ಪ್ರಾಣ ಕೊಟ್ಟೇವು, ಪರಮಾಣು ಸ್ಥಾವರ ಸ್ಥಾಪಿಸಲು ಬಿಡೊಲ್ಲ

KannadaprabhaNewsNetwork |  
Published : Dec 19, 2024, 12:33 AM IST
18ಕೆಪಿಎಲ್22 ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದಲ್ಲಿ  ಗ್ರಾಮಸ್ಥರು ಸೇರಿ ಅಣುಸ್ಥಾವರ ಸ್ಥಾಪಿಸಲು ವಿರೋಧಿಸುತ್ತಿರುವುದು. | Kannada Prabha

ಸಾರಾಂಶ

ನಾವು ಇಲ್ಲಿ ಯಾವುದೇ ಕಾರಣಕ್ಕೂ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯಾಗಲು ಬಿಡುವುದಿಲ್ಲ. ಇದಕ್ಕಾಗಿ ಪ್ರಾಣತ್ಯಾಗ, ಹೋರಾಟಕ್ಕೂ ನಾವು ಸಿದ್ಧ.

ಅರಸಿನಕೇರಿ ಗ್ರಾಮಸ್ಥರ ಆಕ್ರೋಶ

ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಸರ್ವೆಗೆ ವಿರೋಧ

ನಮ್ಮ ಭೂಮಿ, ನಮ್ಮ ನೆಲ, ನಮ್ಮೂರು ನಾವು ಬಿಟ್ಟುಕೊಡುವುದಿಲ್ಲ ಕನ್ನಡಪ್ರಭ ವಾರ್ತೆ ಕೊಪ್ಪಳ

ನಾವು ತಲೆತಲಾಂತರಗಳಿಂದ ಇಲ್ಲಿಯೇ ಬದುಕುತ್ತಿದ್ದೇವೆ. ಕರಡಿ ದಾಳಿ ಸಹಿಸಿಕೊಂಡು, ನಮ್ಮ ಹೊಲಗಳನ್ನು ಸಂರಕ್ಷಣೆ ಮಾಡಿಕೊಂಡು ಉಳುಮೆ ಮಾಡಿಕೊಂಡಿದ್ದೇವೆ. ಹೀಗಾಗಿ, ನಾವು ಇಲ್ಲಿ ಯಾವುದೇ ಕಾರಣಕ್ಕೂ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯಾಗಲು ಬಿಡುವುದಿಲ್ಲ. ಇದಕ್ಕಾಗಿ ಪ್ರಾಣತ್ಯಾಗ, ಹೋರಾಟಕ್ಕೂ ನಾವು ಸಿದ್ಧ.

ಇದು, ಅರಸಿನಕೇರಿ ಗ್ರಾಮದ ಬಳಿ ತಲೆ ಎತ್ತಲಿದೆ ಎನ್ನಲಾಗಿರುವ ಅಣು ವಿದ್ಯುತ್‌ ಸ್ಥಾವರ ವಿರೋಧಿಸಿ ಗ್ರಾಮ ದೇವತೆಯ ಕಟ್ಟೆಯ ಮೇಲೆ ಬುಧವಾರ ನೂರಾರು ಮಹಿಳೆಯರು ಸೇರಿದಂತೆ ಗ್ರಾಮದ ಜನರೆಲ್ಲ ಸಭೆ ಸೇರಿ ಒಮ್ಮತದಿಂದ ಮಾಡಿದ ತೀರ್ಮಾನ. ಆಕ್ರೋಶದ ನುಡಿ.

ಸೇರಿದ್ದವರೆಲ್ಲರೂ, ನಮ್ಮೂರ ಬಳಿ ನ್ಯೂಕ್ಲಿಯರ್ ಘಟಕ ಸ್ಥಾಪನೆ ಮಾಡುವುದು ಬೇಡವೇ ಬೇಡ. ಇದಕ್ಕೆ ನಾವು ಅವಕಾಶವನ್ನೇ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ನಿನ್ನೆಯಿಂದ ನಮಗೆ ನಿದ್ರೆ ಬರುತ್ತಿಲ್ಲ. ನಮ್ಮೂರ ಬಳಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಗೊತ್ತಾಗುತ್ತಿದ್ದಂತೆ ತಕ್ಷಣ ಬೇಡ ಎಂದು ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಸರ್ವೆ ಮಾಡುವುದಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದೇವೆ. ನಾವು ಎಲ್ಲಿಗೂ ಹೋಗಲು ಸಿದ್ಧರಿಲ್ಲ. ನಮ್ಮೂರ ಬಳಿ ಇಂಥದ್ದೊದು ವಿದ್ಯುತ್ ಸ್ಥಾವರ ಸ್ಥಾಪನೆಯಾಗುವುದಕ್ಕೆ ನಾವು ಬಿಡುವುದಿಲ್ಲ ಎಂದು ಗ್ರಾಪಂ ಮಾಜಿ ಸದಸ್ಯ ತಿಮ್ಮಣ್ಣ ನೋವಿನಿಂದ ಹೇಳಿದರು.

ಸೇರಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ನಮ್ಮವರಿಗೆ ಸಮಸ್ಯೆಯಾಗುತ್ತದೆ ಎಂದು ಗೊತ್ತಾದ ಮೇಲೆ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ನಾನು ಎಂತಹ ಹೋರಾಟಕ್ಕೂ ಸಿದ್ಧ. ಆತ್ಮಹತ್ಯೆಯಂತಹ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದರು.

ಅರಣ್ಯ ಭೂಮಿಯನ್ನು ಸುಮಾರು 40-50 ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಲ್ಯಾಂಡ್ ಟ್ರಿಬ್ಯುನಲ್ ನಲ್ಲಿ ಮಂಜೂರಾದ ಭೂಮಿ ಉಳುಮೆ ಮಾಡಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ಪಹಣಿಯೂ ಇವೆ. ಆದರೂ ಇದುವರೆಗೂ ಅದನ್ನು ಕಾನೂನು ಪ್ರಕಾರ ಪೂರ್ಣಪ್ರಮಾಣದಲ್ಲಿ ಅನುಭವಿಸಿಲು, ಬ್ಯಾಂಕ್ ಸಾಲ ಮಾಡಿಕೊಳ್ಳಲು ಅವಕಾಶ ಇಲ್ಲದಂತಾಗಿದೆ. ಈ ಕುರಿತು ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಈಗ ಮತ್ತೊಂದು ಸಂಕಟ ಎದುರಾಗಿದೆ ಎಂದು ಹೇಳಿದರು.

ಪರಮಾಣು ಸ್ಥಾವರ ಸ್ಥಾಪಿಸಲು ಬಿಡಲ್ಲ- ಶ್ರೀನಾಥ:ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ನಾವು ವಿರೋಧಿಸುತ್ತೇವೆ. ವನ್ಯಜೀವಿ ಉಳುವಿಗಾಗಿ ಎಂಥ ಹೋರಾಟಕ್ಕೂ ಸಿದ್ಧ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಚ್. ಆರ್. ಶ್ರೀನಾಥ ಹೇಳಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ಆತಂಕದ ವಿಷಯವಾಗಿದೆ. ಜನವಸತಿ ಪ್ರದೇಶದಲ್ಲಿ ಹಾಗೂ ವನ್ಯಜೀವಿ ವಾಸಿಸುವ ಪ್ರದೇಶದಲ್ಲಿ ಪರಮಾಣು ವಿದ್ಯತ್ ಸ್ಥಾವರ ಸ್ಥಾಪನೆ ಮಾಡುವುದು ಅವೈಜ್ಞಾನಿಕವಾಗಿದೆ. ಇದನ್ನು ಸಹಿಸಿಕೊಂಡು ಇರಲು ಸಾಧ್ಯವೇ ಇಲ್ಲ ಎಂದರು.

ಈಗಾಗಲೇ ನಾನು ಕೇಂದ್ರಕ್ಕೂ ಪತ್ರ ಬರೆದಿದ್ದೇನೆ. ವನ್ಯಜೀವಿ ಮಂಡಳಿಗೂ ಪತ್ರ ಬರೆದಿದ್ದೇನೆ, ಪರಿಸರ ವಾದಿಗಳ ಜೊತೆಯಲ್ಲಿಯೂ ಮಾತನಾಡಿದ್ದೇನೆ. ಕಾನೂನು ಹೋರಾಟ ಮಾಡಿಯಾದರೂ ನಾವು ಇದನ್ನು ತಡೆಯುತ್ತೇವೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ವಿಕಿರಣಗಳಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ಬರುತ್ತವೆ. ಹೀಗಾಗಿ, ಇದನ್ನು ಬೇರೆಡೆ ಸ್ಥಳಾಂತರ ಮಾಡುವವರೆಗೂ ಹೋರಾಟ ಮಾಡುತ್ತೇನೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ