ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

KannadaprabhaNewsNetwork | Published : Sep 30, 2024 1:25 AM

ಸಾರಾಂಶ

ರಾಜ್ಯದ ೧೦ ಜಿಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯದ ಜವಾಬ್ದಾರಿ ನನಗೆ ನೀಡಿದ್ದಾರೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ೭೫ ಸಾವಿರಕ್ಕೂ ಅಧಿಕ ಜನರಿಗೆ ಸದಸ್ಯತ್ವ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ. ರಾಜ್ಯದ ಎಲ್ಲ್ಲೆಡೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬ ಹೇಳಿದರು.ರಾಜ್ಯ ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ, ಸಾಮಾನ್ಯವಾಗಿ ಒಂದು ಮನೆಯಲ್ಲಿರುವ ಸದಸ್ಯರಲ್ಲಿ ಹೇಗೆ ಬೇರೆ ಬೇರೆ ಅಭಿಪ್ರಾಯಗಳಿರುತ್ತವೆ ಹಾಗೆ ನಮ್ಮಲ್ಲೂ ಇದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರಾಜ್ಯದ ಎಲ್ಲ್ಲೆಡೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬ ಹೇಳಿದರು.

ಪಟ್ಟಣದ ಹಳೆ ನಿಲ್ದಾಣದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ೧೦ ಜಿಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯದ ಜವಾಬ್ದಾರಿ ನನಗೆ ನೀಡಿದ್ದಾರೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ೭೫ ಸಾವಿರಕ್ಕೂ ಅಧಿಕ ಜನರಿಗೆ ಸದಸ್ಯತ್ವ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕಳೆದ ನಾಲ್ಕು ದಶಕಗಳಿಂದ ಸುದೀರ್ಘ ರಾಜಕೀಯ ಜೀವನದಲ್ಲಿದ್ದು ಹಲವಾರು ಜವಾಬ್ದಾರಿ ಹುದ್ದೆಗಳನ್ನು ನಿಭಾಯಿಸಿ ಇದೀಗ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದು ಇದುವರೆಗೂ ನಾನು ಭ್ರಷ್ಟಾಚಾರ ಮಾಡಿಲ್ಲ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದ ಸಿದ್ದರಾಮಯ್ಯ, ಇದೀಗ ಸ್ವಂತ ಅವರ ಪರಿವಾರದ ಜೊತೆ ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ.

ಈ ವಿಚಾರವಾಗಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದು ಆದರೂ ಸಹ ಸಿದ್ದರಾಮಯ್ಯ ಬಂಡತನ ತೋರಿ ಹೈಕೋರ್ಟ್‌ ಬಾಗಿಲು ತಟ್ಟಿದ್ದರು. ರಾಜ್ಯಪಾಲರ ಆದೇಶ ಸರಿಯಾಗಿದೆ ಎಂದು ಕೋರ್ಟ್‌ ತೀರ್ಪು ನೀಡಿದ ಮೇಲೆ ನ್ಯಾಯಲಯದಲ್ಲೂ ಕೂಡ ಸಿದ್ದರಾಮಯ್ಯನವರಿಗೆ ಹಿನ್ನಡೆಯಾಗಿದೆ. ಅದೂ ಅಲ್ಲದೆ ಜನಪ್ರತಿನಿಧಿಗಳ ಕೋರ್ಟ್ ಕೂಡ ಲೋಕಾಯುಕ್ತದಲ್ಲಿ ಕೇಸ್ ದಾಖಲಿಸಲು ಸೂಚನೆ ನೀಡಿದೆ. ಆದರೂ ಇಂಥ ಭಂಡ ಮುಖ್ಯಮಂತ್ರಿ ಸಭ್ಯತೆವಿರುವ ಕರ್ನಾಟಕದಲ್ಲಿ ಕೆಟ್ಟ ಸಂಸ್ಕೃತಿಗೆ ನಾಂದಿ ಹಾಡುತ್ತಿದ್ದಾರೆ ಎಂದು ಗುಡುಗಿದರು.

ಕಾಂಗ್ರೆಸ್‌ನವರು ಯಾವಾಗಲೂ ನಾವು ಸಂವಿಧಾನ ಉಳಿಸುತ್ತೇವೆ, ಪ್ರಜಾಪ್ರಭುತ್ವ ಗೌರವಿಸುತ್ತೇವೆ, ಈ ನೆಲದ ಕಾನೂನಿಗೆ ತಲೆಬಾಗುತ್ತೇವೆ ಎಂದು ವಾದ ಮಂಡಿಸುತ್ತಾರೆ. ಆದರೆ ಇವೆಲ್ಲವನ್ನು ಇದೀಗ ಗಾಳಿಗೆ ತೂರಿದ್ದಾರೆ. ನ್ಯಾಯಾಲಯದ ತೀರ್ಪನ್ನು ರಾಜಕೀಯ ಪ್ರೇರಿತ ಎನ್ನುತ್ತಾ ಕೋರ್ಟ್‌ ಆದೇಶವನ್ನು ನಿಂದನೆ ಮಾಡುತ್ತಿದ್ದಾರೆ. ಇವರಿಗೆಲ್ಲ ಬುದ್ಧಿ ಇದೆಯ ಎಂದು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಎಂದರೆ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ರವರ ರಾಜೀನಾಮೆ ಕೇಳುತ್ತಿದ್ದಾರೆ. ಕೇಂದ್ರ ಸಚಿವರ ಪ್ರಕರಣ ಯಾವುದು ಸಿದ್ದರಾಮಯ್ಯನವರ ಪ್ರಕರಣ ಯಾವುದು ಎಂದು ತಿಳಿಯುವುದಿಲ್ಲವೇ ಎಂದರು.

ಅದು ಎಲೆಕ್ಷನ್ ಬಾಂಡ್ ದೇಣಿಗೆ ಪಡೆಯುವುದಕ್ಕೆ ಎಲ್ಲ ಪಕ್ಷಗಳಿಗೂ ಅಧಿಕಾರವಿದೆ. ದೇಶದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ದೇಣಿಗೆ ಪಡೆದುಕೊಂಡಿವೆ. ಕಾಂಗ್ರೆಸ್ ಸುಮ್ಮನೆ ಬೇರೆ ಪ್ರಕರಣಗಳಿಗೆ ತುಲನೆ ಮಾಡದೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಭಾರತೀಯ ಜನತಾ ಪಾರ್ಟಿ ಬೆಂಗಳೂರಿಂದ ಮೈಸೂರುವರೆಗೂ ಪಾದಯಾತ್ರೆ ನಡೆಸಿ ಯಶಸ್ವಿಯಾಗಿ ಜನಜಾಗೃತಿ ಮೂಡಿಸಿದ ಸ್ವರೂಪದಲ್ಲಿ ದೇಶಾದ್ಯಂತ ಹೋರಾಟ ಪ್ರಾರಂಭ ಮಾಡಿ ಮುಖ್ಯಮಂತ್ರಿಗಳ ರಾಜೀನಾಮೆ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ರಾಜ್ಯ ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ, ಸಾಮಾನ್ಯವಾಗಿ ಒಂದು ಮನೆಯಲ್ಲಿರುವ ಸದಸ್ಯರಲ್ಲಿ ಹೇಗೆ ಬೇರೆ ಬೇರೆ ಅಭಿಪ್ರಾಯಗಳಿರುತ್ತವೆ ಹಾಗೆ ನಮ್ಮಲ್ಲೂ ಇದೆ. ಎಲ್ಲರೂ ಒಂದೇ ಪಕ್ಷದ ನಾಯಕರು ಕಾರ್ಯಕರ್ತರಿದ್ದಾರೆ. ಬಿಜೆಪಿಯಲ್ಲಿ ಅವರವರ ಅಭಿಪ್ರಾಯ ಹಂಚಿಕೊಳಲ್ಲೂ ಮುಕ್ತ ಅವಕಾಶವಿದ್ದು, ಈ ನಿಟ್ಟಿನಲ್ಲಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಸಿರುವರೆಗೂ ಹೋರಾಟ ನಡೆಸುತ್ತೇವೆ ಎಂದರು.

ಇದೇ ವೇಳೆ ಪಟ್ಟಣದ ಬೂತ್ ಸಂಖ್ಯೆ ೮೬ರ ಪ್ರಮುಖ್ ನವೀನ್ ಶೆಟ್ಟಿ ಮನೆಯಲ್ಲಿ ಮೋದಿಯವರ ಮನ್ ಕೀ ಬಾತ್ ನ್ನು ಬಿಜೆಪಿ ಕಾರ್ಯಕರ್ತರ ಜೊತೆ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಸಿದ್ದೇಶ್ ನಾಗೇಂದ್ರ, ನೇತ್ರಾವತಿ ಮಂಜುನಾಥ, ಅಮಿತ್ ಶೆಟ್ಟಿ, ಲೋಕೇಶ್ (ದಿಂಬು), ಅಗ್ನಿ ಸೋಮಶೇಖರ್, ತಾಲೂಕು ಬಿಜೆಪಿ ವಕ್ತಾರ ಸಾ.ಸು ವಿಶ್ವನಾಥ್ ಮುಂತಾದವರು ಹಾಜರಿದ್ದರು.

ಫೋಟೋ ಶಿರ್ಷಿಕೆ:

೨೯ಎಸ್. ಕೆ. ಪಿ. ಪಿ ೧ ಸಕಲೇಶಪುರ ಪಟ್ಟಣದ ಹಳೆ ಬಸ್‌ ನಿಲ್ದಾಣದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು, ಮುಂತಾದವರು ಹಾಜರಿದ್ದರು.೨೯ಎಸ್‌. ಕೆ. ಪಿ. ಪಿ ೨ ಸಕಲೇಶಪುರ ಪಟ್ಟಣದ ಬೂತ್ ಸಂಖ್ಯೆ ೮೬ ರ ಪ್ರಮುಖ್ ನವೀನ್ ಶೆಟ್ಟಿ ಮನೆಯಲ್ಲಿ ಪ್ರಧಾನಿ ಮೋದಿಯವರ ಮನ್ ಕೀ ಬಾತ್ ನ್ನು ಕೇಂದ್ರ ಮಾಜಿ ಸಚಿವ ಭಗವಂತ್ ಖೂಬ ಬಿಜೆಪಿ ಕಾರ್ಯಕರ್ತರ ಜೊತೆ ವೀಕ್ಷಣೆ ಮಾಡಿದರು.

Share this article