ಹಳಿಯಾಳ: ಪಟ್ಟಣದ ಯಲ್ಲಾಪುರ ನಾಕೆಯ ಬಳಿ ನ್ಯೂ ಹೊಟೇಲ್ ಹುಬ್ಬಳ್ಳಿ- ತಗಡ ಬಿರಿಯಾನಿ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಊಟ ಮಾಡಲು ಬಂದ ಗ್ರಾಹಕರು ಆರ್ಡರ್ ಮಾಡಿದ ಚಿಕನ್ ಬಿರಿಯಾನಿಯಲ್ಲಿ ಚಿಕನ್ ಜತೆ ಬೀಫ್ ಪೀಸ್ಗಳನ್ನು ಸಹ ಮಿಶ್ರಣ ಮಾಡಿ ಬಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಬಡಿಸಿದ ಬಿರಿಯಾನಿಯನ್ನು ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ. ಹಳಿಯಾಳ ಪೋಲಿಸರು ರೆಸ್ಟೋರೆಂಟ್ ಮಾಲೀಕನ ವಿಚಾರಣೆ ನಡೆಸಿದ್ದಾರೆ.
ರೆಸ್ಟೋರೆಂಟ್ನಲ್ಲಿ ಸಂಜೆ ಹೊತ್ತಿಗೆ ಮೂವರು ಗ್ರಾಹಕರು ಊಟಕ್ಕೆ ಬಂದು ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಗ್ರಾಹಕರು ಬಿರಿಯಾನಿ ಸೇವಿಸುವಾಗ ಅವರಿಗೆ ಬೀಫ್ ತುಂಡುಗಳು ಕಂಡು ಬಂದಿವೆ ಎಂದು ಆರೋಪಿಸಲಾಗಿದೆ. ಆಕ್ರೋಶಿತ ಗ್ರಾಹಕರು ರೆಸ್ಟೋರೆಂಟ್ ಮಾಲೀಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಎದುರು ಜನಜಂಗುಳಿ ಕೂಡಿತ್ತು.ಘಟನೆಯ ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಹಳಿಯಾಳ ಪಿಎಸ್ಸೈಗಳಾದ ಬಸವರಾಜ ಮಬನೂರ, ಕೃಷ್ಣ ಅರಕೇರಿ, ಸಿಬ್ಬಂದಿ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು.
ರೆಸ್ಟೋರೆಂಟ್ ಮಾಲೀಕ ಮಹಮದ್ ಜುಬೇರ್ ಹಾಗೂ ಗ್ರಾಹಕರನ್ನು ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋಗಲಾಯಿತು. ಘಟನಾ ಸ್ಥಳಕ್ಕೆ ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಪರಿಸರ ಎಂಜಿನಿಯರ್ ದರ್ಶಿತಾ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.