ಗೋಕರ್ಣ ಹೆದ್ದಾರಿಯಲ್ಲಿ ಹರಡಿದ ರಾಡಿ

KannadaprabhaNewsNetwork |  
Published : Jun 13, 2025, 05:54 AM IST
ಶಾಲೆ ಪಕ್ಕದಲ್ಲಿ ವಿದ್ಯುತ್ ಕಂಬದ ಮೇಲೆ ಮರದ ಬೃಹತ್ ಟೊಂಗೆ ಬಿದ್ದಿರುವುದು   | Kannada Prabha

ಸಾರಾಂಶ

ಮೀನು ಮಾರುವ ಮಹಿಳೆಯರು ರಸ್ತೆ ಪಕ್ಕ ಇಟ್ಟ ಬುಟ್ಟಿ ಮತ್ತಿತರ ಪರಿಕರ ದೋಣಿಯಂತೆ ಅತ್ತಿತ್ತ ತೇಲುತ್ತಿತ್ತು.

ಗೋಕರ್ಣ: ಬುಧವಾರ ಸಂಜೆಯಿಂದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ಪ್ರವಾಸಿ ತಾಣ ಗೋಕರ್ಣದಲ್ಲಿ ಮಳೆಗಾಲ ಪೂರ್ವದಲ್ಲಿ ಚರಂಡಿ ಸ್ವಚ್ಛಗೊಳಿಸದೇ ಬಿಟ್ಟಿರುವುದು ಹಾಗೂ ಅನಧಿಕೃತವಾಗಿ ಚರಂಡಿ ಮುಚ್ಚಿ ಹಾನಿ ಮಾಡಿರುವುದನ್ನು ಸರಿಪಡಿಸದಿರುವ ಕಾರಣ ಬುಧವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಚರಂಡಿ ನೀರು ತುಂಬಿ ಹೊಲಸು ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ನದಿಯಾಗಿ ಮಾರ್ಪಟ್ಟಿದೆ. ಹಲವರು ಬಿದ್ದೇಳುತ್ತಾ ಸಾಗಿದರು. ಮೀನು ಮಾರುಕಟ್ಟೆ ರಸ್ತೆಯಲ್ಲಿ ಚರಂಡಿ ಸ್ವಚ್ಛಗೊಳಿಸದ ಪರಿಣಾಮ ಹಾಗೂ ಅಕ್ಕಪಕ್ಕದಲ್ಲಿ ನೀರಿ ಹರಿಯುವ ಜಾಗ ಬಂದ ಮಾಡಿರುವುದರಿಂದ ಬುಧವಾರ ಸಂಜೆ ಐದು ಅಡಿಯಷ್ಟು ನೀರು ತುಂಬಿ ಕೆರೆಯಾಗಿತ್ತು. ಮೀನು ಮಾರುವ ಮಹಿಳೆಯರು ರಸ್ತೆ ಪಕ್ಕ ಇಟ್ಟ ಬುಟ್ಟಿ ಮತ್ತಿತರ ಪರಿಕರ ದೋಣಿಯಂತೆ ಅತ್ತಿತ್ತ ತೇಲುತ್ತಿತ್ತು. ಅಲ್ಲದೆ, ಏಕಮುಖ ಸಂಚಾರದ ಊರಿನಿಂದ ಹೊರ ಹೋಗುವ ರಸ್ತೆಯಾದ ಕಾರಣ ಹಲವು ಪ್ರವಾಸಿ ವಾಹನ ನೀರಿನಲ್ಲಿ ಸಿಲುಕಿ ತೊಂದರೆಯಾಯಿತು.

ಸರ್ಕಾರಿ ಆಸ್ಪತ್ರೆಯಿಂದ ಭದ್ರಕಾಳಿ ಕಾಲೇಜಿನವರೆಗೆ ರಾಜ್ಯ ಹೆದ್ದಾರಿಯ ಮೇಲೆ ಎರಡು ಅಡಿಗೂ ಹೆಚ್ಚು ಮಣ್ಣಿನ ರಾಶಿ ಬಿದ್ದಿದ್ದು, ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಹಲವರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದರಂತೆ ಹೆಸ್ಕಾಂ ಗ್ರೀಡ್ ಬಳಿಯೂ ಆಗಿದ್ದು, ಈ ಹಿಂದೆ ಅನೇಕ ಬಾರಿ ಈ ಸ್ಥಳದಲ್ಲಿ ಧರೆಯ ಮಣ್ಣು ತೆಗೆದ ಪರಿಣಾಮ ಅವಾಂತರ ಉಂಟಾಗುತ್ತಿದೆ. ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಪಂ ನಿರ್ಲಕ್ಷ್ಯದಿಂದ ತೊಂದರೆಯಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.

ಇನ್ನು ಮಳೆ ಅವಾಂತರದಲ್ಲಿ ಕೆಲವೆಡೆ ಕಂಪೌಂಡ್ ಗೋಡೆಗಳು ಕುಸಿದು ಬಿದ್ದಿದ್ದು, ಕೃಷಿ ಭೂಮಿಗೆ ನೀರು ನುಗ್ಗಿದೆ.

ಒಟ್ಟಾರೆ ಮಳೆಯ ಅಬ್ಬರದಲ್ಲಿ ನೈಸರ್ಗಿಕ ಅವಘಡಗಳು ಒಂದೆಡೆಯಾದರೆ, ಕೃತಕ ಅವಘಡಗಳು ಹೆಚ್ಚಾಗಿದೆ.

ಆಡುಕಟ್ಟೆ ಶಾಲೆಯ ಎದುರಿನ ಮಾವಿನ ಮರದ ಟೊಂಗೆ ಮುರಿದು ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಇಲ್ಲದ ಸಮಯದಲ್ಲಿ ಅವಘಡ ನಡೆದಿದ್ದರಿಂದ ಅನಾಹುತ ತಪ್ಪಿದೆ. ಬೀಳುವ ಹಂತದಲ್ಲಿರುವ ಮರವನ್ನು ತೆರವುಗೊಳಿಸುವಂತೆ ಶಾಲಾ ಅಭಿವೃದ್ಧಿ ಸಮಿತಿಯವರು ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೂ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಹನೇಹಳ್ಳಿ, ನಾಡುಮಾಸ್ಕೇರಿ, ಗಂಗಾವಳಿ, ಬಂಕಿಕೊಡ್ಲ, ತದಡಿ, ತೊರ್ಕೆ, ಮಾದನಗೇರಿ, ಹಿರೇಗುತ್ತಿ ಭಾಗದಲ್ಲಿ ಸಹ ಮಳೆಯ ಆರ್ಭಟದಿಂದ ಜನಜೀವನಕ್ಕೆ ತೊಡಕಾಗಿದೆ. ಹಲವಡೆ ರಸ್ತೆಗೆ ನೀರು ನುಗ್ಗಿತ್ತು. ಕೃಷಿ ಪ್ರದೇಶ ಜಲಾವೃತಗೊಂಡಿತ್ತು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ