ಸಿರಿ ಸಂಪತ್ತಿಗಿಂತ ಉತ್ತಮ ಆರೋಗ್ಯ ಮುಖ್ಯ: ಪಿ.ಪಿ.ಬೇಬಿ

KannadaprabhaNewsNetwork | Published : Mar 5, 2025 12:34 AM

ಬಾಳೆಹೊನ್ನೂರು, ಯಾವುದೇ ಸಿರಿ ಸಂಪತ್ತಿಗಿಂತ ಯುವಜನರಿಗೆ ಉತ್ತಮ ಆರೋಗ್ಯ ಇರುವುದು ಮುಖ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಹೇಳಿದರು.

ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಯಾವುದೇ ಸಿರಿ ಸಂಪತ್ತಿಗಿಂತ ಯುವಜನರಿಗೆ ಉತ್ತಮ ಆರೋಗ್ಯ ಇರುವುದು ಮುಖ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಹೇಳಿದರು.ರೇಣುಕನಗರದ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಜೇಸಿಐ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ರಸಪ್ರಶ್ನೆಯಲ್ಲಿ ಮಾತನಾಡಿದರು. ಇಂದಿನ ಯುವ ಜನಾಂಗ ತಮ್ಮ ಹಾಗೂ ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯುವಜನರು ಯಾವುದೇ ದುರಭ್ಯಾಸ ಮಾಡಿಕೊಳ್ಳದೆ ಕ್ರೀಡೆ, ಓದಿನಲ್ಲಿ ತೊಡಗಿ ಉತ್ತಮ ಆರೋಗ್ಯ ಪಡೆದು ಸತ್ಪ್ರಜೆಯಾಗಬೇಕು ಎಂದರು.

ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಐಟಿಐ ವಿದ್ಯಾರ್ಥಿಗಳ ಶಿಸ್ತು ಎಲ್ಲರಿಗೂ ಮಾದರಿ. ಶಿಸ್ತಿನ ಜೀವನದ ಜೊತೆ ಆರೋಗ್ಯ ಕಾಪಾಡಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬಹುದು. ಮುಂದಿನ ದಿನಗಳಲ್ಲಿ ಜೇಸಿನಿಂದ ಐಟಿಐ ಕಾಲೇಜಿನಲ್ಲಿ ಬೃಹತ್ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು. ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್ ಮಾತನಾಡಿ, ಹಲವಾರು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಆರೋಗ್ಯ ಇಲಾಖೆಯಿಂದ ಅನೇಕ ಹಳ್ಳಿಗಳಲ್ಲಿ, ಜನ ನಿಬಿಡ ಪ್ರದೇಶಗಳಲ್ಲಿ ಆರೋಗ್ಯದ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆಎಂದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಹಾನ್, ವೇಣುಪ್ರಸಾದ್ ಪ್ರಥಮ, ಯಶವಚಿತ್, ನಮನ್ ದ್ವಿತೀಯ, ಧರ್ಮೇಶ್, ಭುವನ್ ತೃತೀಯ ಬಹುಮಾನ ಪಡೆದರು. ವಿಜೇತರಿಗೆ ಆರೋಗ್ಯ ಇಲಾಖೆಯಿಂದ ನಗದು ಬಹುಮಾನ, ಪ್ರಮಾಣ ಪತ್ರ, ಜೇಸಿ ಸಂಸ್ಥೆಯಿಂದ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಸಂಸ್ಥೆ ಪ್ರಾಚಾರ್ಯ ಎಚ್.ಆರ್.ಆನಂದ್, ಜೇಸಿ ಕಾರ್ಯದರ್ಶಿ ವಿ.ಅಶೋಕ್, ಶಿಕ್ಷಕ ಚಂದ್ರಶೇಖರ್, ಅಶೋಕ್, ಉಮೇಶ್, ರವಿರಾಜು, ಶ್ರೀನಿವಾಸ್, ಪ್ರಕಾಶ್, ಆರೋಗ್ಯ ಇಲಾಖೆ ಡೈಸಿ, ವಿನೋದ ಮತ್ತಿತರರು ಹಾಜರಿದ್ದರು.೦೪ಬಿಹೆಚ್‌ಆರ್ ೨:

ಬಾಳೆಹೊನ್ನೂರಿನ ಎಸ್‌ಜೆಆರ್ ಐಟಿಐ ಕಾಲೇಜಿನಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಚ್.ಆರ್.ಆನಂದ್, ಇಬ್ರಾಹಿಂ ಶಾಫಿ, ಪಿ.ಪಿ.ಬೇಬಿ, ಭಗವಾನ್, ಅಶೋಕ್ ಮತ್ತಿತರರು ಇದ್ದರು.