ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ 2ನೇ ಅವಧಿಯ ಸಂಪುಟ ವಿಸ್ತರಣೆಯ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಭಾಗದ ಸರಳ, ಸಜ್ಜನಕೆ ವ್ಯಕ್ತಿತ್ವದ ರಾಜಕಾರಿಣಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ್ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರಿಗೆ ಈ ಬಾರಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಿ ಗೌರವಸಬೇಕು ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ಆಗ್ರಹಿಸಿದ್ದಾರೆ.ಪಟ್ಟಣದ ಪಿಎಲ್ಡಿ ಬ್ಯಾಂಕಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಗೌಡರು ಸುದೀರ್ಘ 45 ವರ್ಷಗಳ ರಾಜಕೀಯ ಅನುಭವ ಹೊಂದಿದ್ದಾರೆ. ಹಿರಿತನದ ಆಧಾರದ ಮೇಲೆ ಸೂಕ್ತ ಸ್ಥಾನ ನೀಡಿ ಗೌರವಿಸಬೇಕು. ಚುನಾವಣಾ ಪ್ರಚಾರ ವೇಳೆ ಮತಕ್ಷೇತ್ರದ ಜನರಿಗೆ ಕಾಂಗ್ರೆಸ್ ವರಿಷ್ಠರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತು ಕೊಟ್ಟಿದ್ದರು. ಪ್ರಾರಂಭದಲ್ಲೂ ಅವಕಾಶ ಕೊಡಲಿಲ್ಲ. ಸದ್ಯ 2ನೇ ಅವಧಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡಬೇಕೆಂದು ಜನರ ಕೂಗು ಕೇಳಿಬರುತ್ತಿದೆ. ಇಲ್ಲದಿದ್ದರೇ ಪಕ್ಷದ ಮೇಲೆ ಕಾರ್ಯಕರ್ತರು ಹಾಗೂ ಮುಖಂಡರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಆಗ ಪಕ್ಷವೂ ಮುಜುಗರಕ್ಕೆ ಒಳಪಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನಾಡಗೌಡರು ಒಬ್ಬ ನಿಷ್ಠಾವಂತ ಹಾಗೂ ಜಾತ್ಯಾತೀತ ಸಭ್ಯಸ್ಥ, ಹಿರಿಯ ರಾಜಕಾರಣಿಯಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಹಲವು ಮಹತ್ವದ ಹುದ್ದೆ ನೀಡಿದ್ದು, ಅವುಗಳೆಲ್ಲವನ್ನು ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ನಿಷ್ಠುರರಾಗಿ ಒಂದೂ ಕಪ್ಪು ಚುಕ್ಕೆ ಇಲ್ಲದೇ ಜವಾಬ್ದಾರಿ ಹೊತ್ತು ಉತ್ತಮ ಜನಪರ ಆಡಳಿತ ಮಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಅವರ ಅನುಭವಕ್ಕೆ, ಹಿರಿತನಕ್ಕೆ ಸರಕಾರ ಬಂದಾಗಲೆಲ್ಲ ಅವರನ್ನು ಮಂತ್ರಿಯನ್ನಾಗಿ ಮಾಡಬೇಕಿತ್ತು, ಆದರೇ ಅವರು ಯಾವತ್ತಿಗೂ ಆಸೆ ಪಟ್ಟವರಲ್ಲ. ಹಾಗಂತ ಶಾಸಕರನ್ನು ಹಿಂದೆ ಸರಿಸುವುದು ಕೂಡ ಉತ್ತಮ ಬೆಳವಣಿಗೆಯಲ್ಲ. ಕಾರಣ ಹೈಕಮಾಂಡ್ನವರು ಈ ಬಾರಿ ನಾಡಗೌಡರಿಗೆ ಮಂತ್ರಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.