ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ಕಾರದಿಂದ ಫೋಡಿ ಮುಕ್ತ ಅಭಿಯಾನ ಹಮ್ಮಿಕೊಂಡಿದ್ದು, ಜನರು ಬಂದು ಅರ್ಜಿ ಸಲ್ಲಿಸುವವರೆಗೆ ಕಾಯ್ದು ಕುಳಿತುಕೊಳ್ಳದೇ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಫೋಡಿ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಫೋಡಿಗೆ ಬಾಕಿ ಇರುವ ಪ್ರಕರಣಗಳನ್ನು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಈ ಕಾರ್ಯವನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಬೇಕು. ಒಂದೇ ಆಸ್ತಿಯಲ್ಲಿ ಹಲವು ಹೆಸರು ನಮೂದಾಗಿರುವ ಆಸ್ತಿಯನ್ನು ಸರ್ವೇ ನಡೆಸಿ, ನಕ್ಷೆ ತಯಾರಿಸಿ ಪ್ರತ್ಯೇಕವಾಗಿ ಆಯಾ ಜಮೀನಿನ ಮಾಲೀಕರ ಹೆಸರಿಗೆ ಆಸ್ತಿ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳನ್ನು ಗಣಕೀಕರಣ ಮಾಡುವ ಮೂಲಕ ಹಳೆಯ ದಾಖಲೆಗಳನ್ನು ಅತ್ಯಂತ ಸುಲಭವಾಗಿ ಜನರಿಗೆ ಒದಗಿಸಲು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿನ ಭೂಸುರಕ್ಷಾ ಯೋಜನೆಯಡಿ ಮೂಲ ಹಳೆಯ ದಾಖಲೆಗಳ ಗಣಕೀಕರಣ ನಡೆಯುತ್ತಿದೆ. ರಾಜ್ಯದಲ್ಲಿ ಅಂದಾಜು 20 ಕೋಟಿ ಪುಟಗಳ ದಾಖಲೆಗಳ ಗಣಕೀಕರಣ ಕಾರ್ಯ ಮಾಡಲಾಗಿದ್ದು, ಇನ್ನೂ ಬಾಕಿ ದಾಖಲೆಗಳ ಗಣಕೀಕರಣವನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತವಾಗಿ ಮುಗಿಸುವಂತೆ ನಿರ್ದೇಶನ ನೀಡಿದರು.ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಭೂ ಸುರಕ್ಷಾ ಪ್ರಗತಿ ವಿವರ ಪಡೆದ ಸಚಿವರು, ದಾಖಲೆಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸಿ, ಗಣಕೀಕರಣ ಮಾಡಬೇಕು. ಕಾಲಮಿತಿಯೊಳಗೆ ಗಣಕೀಕರಣ ಕಾರ್ಯ ಪೂರ್ಣಗೊಳಿಸಬೇಕು. ಗಣಕೀಕರಣದಿಂದ ಜನರಿಗೆ ಯಾವುದೇ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಬಹುದಾಗಿದೆ. ದಾಖಲೆಗಳು ಕಳೆದು ಹೋಗುವುದು, ನಾಶವಾಗುವುದು ಸೇರಿದಂತೆ ಇದಕ್ಕೆ ಶಾಶ್ವತ ಪರಿಹಾರ ದೊರೆತು ದಾಖಲೆಗಳನ್ನು ಸುಭದ್ರವಾಗಿ ಕಾಯ್ದಿಟ್ಟುಕೊಳ್ಳಬಹುದು. ದಾಖಲೆಗಳ ಅಧಿಕೃತ ಪ್ರತಿಯನ್ನು ಆನ್ಲೈನ್ ಮೂಲಕವೇ ಪಡೆಯಲು ಅನುಕೂಲ. ಆದ್ದರಿಂದ ಗಣಕೀಕರಣ ಕಾರ್ಯಕ್ಕೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಕಂದಾಯ ಗ್ರಾಮಗಳ ರಚನೆ, ಕಂದಾಯ ಗ್ರಾಮಗಳ ಹಕ್ಕು ಪತ್ರಕ್ಕೆ ಸಂಬಂಧಿಸಿದ ಬಾಕಿ ಪ್ರಕರಣಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಆಂದೋಲನದ ಮಾದರಿಯಲ್ಲಿ ಹಕ್ಕು ಪತ್ರ ತಯಾರಿಸಲಾಗುತ್ತಿದ್ದು, ದಾಖಲೆ ರಹಿತ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಒಂದು ಲಕ್ಷ ಕುಟುಂಬಗಳ ಮನೆಗಳಿಗೆ ಮೇ. 20 ರಂದು ಹೊಸಪೇಟೆಯಲ್ಲಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಕಿ ಇರುವ ಹಕ್ಕುಪತ್ರಗಳನ್ನು ಮುಂದಿನ 6 ತಿಂಗಳಲ್ಲಿ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ವಿವಿಧ ತಾಲೂಕಾ ತಹಸೀಲ್ದಾರರು ಉಪಸ್ಥಿತರಿದ್ದರು.
-----ಬಾಕ್ಸ್
ಪೌತಿ ಖಾತೆಗೆ ಸಚಿವರ ಸೂಚನೆಜಮೀನಿನ ಮಾಲೀಕ ಮರಣ ಹೊಂದಿದ್ದರೂ ಇದುವರೆಗೆ ವಾರಸುದಾರರ ಹೆಸರಿಗೆ ಜಮೀನು ಬದಲಾವಣೆಯಾಗದೇ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿಯೇ ಹಲವು ಖಾತಾಗಳಿವೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳನ್ನು ಗುರುತಿಸಿ ಪೌತಿ ಖಾತೆ ಮಾಡಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು. ತಾಂಡಾ ಸೇರಿದಂತೆ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಅಧಿಕೃತ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುತ್ತಿದ್ದು, ಯಾವುದೇ ನ್ಯೂನ್ಯತೆಗಳಿದ್ದಲ್ಲಿ ನಿವಾರಿಸಿ, ಕಂದಾಯ ಗ್ರಾಮಗಳನ್ನಾಗಿಸುವ ಪ್ರಕ್ರಿಯೆಯಲ್ಲಿ ಕೈಬಿಟ್ಟು ಹೋದ ಪ್ರದೇಶವನ್ನು ಕೈಗೆತ್ತಿಕೊಳ್ಳಬೇಕು. ಬಡ ಜನರಿಗೆ ಕಾಯಕಲ್ಪ ಒದಗಿಸುವ ಕಾರ್ಯ ಇದು. ಹೀಗಾಗಿ, ಕಾನೂನು ತೊಡಕುಗಳನ್ನು ನಿಮ್ಮ ಹಂತದಲ್ಲಿಯೇ ನಿವಾರಿಸಿ ಇತ್ಯರ್ಥಪಡಿಸಲು ಕ್ರಮ ವಹಿಸಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.