ಹುಟ್ಟು-ಸಾವಿನ ನಡುವೆ ಮಾಡುವ ಸತ್ಕಾರ್ಯಗಳು ಶಾಶ್ವತ

KannadaprabhaNewsNetwork |  
Published : Apr 14, 2026, 02:15 AM IST
ಕೆ ಕೆ ಪಿ ಸುದ್ದಿ 02:  ನಗರದ ಆರ್ ಇ ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ ಜರುಗಿತು. | Kannada Prabha

ಸಾರಾಂಶ

ಕನಕಪುರ: ಮನುಷ್ಯ ಹುಟ್ಟುವುದು ಸಾಯುವುದು ಸಹಜ. ಆದರೆ, ಆ ನಡುವೆ ಮಾಡುವ ಕೆಲಸಕಾರ್ಯಗಳೇ ಶಾಶ್ವತ. ಆ ನಿಟ್ಟಿನಲ್ಲಿ ಕರಿಯಪ್ಪನವರು ಶಿಕ್ಷಣ ಕ್ರಾಂತಿ ಮಾಡಿ, ಅವರು ಕಟ್ಟಿರುವ ವಿದ್ಯಾ ಸಂಸ್ಥೆಯಲ್ಲಿ ಅನೇಕರು ಓದಿ ಅತ್ಯುನ್ನತ ಸ್ಥಾನಗಳಲ್ಲಿ ಬದುಕನ್ನು ರೂಪಿಸಿಕೊಂಡಿರುವುದಕ್ಕಿ ಈ ಸಂಸ್ಥೆ ಅವಿಸ್ಮರಣೀಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವೆ ಶಾಂತಲಾ ತಿಳಿಸಿದರು

ಕನಕಪುರ: ಮನುಷ್ಯ ಹುಟ್ಟುವುದು ಸಾಯುವುದು ಸಹಜ. ಆದರೆ, ಆ ನಡುವೆ ಮಾಡುವ ಕೆಲಸಕಾರ್ಯಗಳೇ ಶಾಶ್ವತ. ಆ ನಿಟ್ಟಿನಲ್ಲಿ ಕರಿಯಪ್ಪನವರು ಶಿಕ್ಷಣ ಕ್ರಾಂತಿ ಮಾಡಿ, ಅವರು ಕಟ್ಟಿರುವ ವಿದ್ಯಾ ಸಂಸ್ಥೆಯಲ್ಲಿ ಅನೇಕರು ಓದಿ ಅತ್ಯುನ್ನತ ಸ್ಥಾನಗಳಲ್ಲಿ ಬದುಕನ್ನು ರೂಪಿಸಿಕೊಂಡಿರುವುದಕ್ಕಿ ಈ ಸಂಸ್ಥೆ ಅವಿಸ್ಮರಣೀಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವೆ ಶಾಂತಲಾ ತಿಳಿಸಿದರು.

ನಗರದ ರೂರಲ್ ಎಜುಕೇಶನ್ ಸೊಸೈಟಿ ಆವರಣದಲ್ಲಿ ಪೂಜ್ಯ ಎಸ್.ಕರಿಯಪ್ಪ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕನ್ನಡ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದಲ್ಲಿ ಹೆಸರಾಗಿರುವ ಕರಿಯಪ್ಪನವರ ವಿದ್ಯಾಸಂಸ್ಥೆ ಯಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ, ಉತ್ತಮ ಸ್ಥಾನ ಅಲಂಕರಿಸಿ ಕಾರ್ಯ ನಿರ್ವಹಿಸುತ್ತಿರುವದಲ್ಲದೆ, ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಅಂತಹ ಅತ್ಯತ್ತಮ ವಿದ್ಯಾಕ್ಷೇತ್ರ ಇದಾಗಿದೆ ಎಂದು ಹೇಳಿದರು.

ನಿಮ್ಮ ಗುರಿ ಏನೆಂಬುದು ವಿದ್ಯಾರ್ಥಿ ಜೀವನದಲ್ಲೇ ನಿರ್ಧರಿಸಿಕೊಳ್ಳಬೇಕು, ಅದಕ್ಕೆ ಅಗತ್ಯವಿರುವ ಕಠಿಣ ಪರಿಶ್ರಮ ಹಾಕಬೇಕು. ಇಂದಿನ ಸಮಾಜದಲ್ಲಿ ಪೈಪೋಟಿ ಹೆಚ್ಚಾಗಿದೆ. ಅದಕ್ಕೆ ನೀವು ಸಿದ್ಧರಾಗಬೇಕು. ಗ್ರಾಮೀಣ ಮಕ್ಕಳು ಹೆಚ್ಚು ಕೌಶಲ್ಯ ಬೆಳೆಸಿಕೊಂಡರೆ ಹಿರಿಯ ವಿದ್ಯಾರ್ಥಿಗಳು ಹೇಗೆ ವೇದಿಕೆಯನ್ನು ಅಲಂಕರಿಸಿದ್ದಾರೋ ಮುಂದಿನ ದಿನಗಳಲ್ಲಿ ನಿಮಗೂ ಸಹ ಅಂತಹ ಸದಾವಕಾಶಗಳು ಸಿಗುತ್ತವೆ ಎಂದು ಹೇಳಿದರು.

ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಕರಿಯಪ್ಪನವರ ಸ್ಮರಣಾರ್ಥ ನಡೆಯುತ್ತಿರವ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಗೆ ಉಡುಪಿ, ಕೊಪ್ಪಳ, ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 36 ತಂಡಗಳಲ್ಲಿ ಸ್ಪರ್ಧೆಗೆ ಬಂದಿರುವುದು ಉತ್ತಮ ಬೆಳವಣಿಗೆ. ಇಂದಿನ ಯುವಕರಲ್ಲಿ ಇಂತಹ ಮಹತ್ವದ ಚರ್ಚೆ ಆತ್ಮಸ್ಥೈರ್ಯ ತುಂಬುತ್ತದೆ. ಈ ಚರ್ಚಾ ಸ್ಪರ್ಧೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತದೆ. ಸಮಾಜಕ್ಕಾಗಿ ಯುವ ಜನಾಂಗದಲ್ಲಿ ಆಲೋಚನೆ ಮಾಡುವ ಮನಸ್ಸನ್ನು ಕೇಂದ್ರಿಕರಿಸುತ್ತದೆ. ನಾವೂ ಸಂಸ್ಥೆಯ ಪ್ರತಿಯೊಂದು ಅಂಗ ಸಂಸ್ಥೆಗಳ ನ್ಯೂನತೆ ಹುಡುಕಿ ಇವತ್ತಿನ ಅವಶ್ಯಕತೆಗೆ ತಕ್ಕಂತೆ ಸದೃಢ ಸಂಸ್ಥೆ ಕಟ್ಟುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಯೋಜನೆಗಳು ತರುವ ನಿಟ್ಟಿನಲ್ಲಿ ನಮ್ಮ ಕೆಲಸ ಮುಂದುವರಿಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ "ಅಂತಾರಾಷ್ಟ್ರೀಯ ಸಮಸ್ಯೆಗೆ ಯುದ್ಧವೊಂದೇ ಪರಿಹಾರವಲ್ಲ " ಎಂಬ ವಿಷಯದ ಮೇಲೆ ಕನ್ನಡ ಚರ್ಚಾ ಸ್ಪರ್ಧೆ ನಡೆಯಿತು. 36 ಕಾಲೇಜುಗಳಿಂದ ಪರ ಮತ್ತು ವಿರೋಧವಾಗಿ 72 ವಿದ್ಯಾರ್ಥಿಗಳು ಈ ಮಹತ್ವದ ಚರ್ಚಾ ಸ್ಪರ್ಧೆ ಯಲ್ಲಿ ಪಾಲ್ಗೊಂಡು ತಮ್ಮ ವಾದವನ್ನು ಅದ್ಭುತವಾಗಿ ಮಂಡಿಸಿದರು.

ಯುದ್ಧವನ್ನು ಮಾಡುವುದರಿಂದ ಯಾವುದೇ ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ದೊರಕುವುದಿಲ್ಲ. ಯುದ್ಧದಿಂದ ಹಲವು ದೇಶದ ಆರ್ಥಿಕತೆ ಕುಸಿಯುವುದರ ಜೊತೆಗೆ ಸಾಮಾಜಿಕ ಜೀವನದ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ಯುದ್ಧವು ಸ್ಮಶಾನವನ್ನು ರೂಪಿಸುತ್ತದೆಯೆ ಹೊರತು ಹೊಸ ಜೀವನವನ್ನಲ್ಲ ಎಂದು ಪರವಾಗಿ ವಾದ ಮಂಡಿಸಿದರು.

ಪರಿಸ್ಥಿತಿಗಳು ಕೈ ಮೀರಿದಾಗ, ಶತ್ರುಗಳ ಉಪಟಳ ಹೆಚ್ಚಾದಾಗ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ, ಶಾಂತಿ ಸೌಹಾರ್ದತೆಗೆ ಪೆಟ್ಟು ಬಿದ್ದಾಗ, ಮಾತುಕತೆಯಿಂದ ಬಗೆಹರಿಸಲು ಸಾಧ್ಯವಿಲ್ಲದಾಗ, ದೇಶದ ಸ್ವಾಭಿಮಾನ ಉಳಿಸಿಕೊಳ್ಳಲು, ತಮ್ಮ ಗಡಿಗಳನ್ನು ರಕ್ಷಣೆ ಮಾಡಲು, ಭಯೋತ್ಪಾದಕ ಶಕ್ತಿಗಳನ್ನು ಧಮನಗೊಳಿಸಲು, ಶಾಂತಿಯುತ ಪ್ರಯತ್ನಗಳು ವಿಫಲವಾದಾಗ ಯುದ್ಧವೊಂದೇ ಪರಿಹಾರವಾಗುತ್ತದೆ. ಅನಿವಾರ್ಯವಾಗುತ್ತದೆ ಎಂದು ವಿಷಯದ ವಿರುದ್ಧವಾಗಿ ವಿದ್ಯಾರ್ಥಿಗಳು ವಾದ ಮಂಡಿಸಿ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಅಂಕಣಕಾರ ಎನ್.ಸಿದ್ದೇಗೌಡ, ಬೆಂಗಳೂರು ಖಜಾನೆ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ರೂಪ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಮನಗರದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಬಿ.ಮಹದೇವಸ್ವಾಮಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಆರ್‌ಇಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರು, ಪದವಿ ಕಾಲೇಜಿನ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರದ ರೂರಲ್ ಎಜುಕೇಶನ್ ಸೊಸೈಟಿ ಆವರಣದಲ್ಲಿ ಪೂಜ್ಯ ಎಸ್.ಕರಿಯಪ್ಪ ಸ್ಮರಣಾರ್ಥ ರಾಜ್ಯಮಟ್ಟದ ಕನ್ನಡ ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು