ವಿಶೇಷಚೇತನರಿಗೆ ಅವಕಾಶ, ಮನ್ನಣೆ ನೀಡಿ

KannadaprabhaNewsNetwork | Published : Jun 29, 2025 1:36 AM

ಅಂಗವಿಕಲರಿಗೆ ಅವಕಾಶ ಮತ್ತು ಸಮಾನ ಮನ್ನಣೆ ನೀಡಿ ಎಲ್ಲರನ್ನು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದ್ದಾರೆ.

- ನೇರಳೆ ಮೇಳ ಉದ್ಘಾಟಿಸಿ ನ್ಯಾ. ಮಹಾವೀರ ಮ. ಕರೆಣ್ಣವರ ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಂಗವಿಕಲರಿಗೆ ಅವಕಾಶ ಮತ್ತು ಸಮಾನ ಮನ್ನಣೆ ನೀಡಿ ಎಲ್ಲರನ್ನು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದರು.

ನಗರದ ಸಂಯೋಜಿತ ಪ್ರಾದೇಶಿಕ ಕೇಂದ್ರ (ದಿವ್ಯಾಂಗಜನ್)-ಸಿಆರ್‌ಸಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕರ್ನಾಟಕದಲ್ಲಿ ಮೊದಲ ನೇರಳೆ ಮೇಳವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಲೆ, ಸಂಸ್ಕೃತಿ, ಕ್ರೀಡಾ ಪ್ರತಿಭೆಗಳು ಮತ್ತು ಅಂಗವಿಕಲ ವ್ಯಕ್ತಿಗಳ ಉದ್ಯಮಶೀಲತೆಯಲ್ಲಿ ಅವರ ವಿಶೇಷ ಸಾಮರ್ಥ್ಯಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಶಕ್ತಿ ಸಾಮರ್ಥ್ಯಗಳನ್ನು ಪ್ರಾಮಾಣಿಕವಾಗಿ ಗುರುತಿಸಿ, ಸರಿಯಾದ ಮನೋಭಾವದಿಂದ ನಿರ್ವಹಿಸಿದಲ್ಲಿ ಅದ್ವಿತೀಯ ಯಶಸ್ಸನ್ನು ಕಾಣುತ್ತಾರೆ. ಇಂತಹ ಅಭೂತಪೂರ್ವ ಸಾಧನೆ ಮಾಡಬೇಕೆಂದರೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ನಮ್ಮ ಗುರಿ ಸಹ ಉನ್ನತ ಮಟ್ಟದಲ್ಲಿರಬೇಕು. ಪ್ರತಿಯೊಬ್ಬರೂ ಸಿಆರ್‌ಸಿಯ ಸೌಲಭ್ಯಗಳು ಮತ್ತು ಯೋಜನೆಗಳನ್ನು ಬಳಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕೆಂದು ಪ್ರೋತ್ಸಾಹಿಸಿದರು.

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಎಸ್.ನಟರಾಜ್ ಮಾತನಾಡಿ, ನೇರಳೆ ಬಣ್ಣವು ವಿಕಲಚೇತನರ ಘನತೆ ಸಂಕೇತವಾಗಿದೆ. ರಾಜ್ಯ ಸರ್ಕಾರದ ಸಿಗುವ ವಿವಿಧ ಯೋಜನೆಗಳ ಬಗ್ಗೆ ಅವರು ವಿವರಿಸಿದ ಅವರು, ಸಂಯೋಜಿತ ಪ್ರಾದೇಶಿಕ ಕೇಂದ್ರದ (ಸಿಆರ್‌ಸಿ) ಒಂದೇ ಸೂರಿನಡಿ ವಿಕಲಚೇತನರಿಗೆ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯಗಳನ್ನು ಹೊದಗಿಸುವುದೇ ಸದುದ್ದೇಶವಾಗಿದೆ. ಈ ನೇರಳೆ ಕಾರ್ಯಕ್ರಮ ವಿಕಲಚೇತನರನ್ನು ಗೌರವಿಸುತ್ತದೆ. ಅವರ ಸಾಮರ್ಥ್ಯಗಳನ್ನು ಬೆಳಕಿಗೆ ತರಲು ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕಿದೆ ಎಂದರು.

ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪುರೆ ಮಾತನಾಡಿ, ಅಂಗವಿಕಲ ವ್ಯಕ್ತಿಗಳಿಗೆ ಸಾಮರ್ಥ್ಯವಿದೆ. ಆದರೆ ಅವಕಾಶಗಳಿಂದ ವಂಚಿತರಾಗಿ ಅತಂತ್ರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಪ್ರಸ್ತುತ ಇಂದಿಗೂ ಕೆಲವು ಅಂಗವಿಕಲರು ತಮ್ಮ ಅಂಗವೈಕಲ್ಯತೆ ಮರೆಮಾಚಿ ಜೀವನ ನಡೆಸುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹಿಸಬೇಕು ಎಂದರು.

ಸಿಆರ್‌ಸಿ ನಿರ್ದೇಶಕಿ ಮಿನಾಕ್ಷಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಬೆಂಗಳೂರು ನಗರ ಜಿಲ್ಲೆಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಂಗವಿಕಲರ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಡಾ. ಕೆ.ಕೆ.ಪ್ರಕಾಶ್, ಎಸ್.ಎಸ್. ಆಸ್ಪತ್ರೆಯ ನರವಿಜ್ಞಾನಿ ಡಾ.ರಚಿತಾ ಹಾಗೂ ವಿಶೇಷಚೇತನ ಫಲಾನುಭವಿಗಳು, ಎನ್‌ಜಿಒಗಳು, ಪೋಷಕರು, ವಿವಿಧ ವಿಶೇಷ ಶಾಲೆ ಮಕ್ಕಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

- - -

-28ಕೆಡಿವಿಜಿ43: ದಾವಣಗೆರೆಯಲ್ಲಿ ನಡೆದ ನೇರಳೆ ಮೇಳವನ್ನು ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಉದ್ಘಾಟಿಸಿದರು.