ಹಾವೇರಿ: ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎನ್ನುವ ಮಾತಿನಂತೆ, ಉತ್ತಮ ಆರೋಗ್ಯ ಇದ್ದರೆ ಮಾತ್ರ, ಜೀವನವನ್ನು ಆನಂದಿಸುವ ಅವಕಾಶ ಸಿಗುತ್ತದೆ ಎಂದು ಹುಕ್ಕೇರಿಮಠದ ಡಾ. ಸದಾಶಿವ ಸ್ವಾಮೀಜಿ ಹೇಳಿದರು.
ದಿನನಿತ್ಯದ ವ್ಯಾಯಾಮ, ಯೋಗ, ಧ್ಯಾನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ವಯುತ ಆಹಾರ, ಸಾಕಷ್ಟು ನಿದ್ದೆ ಹಾಗೂ ಸಕರಾತ್ಮಕ ಚಿಂತನೆ ಜೊತೆಗೆ ಉತ್ತಮ ಹವ್ಯಾಸಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಲು ಸಹಕಾರಿಯಾಗುತ್ತವೆ. ಏಕೆಂದರೆ ಆರೋಗ್ಯವೇ ಮಹಾಭಾಗ್ಯ ಎಂದರು.
ಭಾರತದ ಸಂಸ್ಕೃತಿ, ಸಂಪ್ರದಾಯಗಳು ಆರೋಗ್ಯದ ಫಲವನ್ನು ನೀಡುವ ಸಂಗತಿಗಳಾಗಿವೆ. ಅನಾದಿ ಕಾಲದಿಂದಲೂ ವೈಜ್ಞಾನಿಕ ಆಧಾರದ ಮೇಲೆಯೇ ಆಚರಣೆಗಳು ನಡೆಯುತ್ತಾ ಬಂದಿವೆ. ಆಧುನಿಕತೆ ಹೆಸರಿನಲ್ಲಿ ನಮ್ಮ ಆಹಾರ ಪದ್ಧತಿಯನ್ನು ಬಿಟ್ಟು, ಅನಾರೋಗ್ಯವನ್ನು ಅಹ್ವಾನ ಮಾಡುತ್ತಿದ್ದೇವೆ. ಹಬ್ಬ, ಹರಿದಿನಗಳು ನಮ್ಮ ಸ್ವಸ್ಥ ಜೀವನದ ಅವಿಭಾಜ್ಯ ಅಂಗಗಳಾಗಿವೆ ಎಂದು ಹೇಳಿದರು.ಖ್ಯಾತ ವೈದ್ಯ ಡಾ. ಗುಹೇಶ್ವರ ಪಾಟೀಲ ಮಾತನಾಡಿ, ಭಾರತವು ಇಂದು ಮಧುಮೇಹದ ರಾಜಧಾನಿಯಾಗಿದ್ದು, ರೋಗ ಬಂದ ಮೇಲೆ ಚಿಕಿತ್ಸೆ ಮಾಡುವುದಕ್ಕಿಂತ, ರೋಗಗಳು ಬರದಂತೆ ನೋಡಿಕೊಳ್ಳುವುದೇ ಉತ್ತಮ. ಭಾರತದಲ್ಲಿ ಅನಾದಿ ಕಾಲದಿಂದಲೂ ಮಿತ ಆಹಾರ ಮತ್ತು ಸ್ವಸ್ಥ ಆಹಾರಕ್ಕೆ ಮಹತ್ವ ನೀಡಿದ್ದಾರೆ. ಹಲವಾರು ಚಿಕಿತ್ಸಾ ಪದ್ಧತಿಗಳು ಇದ್ದರೂ, ಭಾರತೀಯ ಆರ್ಯುವೇದ ಪದ್ಧತಿಯು ಅತ್ಯಂತ ಪರಿಣಾಮಕಾರಿಯಾಗಿದ್ದು, ಸರ್ವ ರೋಗಗಳಿಗೂ ಯಾವುದೇ ಅಡ್ಡ ಪರಿಣಾಮವಿಲ್ಲದ ಚಿಕಿತ್ಸೆಯಾಗಿದೆ. ಅಡುಗೆ ಮನೆಯಲ್ಲಿಯೇ ನಮ್ಮ ಆರೋಗ್ಯದ ಗುಟ್ಟು ಅಡಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಶಿವಬಸವ ದೇವರು, ಬಸವಲಿಂಗ ದೇವರು, ಎಸ್.ಎಂ. ಹಾಲಯ್ಯನವರಮಠ, ಅಭಿಷೇಕ ಉಪ್ಪಿನ, ಎಸ್.ಎಸ್. ಮುಷ್ಠಿ, ವೀರಣ್ಣ ಅಂಗಡಿ, ಮಹಾಂತೇಶ ಮಠಮಠ, ಸಿ.ಜಿ. ತೋಟಣ್ಣನವರ, ಜೆ.ಬಿ. ಸಾವಿರಮಠ, ಮಹಾಂತಪ್ಪ ಹಲಗಣ್ಣನವರ, ಬಿ. ಬಸವರಾಜ, ಎಂ. ಎಸ್. ಹಿರೇಮಠ, ಎಸ್.ಎನ್. ಮಳೆಪ್ಪನವರ, ಮತ್ತಿತರರು ಉಪಸ್ಥಿತರಿದ್ದರು.