಎಂದರು.

ಬಡವರಿಗೆ ಉಚಿತವಾಗಿ ಸಿಗಬಹುದಾಗಿದ್ದ ಹಾರ್ಟ್ ಆಪರೇಷನ್, ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಮತ್ತಿತರ ವೈದ್ಯಕೀಯ ಉಪಕರಣವನ್ನು ತಿಂದು ಹಾಕಿರುವುದು ಅಕ್ಷಮ್ಯ ಅಪರಾಧ. ಶಾಸಕರು ಇದೇ ರೀತಿ ಮೌನ ವಹಿಸಿದರೆ, ಫೆ. ೨೦ರ ನಂತರ ನಮ್ಮ ಮುಂದಿನ ಹೋರಾಟ ನಿರ್ಧರಿಸುತ್ತೇವೆ ಎಂದು ಎಚ್ಚರಿಸಿದರು.ನಾಗರಾಜ ನಾಯ್ಕ, ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ್, ಶಿವಾನಂದ ದೇಶಳ್ಳಿ, ಪ್ರೇಮಕುಮಾರ್ ನಾಯ್ಕ, ರಂಗಪ್ಪ ದಾಸನಕೊಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.ಮೀಟರ್ ಬಡ್ಡಿ ದಂಧೆಕೋರರ ಮೇಲೆ ಎಸ್ಪಿ ನೇತೃತ್ವದ ತಂಡ ದಾಳಿ

ಮುಂಡಗೋಡ: ಪಟ್ಟಣ ಸೇರಿದಂತೆ ತಾಲೂಕಿನ ಮೀಟರ್ ಬಡ್ಡಿ ದಂಧೆಕೋರರ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವವರ ಮನೆಯ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಗಿದ್ದು, ಕೆಲವರನ್ನು ವಶಕ್ಕೆ ಪಡೆದರೆ, ಹಲವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸೋಮವಾರ ಮಧ್ಯರಾತ್ರಿ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲೆಯ ಸುತ್ತಮುತ್ತ ತಾಲೂಕುಗಳ ಹತ್ತಾರು ಸಿಪಿಐ, ಪಿಎಸ್ಐ, ಎಎಸ್ಐಗಳ ತಂಡ ಮತ್ತು ಜಿಲ್ಲಾ ಮೀಸಲು ಪಡೆ ತುಕಡಿ ಸೇರಿದಂತೆ ನೂರಾರು ಸಂಖ್ಯೆಯ ಪೊಲೀಸರು ಏಕಕಾಲಕ್ಕೆ ವಿವಿಧೆಡೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಇಷ್ಟೊಂದು ದೊಡ್ಡ ಪ್ರಮಾಣದ ದಾಳಿ ನಡೆದರೂ ಸ್ಥಳಿಯ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ದಾಳಿ ನಡೆಯುವ ಮುನ್ನವೇ ಬಹುತೇಕ ದಂಧೆಕೋರರು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Share this article