ಶಿಕ್ಷಣದ ಜತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಿ

KannadaprabhaNewsNetwork | Published : Jun 7, 2024 12:31 AM

ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ

ಗಜೇಂದ್ರಗಡ: ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡೆಗಳತ್ತ ವಿದ್ಯಾರ್ಥಿಗಳ ಹಾಗೂ ಪಾಲಕರ ಆಸಕ್ತಿ ಕ್ಷೀಣವಾಗುತ್ತಿದ್ದು, ವಿದ್ಯಾರ್ಥಿಗಳ ಶಿಕ್ಷಣದ ಜತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದು ಡಾ. ಪ್ರಶಾಂತ ಪಾಟೀಲ ಹೇಳಿದರು.

ಪಟ್ಟಣದ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಕರ್ನಾಟಕ ವಿಶ್ವ ವಿದ್ಯಾಲಯ ಪುರುಷರ ೨ನೇ ವಲಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ವಿಷಯಾಧಾರಿತ ಉಪನ್ಯಾಸಕರು ೨-೩ ರಿಂದ ದಿನಗಳ ಕಾಲ ರಜೆಯಾದರೆ ಉಪನ್ಯಾಸಕರು ಬಂದಿಲ್ಲ ಎನ್ನುವ ಚರ್ಚೆಗಳು ಆಗುತ್ತವೆ. ಆದರೆ ದೈಹಿಕ ಶಿಕ್ಷಕರು ಆಗಮಿಸದಿದ್ದರೆ ವಿದ್ಯಾರ್ಥಿಗಳಾಗಲಿ ಅಥವಾ ಪಾಲಕರಿಗೆ ವ್ಯತ್ಯಾಸಗಳಾಗದ್ದು ಕಂಡು ಬರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿದಷ್ಟೇ ಕ್ರೀಡೆಗಳಿಗೆ ಆದ್ಯತೆ ನೀಡಬೇಕು ಎಂದರು.

ಕವಿವಿ ದೈಹಿಕ ಮತ್ತು ಕ್ರೀಡಾ ವಿಭಾಗದ ಡಾ.ಬಿ.ಎಂ. ಪಾಟೀಲ ಮಾತನಾಡಿ, ಕ್ರೀಡೆಗಳಲ್ಲಿ ಅಗಾಧ ಶಕ್ತಿ ಅಡಕವಾಗಿದ್ದು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಕ್ರೀಡಾ ಮನೋಭಾವ ಬೆಳೆಸಲು ಸಹಕಾರಿಯಾಗಿವೆ. ಅಲ್ಲದೆ ಕ್ರೀಡಾಪಟುಗಳ ಸಾಧನೆಗಳು ಗ್ರಾಮದಿಂದ ಹಿಡಿದು ದೇಶದ ಕೀರ್ತಿ ಪ್ರಜ್ವಲಿಸುವಂತೆ ಮಾಡಿದ್ದು, ಅಂತಹ ಕ್ರೀಡಾಪಟುಗಳನ್ನು ಮಾದರಿಯನ್ನಾಗಿ ಮಾಡಿಕೊಂಡು ಕ್ರೀಡಾ ಸಾಧನೆಗೆ ಮುಂದಾಗಬೇಕು ಎಂದ ಅವರು, ಜಿಲ್ಲೆಯಲ್ಲಿ ಕಳೆದ ೨೦ಕ್ಕೂ ಅಧಿಕ ವರ್ಷಗಳಿಂದ ಶೈಕ್ಷಣಿಕ, ಕ್ರೀಡಾಕೂಟದಲ್ಲಿ ತನ್ನದೆಯಾದ ಸಾಧನೆ ಮಾಡುತ್ತಿರುವ ಪಟ್ಟಣದ ಬಿಎಸ್‌ಎಸ್ ಕಾಲೇಜಿನಲ್ಲಿ ನಡೆಯುತ್ತಿರುವ ಕವಿವಿ ಪುರುಷರ ೨ನೇ ವಲಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ೧೫ ತಂಡಗಳು ಭಾಗವಹಿಸಿದ್ದು ಖುಷಿ ತಂದಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಮಹೇಂದ್ರ ಜಿ ಮಾತನಾಡಿ, ಕಾಲೇಜಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕಾಲೇಜಿನಲ್ಲಿ ಉತ್ತಮ ವಾತಾವರಣವಿದ್ದು, ಈಗಾಗಲೇ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಯು ಹೆಮ್ಮೆಯ ವಿಷಯವಾಗಿದೆ. ಕಾಲೇಜಿನಲ್ಲಿ ನಡೆಯುತ್ತಿರುವ ೨ನೇ ವಲಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಗಳಲ್ಲಿ ಗೆಲುವು ಹಾಗೂ ಸೋಲು ಅಂತಿಮವಲ್ಲ. ಹೀಗಾಗಿ ಕ್ರೀಡಾಪಟುಗಳು ಸೋಲು ಮತ್ತು ಗೆಲುವನ್ನು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಂಡು ಮುಂದಿನ ಸಾಧನೆಗೆ ಅಣಿಯಾಗಬೇಕು ಎಂದರು.

ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ಸವಿತಾ ಬಿದರಳ್ಳಿ ಹಾಗೂ ಅಜಿತ ಬಾಗಮಾರ, ಅಜಿತ ವಂದಕುದರಿ, ಎ.ಡಿ.ಕೋಲಕಾರ, ಎಫ್.ಎಸ್.ಕರಿದುರಗನವರ, ರಫೀಕ್ ತೋರಗಲ್, ಮುತ್ತಣ್ಣ ಮ್ಯಾಗೇರಿ, ಶ್ರೀಧರ ಬಿದರಳ್ಳಿ, ಆರ್.ಎಂ.ರಾಯಬಾಗಿ, ರಾಜೇಶ್ವರಿ ಕಾಲವಾಡಮಠ, ಸುಮಂಗಲಾ ಇಟಗಿ ಮತ್ತು ಲಕ್ಷ್ಮಣ ಹುಲ್ಲೂರ, ಡಾ.ಎಂ.ವಾಯ್.ಜಟ್ಟೇಣವರ, ಹಿತೇಶ ಬಿ, ಬಿ.ವಿ.ಮುನವಳ್ಳಿ, ಪ್ರಕಾಶ ದಿವಾಣದ ಸೇರಿ ಇತರರು ಇದ್ದರು.