ನಿಯಮಾವಳಿ ಪ್ರಕಾರ ಬೋಟಿಂಗ್ ನಡೆಸಲು ಸಾಧ್ಯವಿಲ್ಲ. ಕೂಡಲೇ ಈ ವ್ಯವಸ್ಥೆಯನ್ನು ಬದಲಾಯಿಸಿ ಮೊದಲಿನ ವ್ಯವಸ್ಥೆಯಂತೆ ಮಾಡಬೇಕು.
ಹೊನ್ನಾವರ: ಪಟ್ಟಣದ ಬಿಕಾಸಿತಾರಿಯಲ್ಲಿ ನಡೆಯುವ ಶರಾವತಿ ಬ್ಯಾಕ್ ವಾಟರ್ ಬೋಟಿಂಗ್ ಉದ್ಯಮವು ಟೋಕನ್ ವ್ಯವಸ್ಥೆ ಜಾರಿ ಮಾಡಿರುವುದರಿಂದ ಬೋಟಿಂಗ್ ಮಾಲೀಕರಿಗೆ, ಫೋಟೋಗ್ರಾಫರ್, ಹೋಟೆಲ್, ಲಾಡ್ಜ್, ಅಂಗಡಿ ಮಾಲೀಕರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಪ್ರವಾಸಿಗರಿಲ್ಲದೆ ಉದ್ಯಮ ನೆಲಕಚ್ಚುವ ಭೀತಿ ಎದುರಾಗಿದೆ ಎಂದು ಬೋಟ್ ಮಾಲೀಕರು, ಉದ್ಯೋಗ ಅವಲಂಬಿತರು ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಗಣಪತಿ ಮೇಸ್ತ ಮಾತನಾಡಿ, ಶರಾವತಿ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಗೆ ಈ ವರ್ಷ ಟೋಕನ್ ವ್ಯವಸ್ಥೆ ಮೂಲಕ ಬದಲಾವಣೆ ತಂದಿದ್ದು ಬೋಟಿಂಗ್ ನಂಬಿ ಜೀವನ ನಡೆಸುತ್ತಿದ್ದ ನಮಗೆಲ್ಲ ತುಂಬಾ ಸಮಸ್ಯೆ ಎದುರಾಗಿದೆ. ಬ್ಯಾಂಕ್ನಲ್ಲಿ ಸಾಲ ಮಾಡಿ ದೋಣಿ ಖರೀದಿಸಿ ಬೋಟಿಂಗ್ ಆರಂಭಿಸಿದ್ದೆವು. ನಮ್ಮ ಜೀವನ ಇದರಿಂದ ನಡೆಯುತ್ತಿತ್ತು. ಬೋಟಿಂಗ್ ಮೂಲಕವೇ ಇಲ್ಲಿನ ಪ್ರವಾಸೋದ್ಯಮ ಬೆಳೆದಿದ್ದು ವಿನಾ ಯಾವ ಇಲಾಖೆಯಿಂದಲೂ ಅಲ್ಲ ಫೋಟೋಗ್ರಾಫರ್ ಹಾಗೂ ಇಲ್ಲಿನ ಯುವಕರು ಸಾಮಾಜಿಕ ಜಾಲತಾಣದ ಮೂಲಕ ಬೋಟಿಂಗ್ ವ್ಯವಸ್ಥೆಯನ್ನು ಉತ್ತುಂಗಕ್ಕೆ ಏರಿಸಿದರು. ಈಗ ತಂದಿರುವ ನಿಯಮಾವಳಿ ಪ್ರಕಾರ ಬೋಟಿಂಗ್ ನಡೆಸಲು ಸಾಧ್ಯವಿಲ್ಲ. ಕೂಡಲೇ ಈ ವ್ಯವಸ್ಥೆಯನ್ನು ಬದಲಾಯಿಸಿ ಮೊದಲಿನ ವ್ಯವಸ್ಥೆಯಂತೆ ಮಾಡಬೇಕು ಎಂದು ಅಗ್ರಹಿಸಿದರು.ಫೋಟೋಗ್ರಾಫರ್ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಹೊನ್ನಾವರ ಮಾತನಾಡಿ, ಕಳೆದ ಎರಡು ಮೂರು ವರ್ಷದಿಂದ ಶರಾವತಿ ನದಿಯಲ್ಲಿ ಫ್ರಿ ಹಾಗೂ ಪೋಸ್ಟ್ ವೆಡ್ಡಿಂಗ್ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಈಗ ಕೌಂಟರ್ ಮೂಲಕ ಬೋಟಿಂಗ್ ವ್ಯವಸ್ಥೆಯನ್ನು ತಂದು ಉದ್ಯೋಗಕ್ಕೆ ಕುತ್ತು ತಂದಿದ್ದಾರೆ ಎಂದರು.ಚಂದ್ರಹಾಸ ಗೌಡ ಮಾತನಾಡಿ, ಟೋಕನ್ ವ್ಯವಸ್ಥೆಯಿಂದ ಎರಡು ಮೂರು ದಿನಕ್ಕೊಮ್ಮೆ ಬಾಡಿಗೆ ಬರುವುದರಿಂದ ಇದನ್ನೇ ನಂಬಿ ಜೀವನ ನಡೆಸಿದವರಿಗೆ ಸಮಸ್ಯೆ ಉಂಟಾಗಿದೆ. ಹಳದಿ ಬೋರ್ಡ್ ನೋಂದಣಿ ಹೊಂದಿದ್ದ ವಾಹನ ಸವಾರರು ಇಲ್ಲಿನ ಅಸಮರ್ಪಕ ವ್ಯವಸ್ಥೆಯಿಂದ ಬೇಸತ್ತು ಬೇರೆಡೆ ಪ್ರವಾಸಕ್ಕೆ ಕರೆದೊಯುತ್ತಿದ್ದಾರೆ. ಚಿಕ್ಕಪುಟ್ಟ ಅಂಗಡಿ ವ್ಯಾಪಾರಸ್ಥರಿಗೂ ಈ ಟೋಕನ್ ವ್ಯವಸ್ಥೆಯಿಂದ ಬಹಳ ಸಮಸ್ಯೆ ಎದುರಾಗಿದೆ ವ್ಯಾಪಾರವಿಲ್ಲದೆ ಕಂಗಲಾಗಿ ಕುಳಿತಿದ್ದಾರೆ ಎಂದರು.ಉದ್ಯಮಿ ಉದಯ ನಾಯ್ಕ ಕರ್ಕಿಕೋಡಿ, ಗಣೇಶ್ ಗೌಡ, ನಾಗೇಶ್ ಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಬೋಟಿಂಗ್ ಮಾಲೀಕರು, ಚಾಲಕರು, ಹೋಂಸ್ಟೇ ಲಾಡ್ಜ್ ಹೋಟೆಲ್ ಮಾಲೀಕರು ಉಪಸ್ಥಿತರಿದ್ದರು.