ಕುಷ್ಟಗಿ: ಇಂದಿನ ಯುವಪೀಳಿಗೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮಹೇಶ್ ಜಿ. ಹಡಪದ ಹೇಳಿದರು.
ಸ್ವಚ್ಛತೆ ಆರೋಗ್ಯದ ಮೊದಲ ಮೆಟ್ಟಿಲಾಗಿದ್ದು, ಕೈಗಳನ್ನು ಶುಚಿಯಾಗಿ ತೊಳೆಯುವುದು, ಶುದ್ಧ ನೀರು ಕುಡಿಯುವುದು ಹಾಗೂ ಸ್ವಚ್ಛ ಆಹಾರ ಸೇವಿಸುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಹಣ್ಣು, ತರಕಾರಿಗಳು ಹಾಗೂ ಪೌಷ್ಟಿಕ ಆಹಾರವನ್ನು ಹೆಚ್ಚು ಸೇವಿಸಬೇಕು. ಜಂಕ್ ಫುಡ್, ಅತಿಯಾದ ಸಿಹಿ ಪದಾರ್ಥಗಳು ಮತ್ತು ಆರೋಗ್ಯಕ್ಕೆ ಹಾನಿಕಾರಕ ಆಹಾರ ಪದ್ಧತಿ ತ್ಯಜಿಸಬೇಕು. ನಿಯಮಿತ ವ್ಯಾಯಾಮ, ಕ್ರೀಡೆ, ಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸು ಸದೃಢವಾಗುತ್ತದೆ. ಒತ್ತಡ ನಿಯಂತ್ರಿಸಿ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಯುವಕರನ್ನು ದಾರಿ ತಪ್ಪಿಸುವ ದುಶ್ಚಟಗಳಿಂದ ದೂರವಿದ್ದು, ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.
ಶಿವಕುಮಾರ್ ಆರಾಳಗೌಡ್ರು, ನೀಲಮ್ಮ ಆರಾಳಗೌಡ್ರು, ಪೂಜಾ ಆರಾಳಗೌಡ್ರು, ನಸಿರಿನ್ ಬೇಗಂ, ಸೇವಾ ಪ್ರತಿನಿಧಿಗಳಾದ ನಾಗರತ್ನಾ, ಮಂಜುಳಾ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು.