ಮುಂಡರಗಿ: ನಾನು ಅಧಿಕಾರದ ಲಾಲಸೆಯಿಂದ ಚುನಾವಣೆಗೆ ನಿಂತಿಲ್ಲ. ಬದಲಾಗಿ ಶಿಕ್ಷಕರು, ನಿರುದ್ಯೋಗಿ ಪದವೀಧರರು, ನ್ಯಾಯವಾದಿಗಳು ಹಾಗೂ ಅನ್ಯಾಯಕ್ಕೊಳಗಾದ ಶೋಷಿತರ ಧ್ವನಿಯಾಗಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಹೇಳಿದರು.
ತಾಲೂಕು ಅಥವಾ ಹೋಬಳಿ ಕೇಂದ್ರಗಳಲ್ಲಿ ಮತಗಟ್ಟೆಗಳಿರುತ್ತವೆ. ಆದ್ದರಿಂದ ಪ್ರಜ್ಞಾವಂತ ಪದವೀಧರ ಮತದಾರರು ತಮ್ಮ ಗುರುತಿನ ಚೀಟಿಯೊಂದಿಗೆ ಕೇಂದ್ರಗಳಿಗೆ ಬಂದು ತಪ್ಪದೇ ಹಕ್ಕು ಚಲಾಯಿಸಬೇಕು. ಡಿಸೆಂಬರ್ 30, 2025ರ ಪಟ್ಟಿಯ ಪ್ರಕಾರ ಕ್ಷೇತ್ರದಲ್ಲಿ 88,087 ಮತದಾರರಿದ್ದಾರೆ. ಜನವರಿ 19, 2026ರಂದು ಆಯೋಗ ಹೊರಡಿಸಿದ ಸುತ್ತೋಲೆಯಂತೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶವಿದ್ದು, ಇನ್ನೂ ಹೆಸರು ನೋಂದಾಯಿಸದ ಪದವೀಧರರು ತಕ್ಷಣವೇ ನಿಗದಿತ ಫಾರಂ-18, ಎರಡು ಭಾವಚಿತ್ರ, ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪದವಿ ಪ್ರಮಾಣಪತ್ರದ ದ್ವಿಪ್ರತಿ ಜೆರಾಕ್ಸ್ ನೀಡಿ ಮತದಾರರಾಗಿ ನೋಂದಾಯಿಸಿಕೊಳ್ಳಬೇಕು ಎಂದು ಮೋಹನ್ ಲಿಂಬಿಕಾಯಿ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ, ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ಗೌಡ ಪಾಟೀಲ, ಹೇಮಂತಗೌಡ ಪಾಟೀಲ, ಆದಪ್ಪಗೌಡ, ಪ್ರಧಾನ ಕಾರ್ಯದರ್ಶಿ ಶೇಖರ್ ಜುಟ್ಲಣ್ಣವರ, ದಾನೇಶ್ವರಿ ಭಜಂತ್ರಿ, ನಾಗರಾಜ ಹೊಂಬಳಗಟ್ಟಿ, ಡಾ. ಬಿ.ಎಸ್. ಮೇಟಿ ಉಪಸ್ಥಿತರಿದ್ದರು.