ಕನ್ನಡಪ್ರಭ ವಾರ್ತೆ ಭಾರತೀನಗರ
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಒಳ್ಳೆಯ ವ್ಯಕ್ತಿಯಾಗಿ ರೂಪಿಸಬೇಕಾದ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ತಿಳಿಸಿದರು.ಇಲ್ಲಿಗೆ ಸಮೀಪದ ಚಂದೂಪುರ ಡಿ.ಕೆ.ಗೌಡ ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ ಆಯೋಜಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಬೇಕು, ಸಂಸ್ಕಾರವಂತರಾಗಬೇಕು, ಉತ್ತಮ ಪ್ರಜೆಯಾಗಬೇಕು ಎಂದರು.
ಜೀವನದಲ್ಲಿ ಸಾಧನೆ ಮಾಡಬೇಕಾದರೆ ವಿದ್ಯೆ ಬಹಳ ಅವಶ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಕಲಿಕೆಯತ್ತ ಹೆಚ್ಚು ಆಸಕ್ತಿ ವಹಿಸಬೇಕು. ಪೋಷಕರು ನಿರ್ಲಕ್ಷ್ಯ ವಹಿಸದೆ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದರು.ಗ್ರಾಮೀಣ ಪ್ರದೇಶದಲ್ಲಿ ತಲೆಎತ್ತಿರುವ ಡಿ.ಕೆ.ಗೌಡ ಪ್ರೌಢಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಈ ವಿದ್ಯಾ ಸಂಸ್ಥೆಯಲ್ಲಿ ಓದಿದಂತಹ ಅನೇಕ ವಿದ್ಯಾರ್ಥಿಗಳು ಉನ್ನತ ಉದ್ಯೋಗಗಳನ್ನು ಅಲಂಕರಿಸಿರುವುದು ಮೆಚ್ಚುಗೆಯ ವಿಷಯ ಎಂದರು.
ಪ್ರಸ್ತುತ ದಿನಗಳಲ್ಲಿ ಗುರು-ಹಿರಿಯರಿಗೆ ಸಿಗಬೇಕಾದ ಗೌರವಗಳು ಕಡಿಮೆಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಗಳ ಕೊಂಡಿ ಕಳಚಿ ಹುಚ್ಚರ ಸಂತೆಯಾಗುತ್ತಿವೆ. ಹಳ್ಳಿಗಳಲ್ಲಿ ವಾಸಮಾಡುವುದೇ ಕಷ್ಟಕರವೆನಿಸುತ್ತಿದೆ. ವಿದ್ಯಾರ್ಥಿಗಳು ಸಂಸ್ಕಾರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕು ಎಂದರು.ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಅವರನ್ನು ಎಂದಿಗೂ ಕಡೆಗಣಿಸಬಾರದು. ಸಾವಯವ ಕೃಷಿಯಲ್ಲಿ ರೈತರು ಹೆಚ್ಚು ತೊಡಗಬೇಕು. ಸಾವಯವ ಕೃಷಿಯಿಂದ ರೈತರ ಆರೋಗ್ಯವು ವೃದ್ದಿಸುತ್ತದೆ ಎಂದರು.
ಮಕ್ಕಳು ಜ್ಞಾನವಂತರಾಗಬೇಕು, ವಿದ್ಯಾವಂತರಾಗಬೇಕು, ಸಮಾಜಮುಖಿಯಂತಹ ಚಿಂತನೆಗಳಲ್ಲಿ ತೊಡಗಬೇಕು. ತಮ್ಮ ಮಕ್ಕಳಿಗೆ ಸಮಾಜ ಗೌರವ ನೀಡುವಂತಾಗಬೇಕೆಂದು ಪೋಷಕರು ಬಯಸುತ್ತಿದ್ದು, ಶಿಕ್ಷಣ ಸಂಸ್ಥೆಗಳು ಆಶಯಗಳಿಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಮುಂದಾಗಬೇಕಿದೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಪ್ರಮುಖವಾಗಿದ್ದು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಪೋಷಕ ಪಾತ್ರ ಮಹತ್ವದ್ದಾಗಿದೆ ಎಂದರು.ವೇದಿಕೆಯಲ್ಲಿ ವಿಶ್ವೇಶ್ವರಯ್ಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಶಿವಲಿಂಗೇಗೌಡ, ಬೆಂಗಳೂರು ಕಿಡ್ಸ್ ಆರ್ಕ್ ಇಂಟರ್ ನ್ಯಾಷಿನಲ್ ಶಾಲೆಯ ಪ್ರಾಂಶುಪಾಲ್ ಎನ್.ಶಶಿರೇಖಾ, ಮಂಡ್ಯ ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ಸಿ.ರವೀಂದ್ರ, ಪ್ರಗತಿಪರ ಹೋರಾಟಗಾರ ನ.ಲಿ.ಕೃಷ್ಣ, ಮುಖ್ಯಿಕ್ಷಕ ಶಿವಮಾದೇಗೌಡ, ಸಹಶಿಕ್ಷಕ ಬಿ.ಎಚ್. ಪುಟ್ಟಸ್ವಾಮಿ ಸೇರಿದಂತೆ ಹಲವರಿದ್ದರು.