ಅರಣ್ಯ ಸಂರಕ್ಷಣೆಯ ಪ್ರಾಮುಖ್ಯತೆಯ ಜತೆ ನಮ್ಮ ಅರಣ್ಯ ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಗುರಿಯಾಗಿದೆ.

ಹಳಿಯಾಳ: ಅರಣ್ಯ ಸಂಪತ್ತು, ವನ್ಯಜೀವಿಗಳು ಮತ್ತು ಜೀವವೈವಿಧ್ಯ ಸಂರಕ್ಷಣೆಯ ಪವಿತ್ರ ಕಾರ್ಯವು ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವಾಗಿದೆ ಎಂದು ಹಳಿಯಾಳ ವಿಭಾಗದ ಉಪ- ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ. ಹೇಳಿದರು.

ಶುಕ್ರವಾರ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅರಣ್ಯ ಸಂರಕ್ಷಣೆಯ ಪ್ರಾಮುಖ್ಯತೆಯ ಜತೆ ನಮ್ಮ ಅರಣ್ಯ ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಗುರಿಯಾಗಿದೆ ಎಂದರು.

ಇತ್ತೀಚೆಗೆ ಬಹುದೊಡ್ಡ ಪ್ರಮಾಣದಲ್ಲಿ ವನ್ಯಜೀವಿಗಳ ಚರ್ಮ, ಉಗುರು ಹಾಗೂ ಬೆಲೆಬಾಳುವ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟ ತಂಡವನ್ನು ಬೆಂಗಳೂರಿನ ತಂಡವು ಬಂದು ಜಪ್ತಿ ಮಾಡಿ ಬಂಧಿಸಿರುವ ಘಟನೆ ನಮ್ಮ ಕೆನರಾ ವೃತ್ತದಲ್ಲಿ ನಡೆದಿದೆ. ಹೀಗಿರುವಾಗ ಕೆನರಾ ವೃತದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿರುವ ಸಾವಿರಾರು ಸಿಬ್ಬಂದಿ ನಾವೇ ಪ್ರಶ್ನಿಸಬೇಕಾಗಿದೆ ಎಂದರು.

ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ ಮಾತನಾಡಿ, ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆ ಮತ್ತು ಅರಣ್ಯ ಮತ್ತು ವನ್ಯಜೀವಿಗಳ ನಡುವಿನ ನೈಸರ್ಗಿಕ ಕೊಂಡಿಯನ್ನು ಕಾಪಾಡಿಕೊಳ್ಳುವುದು ಕೇವಲ ಪ್ರಾಣಿ- ಪಕ್ಷಿಗಳ ಉಳಿವಿಕೆಗೆ ಮಾತ್ರವಲ್ಲ, ಮಾನವಕುಲದ ಭವಿಷ್ಯಕ್ಕೂ ಅತಗತ್ಯವಾಗಿದೆ. ಅದಕ್ಕಾಗಿ ಈ ಸಂಬಂಧಗಳ ಕೊಂಡಿಯನ್ನು ಮುರಿಯಲು ಯಾರೂ ಪ್ರಯತ್ನಿಸಬಾರದು ಎಂದರು.

ಹಳಿಯಾಳ ಎಸಿಎಫ್ ವರದ ರಂಗನಾಥ್ ಜಿ.ಎಚ್. ಮಾತನಾಡಿದರು. ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ಸಂಗಮೇಶ್ ಪಾಟೀಲ ಅವರು ಅರಣ್ಯ ಸಂರಕ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ವಿವರಗಳನ್ನು ತಿಳಿಸಿದರು.

ದಾಂಡೇಲಿ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ, ಜಗಲಬೇಟ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ ಶಫಿ, ದಾಂಡೇಲಿ ಸರ್ಕಾರಿ ಮರಮಟ್ಟು ಸಂಗ್ರಹಾಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಹುಬ್ಬಳ್ಳಿ, ಹಳಿಯಾಳ ಸಿಪಿಐ ಭೀಮಣ್ಣ ಸೂರಿ ಇದ್ದರು.

ಹಳಿಯಾಳ ವಲಯ ಅರಣ್ಯಾಧಿಕಾರಿ ಎನ್.ಎಲ್. ನದಾಫ, ತಿನೈಘಾಟ ವಲಯ ಅರಣ್ಯಾಧಿಕಾರಿ ಅಶೋಕ ಸಾಳೆಣ್ಣನವರ, ವಿರ್ನೋಲಿ ವಲಯ ಅರಣ್ಯಾಧಿಕಾರಿ ಮಾಹಿಮ ಜನ್ನು, ಜೋಯಿಡಾ ವಲಯ ಅರಣ್ಯಾಧಿಕಾರಿ ರವಿಕಿರಣ, ಭಾಗವತಿ ವಲಯ ಅರಣ್ಯಾಧಿಕಾರಿ ಶಶಿಧರಗೌಡಾ ಪಾಟೀಲ, ದಾಂಡೇಲಿ ವಲಯ ಅರಣ್ಯಾಧಿಕಾರಿ ಗುರುಪ್ರಸಾದ ಕೆ., ಸರ್ವೆ ವಿಭಾಗದ ವಲಯ ಅರಣ್ಯಾಧಿಕಾರಿ ಜೈವಂತ ಕಾಂಬ್ರೇಕರ ಇದ್ದರು.

ಅರಣ್ಯ ಇಲಾಖೆಯ ಪರೇಡನ್ನು ಹಳಿಯಾಳ ಉಪ ವಲಯ ಅರಣ್ಯಾಧಿಕಾರಿ ಅಖೀಬ್ ಪಣಿಬಂದ್ ಮುನ್ನೆಡೆಸಿದರು. ಗಸ್ತು ವನಪಾಲಕರಾದ ರಾಜು ಕಾಡಂಡಗಿ ಮತ್ತು ರವಿ ಪ್ಯಾಟಿ ಮುಂದಾಳತ್ವದಲ್ಲಿ ಬ್ಯಾಂಡ್ ತಂಡವು ಶ್ರದ್ಧಾಂಜಲಿ ಗೌರವ ಸಂಗೀತವನ್ನು ನುಡಿಸಿತು. ಬರ್ಚಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು. ರಕ್ತದಾನ: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಕಿಲ್ಲಾಕೋಟೆಯ ಅರಣ್ಯ ಪ್ರವಾಸಿ ಗೃಹದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ರಕ್ತದಾನ ಶಿಬಿರ ನಡೆಯಿತು.