ಕನ್ನಡಪ್ರಭ ವಾರ್ತೆ ಲೋಕಾಪುರ
ಮುಸ್ಲಿಂ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಬಹಳ ಮುಖ್ಯ. ಶಿಕ್ಷಣ ಅವರ ಸಬಲೀಕರಣ, ಸ್ವಾವಲಂಬನೆ ಮತ್ತು ಸಮುದಾಯದ ಪ್ರಗತಿಗೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.ಪಟ್ಟಣದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ್ ಭೈರಕದಾರ ಅವರ ವಸತಿ ಗೃಹದಲ್ಲಿ ಆರ್.ಬಿ.ಜಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಮ್ಮಯ್ಯ ಮೈ ಗುದಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಬಂದ ಪ್ರಯುಕ್ತ ಸನ್ಮಾನಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣದಿಂದ ಪ್ರಗತಿ ಸಾಧ್ಯ. ಇದನ್ನು ಪ್ರತಿಯೊಬ್ಬರೂ ಅರಿಯಬೇಕು, ಶಿಕ್ಷಣದಿಂದ ಜೀವನ ಎಷ್ಟು ಸುಧಾರಿಸುತ್ತದೆ ಎಂಬುವುದನ್ನು ಕಂಡಿದ್ದೇವೆ. ಶಿಕ್ಷಣ ಎಂದರೆ ಕೇವಲ ಪ್ರಾಥಮಿಕ ಅಥವಾ ಪ್ರೌಢಶಿಕ್ಷಣಕ್ಕೆ ಮೊಟಕುಗೊಳ್ಳಬಾರದು, ಮುಸ್ಲಿಂ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು, ಎಂಜಿನಿಯರ್, ವಿಜ್ಞಾನಿಗಳಾಗಬೇಕು, ಆಗ ಮಾತ್ರ ಸಮುದಾಯ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ಮಾತನಾಡಿ, ವಿದ್ಯೆ ಯಾರೂ ಕದಿಯಲಾಗದ ಆಸ್ತಿಯಾದ್ದರಿಂದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮತ್ತು ಗಂಡು ಇಬ್ಬರು ಉನ್ನತ ವಿದ್ಯಾಭ್ಯಾಸ ಮುಗಿಸಿ ಸಮಾಜದಲ್ಲಿ ಅತ್ಯುನ್ನತ ಶ್ರೇಣಿಯ ಕೆಲಸದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ಶಿವಾನಂದ ಉದಪುಡಿ, ಸದಾಶಿವ ಪಡತಾರೆ, ಸದುಗೌಡ ಪಾಟೀಲ, ಸಂಜಯ ತಳೇವಾಡ, ರಫೀಕ್ ಭೈರಕದಾರ, ಅಂಜುಮನ್ ಎ ಇಸ್ಲಾಂ ಕಮೀಟಿ ಅಧ್ಯಕ್ಷ ಹಸನಡೋಂಗ್ರಿ ಮಹಾಲಿಂಗಪೂರ, ಶಬ್ಬೀರ್ ಗುದಗಿ, ಅಸ್ಲಾಂ ಭೈರಕದಾರ, ಶಬ್ಬೀರ್ ಗುಳೆದಗುಡ್ಡ, ಫಯಾಜಿ ಮನಿಯಾರ, ಮುನ್ನಾ ಗುದಗಿ, ರಫೀಕ್ ಗುಳೆದಗುಡ್ಡ, ನಬಿ ಇಂಗಳಗಿ ಇನ್ನಿತರರು ಇದ್ದರು.