ಕನ್ನಡಪ್ರಭ ವಾರ್ತೆ ಮೈಸೂರು
1959ನೇ ಇಸವಿಯಲ್ಲಿ ಬಡವರ ಪರ, ಶೋಷಿತರ ಪರ ಎಂಬ ನೆಲೆಯಲ್ಲಿ ನಕ್ಸಲ್ ಬಾರಿಯಲ್ಲಿ ಹುಟ್ಟಿಕೊಂಡ ಈ ನಕ್ಸಲ್ ಚಳವಳಿ, ಎಡಪಂಥೀಯ ಕಮ್ಯುನಿಸ್ಟ್ ಸಿದ್ಧಾಂತದಿಂದ ಪ್ರೇರಣೆಗೊಂಡ ಈ ಚಳವಳಿ, ಬರಬರುತ್ತಾ ದೇಶದಲ್ಲಿ ರಕ್ತಸಿಕ್ತ ಅಧ್ಯಾಯವಾಗಿ ರೂಪುಗೊಂಡಿರುವುದು ದುರದೃಷ್ಟಕರ. ಬಡವರ ಪರ, ಶೋಷಣೆ ಮಾಡುವ ಜಮೀನ್ದಾರರ ವಿರುದ್ದವಾಗಿ ಹಿಂಸಾತ್ಮಕವಾಗಿ ಬೆಳೆಯಿತು ಎಂದರು.
ಒಟ್ಟು 20 ಸಾವಿರಕ್ಕೂ ಅಧಿಕ ಜನ ಈ ನಕ್ಸಲ್ ಹಿಂಸಾಚಾರಕ್ಕೆ ಬಲಿಯಾದರು. ಅದರಲ್ಲೂ 5,000 ಮಂದಿ ನಮ್ಮ ಸಶಸ್ತ್ರ ಯೋಧರು ಬಲಿಯಾದರು. ಇನ್ನು 15 ಸಾವಿರ ಅಮಾಯಕ ನಾಗರಿಕರ ಹತ್ಯೆಯಾಗಿರುವುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ ಎಂದು ಅವರು ಹೇಳಿದರು.57 ವರ್ಷಗಳ ಕಾಲ ನಡೆದು ಬಂದ ಈ ಚಳವಳಿಗೆ ದೇಶದ ಪುರಾತನ ರಾಜಕೀಯ ಪಕ್ಷ ಕಾಂಗ್ರೆಸ್ ಬೆಂಬಲ ಕೊಟ್ಟಿರುವುದನ್ನು ನೋಡಿದ್ದೇವೆ. ಉದಾಹರಣೆಗೆ, ಕಳೆದ ಬಾರಿ ಉಪರಾಷ್ಟ್ರಪತಿ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷವು ನಕ್ಸಲ್ ಪರವಾಗಿರುವ ಮಾಜಿ ನ್ಯಾಯಮೂರ್ತಿ ಜಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿತ್ತು.
ದೇಶದ ರೆಡ್ ಕಾರಿಡಾರ್ ಎಂದು ಕರೆಯಲ್ಪಡುವ ಭಾಗದಲ್ಲಿ 12 ರಾಜ್ಯಗಳಲ್ಲಿ, ತಿರುಪತಿಯಿಂದ ನೇಪಾಳದ ತನಕ ನಕ್ಸಲ್ ವಾದದ ವಿರುದ್ಧ ಎಲ್ಲಾ ರೀತಿಯ ದೃಢ ಹೋರಾಟವನ್ನು ಸರ್ಕಾರ ಮಾಡಿತು. ಅದರ ಪರಿಣಾಮವಾಗಿ ಸಹಸ್ರಾರು ನಕ್ಸಲರು ಶರಣಾಗತರಾದರು. ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಿತು.
ಇಂತಹ ತಥಾಕಥಿತ ವ್ಯಕ್ತಿಗಳು ಯಾರು ಅನ್ನುವುದು ಸಮಾಜಕ್ಕೆ ತಿಳಿದಿದೆ. ಸಮಾಜವೇ ಜಾಗೃತವಾಗಿದ್ದುಕೊಂಡು, ದಾರಿತಪ್ಪಿಸುವಂತಹ ವ್ಯಕ್ತಿಗಳ ವಿರುದ್ಧ ಸದಾ ಎಚ್ಚರಿಕೆಯಿಂದ ಇದ್ದಾಗ ಭಾರತದಲ್ಲಿ ಮತ್ತೆಂದೂ ನಕ್ಸಲ್ ಚಳವಳಿ ತಲೆ ಎತ್ತುವುದಿಲ್ಲ. ಸರ್ಕಾರ ಅತ್ಯಂತ ಪರಿಶ್ರಮದಿಂದ ಅದರ ಅಂತ್ಯ ಮಾಡಿರುವುದನ್ನು ನಾವು ನಾಗರಿಕರು ಬೆಂಬಲಿಸಬೇಕು. ಇಂತಹ ಹಿಂಸಾತ್ಮಕ ಸಿದ್ಧಾಂತ ತಲೆ ಎತ್ತದಂತೆ ಮಾಡುವುದು, ಪುರಾತನ ಕಾಂಗ್ರೆಸ್ ಪಕ್ಷ ಇದಕ್ಕೆ ಬೆಂಬಲ ನೀಡುವುದನ್ನು ಕೊನೆಗೊಳಿಸುವಂತೆ ಮಾಡುವುದು ನಾಗರಿಕರ ಕೈಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.