ಶಿರಸಿ: ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನಿಡಬೇಕು. ಆಗ ಮಾತ್ರ ಶಿಕ್ಷಣ ಸಂಸ್ಥೆಗಳ ಪ್ರಯತ್ನ ಸಾರ್ಥಕವಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಮೋಟಿನ್ಸರ್ ತಿಮ್ಮಪ್ಪ ಹೆಗಡೆ ೬೫ ವರ್ಷಗಳ ಹಿಂದೆ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕು ಎಂದು ಕನಸುಕಂಡು ಸ್ಥಾಪಿಸಿದ ಎಂಇಎಸ್ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಅವರ ಅಭಿಲಾಷೆಯಿಂದ ಅದೆಷ್ಟೋ ಸಹಸ್ರ ಸಂಖ್ಯೆ ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವಂತಾಗಿದೆ. ಮೋಟಿನ್ಸರ್ ನಂತರ ಸಂಸ್ಥೆಯ ಜವಾಬ್ದಾರಿ ಹೊತ್ತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರು ಸಂಸ್ಥೆಯ ಏಳ್ಗೆಗೆ ಶ್ರಮಿಸಿದ್ದಾರೆ, ಶಿಕ್ಷಣ ಪಡೆದರಷ್ಟೇ ಅಭಿವೃದ್ಧಿ ಸಾಧ್ಯ ಎಂದು ಮನಗಂಡು ಅವರು ಆ ಕಾಲದಲ್ಲಿ ಹೆಜ್ಜೆ ಇಟ್ಟಿದ್ದರಿಂದ ಫಲಪ್ರದವಾಗಿದೆ ಎಂದರು.
ಬೇರೆ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳವರು ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ನೀಡಿ ತಮ್ಮ ಸಂಸ್ಥೆಯ ಫಲಿತಾಂಶ ಸಾಧನೆ ಹೇಳುತ್ತಾರೆ. ಅವರು ಇಲ್ಲಿನ ಪ್ರತಿಭಾವಂತರನ್ನು ಮಾತ್ರ ಅಲ್ಲದೇ ಶಿಕ್ಷಣದಲ್ಲಿ ಸ್ವಲ್ಪ ಹಿಂದುಳಿದ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಿ ಅವರಿಗೂ ಉತ್ತಮ ಶಿಕ್ಷಣ ನೀಡಿ ಅವರಿಂದಲೂ ಫಲಿತಾಂಶ ಬರುವಂತೆ ಮಾಡಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಮಾತನಾಡಿ, ೬೪ನೇ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆ ೧೪ ಅಂಗ ಸಂಸ್ಥೆಗಳನ್ನು ಹೊಂದಿದೆ. ಸಹಸ್ರಾರು ವಿದ್ಯಾರ್ಥಿಗಳು ಓದುತ್ತಿರುವ ಸಂಸ್ಥೆಗೆ ೯೪ ಎಕರೆ ಜಾಗ ಹಿಂದೆಯೇ ಮಂಜೂರಾಗಿತ್ತು. ಡಿಸ್ಫಾರೆಸ್ಟ್ ಆಗಿರುವ ಈ ಜಾಗದ ರೆಕಾರ್ಡ್ನಲ್ಲಿ ಸಂಸ್ಥೆಯ ಹೆಸರು ಬರಬೇಕಿದೆ. ಅದಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಸರಕಾರದ ಹಂತದಲ್ಲಿ ಪ್ರಯತ್ನಿಸುತ್ತಿದ್ದು ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದರು.