ಸಾವಯವ ಕೃಷಿಗೆ ಮೊರೆ ಹೋಗಿ

KannadaprabhaNewsNetwork | Published : Jan 22, 2025 12:32 AM

ಸಾರಾಂಶ

ರೈತರು ಮಣ್ಣು ಕಲುಷಿತಗೊಳಿಸುವ ರಾಸಾಯನಿಕ ಗೊಬ್ಬರ ನಿಲ್ಲಿಸಿ, ಸಾವಯವ ಕೃಷಿಗೆ ಮೊರೆ ಹೋಗಬೇಕು. ಇಲ್ಲವಾದರೇ 2030ನೇ ವರ್ಷದೊಳಗಾಗಿ ಇಡೀ ಭೂಮಿಯೂ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ ಎಂದು ಕೊಲ್ಹಾಪೂರ ಕನ್ನೇರಿ ಮಠದ ಅದೃಷ್ಯಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ರೈತರು ಮಣ್ಣು ಕಲುಷಿತಗೊಳಿಸುವ ರಾಸಾಯನಿಕ ಗೊಬ್ಬರ ನಿಲ್ಲಿಸಿ, ಸಾವಯವ ಕೃಷಿಗೆ ಮೊರೆ ಹೋಗಬೇಕು. ಇಲ್ಲವಾದರೇ 2030ನೇ ವರ್ಷದೊಳಗಾಗಿ ಇಡೀ ಭೂಮಿಯೂ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ ಎಂದು ಕೊಲ್ಹಾಪೂರ ಕನ್ನೇರಿ ಮಠದ ಅದೃಷ್ಯಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು.

ತಾಲೂಕಿನ ಯಾದವಾಡ ಗ್ರಾಮದಲ್ಲಿ ಬಿಜ್ಜರಗಿಯ ಸಿದ್ದೇಶ್ವರ ಪುಣ್ಯಾಶ್ರಮದ ಸಂಯುಕ್ತ ಆಶ್ರಯದಲ್ಲಿ ಜರುಗಿದ, ತಾಲೂಕು ಮಟ್ಟದ ನಂದಿ ಕೂಗು ಹಾಗೂ ರೈತ ಜಾತ್ರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಎಲ್‍ಪಿಜಿ ಗ್ರಾಮ ಮುಕ್ತ ಮಾಡಿ ಗೊಬ್ಬರ ಗ್ಯಾಸ್ ಮಾಡಬೇಕು. ಪ್ರತಿಯೊಂದು ಮನೆಯಲ್ಲಿ ಹಸುಗಳನ್ನು ಸಾಕುವುದರಿಂದ ಸಾಕಷ್ಟು ಪ್ರಯೋಜನೆಗಳಿವೆ. ಆದರೆ, ಅದನ್ನು ಅರ್ಥೈಸಿಕೊಳ್ಳುತ್ತಿಲ್ಲ. ದೇಶಕ್ಕೆ ಅನ್ನ ನೀಡುವ ರೈತ ನನ್ನ ಆರೋಗ್ಯ ಹಾಗೂ ಹೆಚ್ಚಿನ ಆದಾಯಗಳಿಸುವ ಬಗ್ಗೆ ಅರಿತು ದೇಶದ್ಯಾದಂತ ಸಾವಯುವ ಕೃಷಿ ಮಾಡಿದರೆ ದೇಶವು ಸದೃಢ ದೇಶವಾಗಲು ಸಾಧ್ಯ ಎಂದರು.ಅಂತಾರಾಷ್ಟ್ರೀಯ ಹಸಿರು ಪರಿಸರ ವಿಜ್ಞಾನಿ ಹಾಗೂ ಗ್ಲೋಬಲ್ ಗ್ರೀನ್ ಗ್ರೋಥದ ಅಧ್ಯಕ್ಷ ಡಾ.ಚಂದ್ರಶೇಖರ ಬಿರಾದಾರ್ ಮಾತನಾಡಿ, ಇಂದಿನ ರಾಸಾಯನಿಕ ಹಾಗೂ ಕ್ರಿಮಿನಾಶಕ ಆಹಾರ ಸೇವನೆ ಹಲವು ರೋಗಗಳಿಗೆ ಆಹ್ವಾನ ನೀಡುತ್ತಿದೆ. ವಿಷಯುಕ್ತ ಆಹಾರಕ್ಕೆ ಪರ್ಯಾಯವಾಗಿ ವಿಷಮುಕ್ತ ಸಾವಯವ ಆಹಾರ ಪದ್ಧತಿ ಇಂದು ಅವಶ್ಯಕತೆಯಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಿರೋಳದ ರಾಮಾರೊಢ ಮಠದ ಶಂಕರಾರೂಢ ಮಹಾಸ್ವಾಮಿಜಿ, ಯಾದವಾಡದ ಪಟ್ಟದ ದೇವರು, ಮನ್ನೆಕೇರಿಯ ಮಹಾಂತಲಿಂಗೇಶ್ವರ ಮಠದ ವಿಜಯಸಿದ್ದೇಶ್ವರ ಮಹಾಸ್ವಾಮೀಜಿ, ಯಾದವಾಡ ಮಾಳಿಂಗೇಶ್ವರ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ, ಗ್ರಾಪಂ ಉಪಾಧ್ಯಕ್ಷ ಕಲ್ಮೇಶ ಗಾಣಿಗಿ, ರೈತ ಮುಖಂಡರಾದ ಮಲ್ಲಪ್ಪ ಮಾಳೆದ, ಶ್ರೀನಿವಾಸ್ ಪಾಟೀಲ, ಗುರುನಾಥ ರಾಮದುರ್ಗ, ಹಣಮಂತ ಅಮಲಝರಿ, ಬಸವರಾಜ ಕೇರಿ, ಸುನಿಲ್ ಕೆಜೋಳ, ತಿಪ್ಪಣ ವನಕಿ, ಸಂತೋಷ ಯಡಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.ಇದ್ದಕ್ಕೂ ಮೊದಲು ಕಾರ್ಯಕ್ರಮದ ನಿಮಿತ್ತ ಗ್ರಾಮದಲ್ಲಿ ಶ್ರೀಗಳ ಮೆರವಣಿಗೆಯು 250 ಜೋಡೆತ್ತುಗಳ ಭವ್ಯ ಮೆರವಣಿಯೊಂದಿಗೆ ಗ್ರಾಮದ ಪ್ರಮುಖ ರಸ್ತೆ ಮೂಲಕ ಘಟ್ಟಗಿ ಬಸವೇಶ್ವರ ದೇವಸ್ಥಾನದವರೆಗೆ ಜರುಗಿತು.ನಾಶವಾಗುತ್ತಿರುವ ಮಣ್ಣಿನ ಸತ್ವ ಉಳಿಸುವಲ್ಲಿ ವೈಜ್ಞಾನಿಕವಾಗಿ ಜೋಡೆತ್ತು ಹಾಗೂ ಹಸುಗಳನ್ನು ಹೊಂದಿರುವ ರೈತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂತಹ ರೈತರ ಸಂಖ್ಯೆ ಹೆಚ್ಚಾದರೇ ಮಾತ್ರ ಸಮಾಜದ ಎಲ್ಲ ಜನರಿಗೆ ಗುಣಮಟ್ಟದ ಆಹಾರ ದೊರೆಯಲು ಹಾಗೂ ನಾಗರಿಕತೆ ಉಳಿಯಲು ಸಾಧ್ಯ.

-ಅದೃಷ್ಯಕಾಡಸಿದ್ದೇಶ್ವರ ಸ್ವಾಮೀಜಿ, ಕೊಲ್ಹಾಪೂರ ಕನ್ನೇರಿ ಮಠ.

Share this article