ಗದಗ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಬಹು ಮುಖ್ಯವಾದದ್ದು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಲು ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರಬೇಕು ಎಂದು ಜೆ.ಟಿ. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಡಾ. ಆರ್.ಟಿ. ಪವಾಡ ಶೆಟ್ಟರ ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಜಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ಶಿಕ್ಷಣ ಬಹಳ ಮಹತ್ವಪೂರ್ಣವಾದ ಕಾಲಾವಧಿ. ಈ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ವಿಶೇಷವಾಗಿ ಗಮನಹರಿಸಬೇಕು. ಜಗತ್ತು ತುಂಬಾ ಸ್ಪರ್ಧಾತ್ಮಕವಾಗಿ ರೂಪುಗೊಳ್ಳುತ್ತಿದೆ. ಇಂಥ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಯಶಸ್ಸು ಪಡೆಯಲು ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗೆ ಪಾಲಕರು ಸಮಯ ಮೀಸಲಿಡಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಮೊಬೈಲ್ ಆವರಿಸಿಕೊಂಡು ಅವರ ವಿದ್ಯಾಭ್ಯಾಸ ಕುಂಠಿತಗೊಳ್ಳದಂತೆ ಪಾಲಕರು ಎಚ್ಚರ ವಹಿಸಬೇಕು ಎಂದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಎಚ್.ಎಸ್. ಕೌಲಗಿ ಅವರು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾದ ವ್ಯವಸ್ಥಿತವಾದ ಪ್ರಯೋಗಾಲಯಗಳು, ಗ್ರಂಥಾಲಯ, ಕ್ರೀಡಾಂಗಣ, ವಿದ್ಯಾರ್ಥಿ ವೇತನ, ವಸತಿ ನಿಲಯಗಳು, ಇತರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜು ಆಂತರಿಕ ಗುಣಮಟ್ಟ ಕೋಶದ ಸಂಚಾಲಕ ಪ್ರೊ. ಪ್ರದೀಪ ಸಂಗಪ್ಪಗೋಳ್ ಉಪಸ್ಥಿತರಿದ್ದರು.ಪಾಲಕರಾದ ಚಂದ್ರಶೇಖರ ಡಂಬಳ, ಪ್ರಶಾಂತ, ವೈ.ಪಿ. ಮೆಣಸಗಿ ಮತ್ತು ಶಂಕರ ದೇಸಾಯಿ ಅಭಿಪ್ರಾಯ ಹಂಚಿಕೊಂಡರು. ಸುಸ್ಮಿತಾ ಪೂಜಾರ ಪ್ರಾರ್ಥಿಸಿದರು. ಡಾ. ನಾಗರಾಜ ಓಬಯ್ಯ ವಂದಿಸಿದರು. ಬಿ.ಆರ್. ಚಿನಗುಂಡಿ ಹಾಗೂ ಶ್ರುತಿ ಮ್ಯಾಗೇರಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಜಿ. ಡಾ. ಶಂಕರ ಮಡಿವಾಳೆ, ರಾಜಕುಮಾರ ಬಡಿಗೇರ, ಡಾ. ಕರ್ಣಕುಮಾರ್, ಗಿರಿಧರ್, ಜಗನ್ನಾಥ ಆರ್., ಜಗನ್ನಾಥ ಮಲಗೊಂಡ, ಡಾ. ಮಂಜುನಾಥ ಪಟಗಾರ, ಡಾ. ಕೃಷ್ಣ, ಡಾ. ರಘು, ಡಾ. ರಮೇಶ, ಡಾ. ವಿಜಯಲಕ್ಷ್ಮಿ ಕಿಲ್ಲೇದಾರ್ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು.