ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಪಾಂಡೇಶ್ವರದ ಆರ್ಟಿಒ ಕಚೇರಿ ಸಮೀಪ ಎ.ಬಿ. ಶೆಟ್ಟಿ ಸರ್ಕಲ್ ಬಳಿ ಇರುವ ಪೆರೇಡಿಯಂ ಪ್ಲಾಜಾದಲ್ಲಿ ಆದರ್ಶ ವಿವಿಧೊದ್ದೇಶ ಸಹಕಾರ ಸಂಘದ 16ನೇ ಪಾಂಡೇಶ್ವರ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಶನಿವಾರ ಮಾತನಾಡಿದರು.
ಜನರಿಗೆ ಬೇಕಾದ ರೀತಿಯ ಉತ್ತಮ ಸೇವೆ ನೀಡುವುದರಿಂದ ಸಂಸ್ಥೆಗಳು ಬೆಳೆಯುತ್ತವೆ. ಇದಕ್ಕೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದಂತಹ ಅನೇಕ ಸಹಕಾರ ಸಂಸ್ಥೆಗಳು ಉದಾಹರಣೆಗಳಾಗಿವೆ. ಹಳ್ಳಿ ಹಳ್ಳಿಗಳಿಗೆ ಹೋಗಿ ಸೇವೆ ನೀಡುತ್ತಾ ವಿಕಸನಗೊಳ್ಳುತ್ತಿವೆ. ಮಾದರಿಯಾಗಿ ಬೆಳೆಯುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ 25 ವರ್ಷ ಪೂರ್ಣಗೊಳಿಸುವಾಗ 25 ಶಾಖೆಗಳ ಮೂಲಕ 250 ಕೋ.ರು. ಠೇವಣಿ ಸಂಗ್ರಹಿಸುವಂತಾಗಲಿ ಎಂದು ರಾಜೇಂದ್ರ ಕುಮಾರ್ ಹಾರೈಸಿದರು.ಪಾಂಡೇಶ್ವರ ಶಾಖೆಯನ್ನು ಉದ್ಘಾಟಿಸಿದ ಎ.ಜೆ.ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ಚೇರ್ಮೇನ್ ಡಾ. ಎ.ಜೆ.ಶೆಟ್ಟಿ ಮಾತನಾಡಿ, ಕೃಷಿ, ಉದ್ಯಮ, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಸೀತಾರಾಮ ರೈ ಸವಣೂರು ಅವರ ಮುಂದಾಳತ್ವದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಸಾಲ ವಿತರಣೆ, ಮರುಪಾವತಿ ಉತ್ತಮವಾಗಿ ನಡೆಯುತ್ತಿದೆ. ದಕ್ಷ ಆಡಳಿತ ಮಂಡಳಿ, ಸೇವಾ ಮನೋಭಾವದ ಸಿಬ್ಬಂದಿ ಸಂಸ್ಥೆಯ ಶಕ್ತಿಯಾಗಿದ್ದು ಮತ್ತಷ್ಟು ಸದಸ್ಯರೊಂದಿಗೆ ಸಂಸ್ಥೆ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಲಾಭದಾಯಕ ಸಂಸ್ಥೆ: ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿ ಮಾತನಾಡಿ, ಉತ್ತಮ ಸೇವೆಯಿಂದಾಗಿ ಬ್ಯಾಂಕ್ ಬೆಳೆಯುತ್ತಿದೆ. ಸುರಕ್ಷತೆ, ಲಾಭದಾಯಕ ವ್ಯವಹಾರ ಸಂಸ್ಥೆಯನ್ನು ಮುಂಚೂಣಿಗೆ ಕೊಂಡೊಯ್ದಿದೆ ಎಂದು ಹೇಳಿದರು.ಆರ್ಥಿಕತೆಗೆ ಕೊಡುಗೆ: ಠೇವಣಿ ಪತ್ರ ಬಿಡುಗಡೆಗೊಳಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಕಠಿಣ ಪರಿಶ್ರಮದಿಂದ ಬೆಳೆದಿರುವ ಸವಣೂರು ಸೀತಾರಾಮ ರೈ ಅವರು ತಾವು ತೊಡಗಿಸಿಕೊಂಡ ಎಲ್ಲ ಕ್ಷೇತ್ರಗಳಲ್ಲಿಯೂ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ. ಸಹಕಾರಿ ಸಂಸ್ಥೆಗಳು ರೈತರು, ವ್ಯಾಪಾರಸ್ಥರಿಗೆ ಕೈಗೆಟಕುವ ದರದಲ್ಲಿ ಸಾಲ ಸೌಲಭ್ಯ ಒದಗಿಸಿ ಅವರ ಜೀವನವನ್ನು ರೂಪಿಸುವ ಮೂಲಕ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿವೆ ಎಂದರು.
ಪ್ರಭಾರ ಶಾಖಾ ವ್ಯವಸ್ಥಾಪಕಿ ಮಹಾಲಕ್ಷ್ಮಿ ವಂದಿಸಿದರು. ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.
----------------