ಮೇ 18ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ: ಸಿ.ಎಸ್.ಷಡಾಕ್ಷರಿ

KannadaprabhaNewsNetwork | Published : May 17, 2025 1:26 AM
Follow Us

ಸಾರಾಂಶ

ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೇ 18ರಿಂದ 20ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಸಿಎಂ ಸಿದ್ದರಾಮಯ್ಯ ಉದ್ಘಾಟನೆ । ಕೂಟದ ಲಾಂಛನ, ಟ್ರೋಫಿ, ಕ್ರೀಡಾ ಸಮವಸ್ತ್ರ ಬಿಡುಗಡೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೇ 18ರಿಂದ 20ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ನಗರದ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಕ್ರೀಡಾಕೂಟದ ಲಾಂಛನ, ಕ್ರೀಡಾ ಸಮವಸ್ತ್ರ ಹಾಗೂ ಟ್ರೋಫಿ ಬಿಡುಗಡೆಗೊಳಿಸಿ, ಪತ್ರಿಕಾ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಈಗಾಗಲೇ ಸಕಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ನುಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ 15,000 ನೌಕರ ಕ್ರೀಡಾಪಟುಗಳಿಗೆ ಟ್ರ್ಯಾಕ್‌ಸೂಟನ್ನು ನೋಂದಣಿ ಸಂದರ್ಭದಲ್ಲಿಯೇ ನೀಡಲಾಗುವುದು. ಸ್ಪರ್ಧೆಯಲ್ಲಿ ಎಲ್ಲಾ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿಯನ್ನು ಕೊಡಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಅತ್ಯಂತ ಆಕರ್ಷಕವಾದ ಟ್ರೋಫಿಯನ್ನು ಕ್ರೀಡಾಪಟುಗಳಿಗೆ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ವಿಜೇತ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ, ಟ್ರೋಫಿಯ ಜೊತೆಗೆ ಸಫಾರಿ ಕಂಪನಿಯ ಟ್ರಾಲಿ ಬ್ಯಾಗನ್ನು ಕೂಡ ನೀಡಲಾಗುತ್ತಿದೆ ಎಂದು ಹೇಳಿದರು

ಮುಖ್ಯಮಂತ್ರಿಗಳು ಅಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ನಗರಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ನಾಲ್ಕು ಗಂಟೆಗೆ ಸಮಾರಂಭಕ್ಕೆ ಆಗಮಿಸಿದ ಬಳಿಕ ಕಾರ್ಯಕ್ರಮ ಆರಂಭವಾಗಲಿದೆ. ಉಪಮುಖ್ಯಮಂತ್ರಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಶಾಸಕರು ಹಾಗೂ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಅಧಿಕಾರವಹಿಸಿಕೊಂಡ ನಂತರ ಇದೇ ಪ್ರಥಮ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷನಾದ ನಂತರ ನಾಲ್ಕು ಬಾರಿ ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಒಂದು ವಿಶೇಷವಾಗಿದೆ. ಮೇ 19ರಂದು ಸಂಜೆ ನೆಹರು ಕ್ರೀಡಾಂಗಣದಲ್ಲಿ ಜನಪದ ದಿಬ್ಬಣ ಕಾರ್ಯಕ್ರಮ ನಡೆಯಲಿದ್ದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಜಗದೀಶ್ ಹಾಗೂ ಶಿವಮೊಗ್ಗ ಕೇಂದ್ರ ವಲಯ ಸಂಪರ್ಕ ಮತ್ತು ಕಟ್ಟಡದ ಮುಖ್ಯ ಎಂಜಿನಿಯರ್ ಬಿವಿ ಜಗದೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ಸಿದ್ದಲಿಂಗರೆಡ್ಡಿ, ಶಾಹಿ ಎಕ್ಸ್‌ಪೋರ್ಟ್‌ನ ಲಕ್ಷ್ಮಣ್, ಸೂಡಾ ಆಯುಕ್ತ ವಿಶ್ವನಾಥ್ ಆಗಮಿಸಲಿದ್ದಾರೆ ಎಂದರು.

ಮೇ 20ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹಾಗೂ ಮಾಜಿ ಶಾಸಕ ಆರ್.ಮಂಜುನಾಥ್ ನೆರವೇರಿಸಲಿದ್ದಾರೆ. ಇವರೊಂದಿಗೆ ಬಿಸಿಬಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಭಾಗವಹಿಸಲಿದ್ದಾರೆ ಎಂದರು

ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ನೌಕರ ಬಂಧುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗಿದೆ. ಎಲ್ಲರಿಗೂ ಕೂಡ ಅವರ ವಾಟ್ಸಪ್ ಗಳಿಗೆ ಕ್ಯೂಆರ್ ಕೋಡ್ ಅನ್ನು ಹಾಕಲಾಗುತ್ತಿದೆ. ಅದರಲ್ಲಿ ಎಲ್ಲ ಸಮಗ್ರ ಮಾಹಿತಿ ದೊರೆಯಲಿದೆ. ಯಾರಿಗೂ ಕೂಡ ಗೊಂದಲ ಆಗದಂತೆ ಮತ್ತು ಎಲ್ಲಿಯೂ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು

ಕ್ರೀಡಾಪಟುಗಳು ತಂಗುವ ಮತ್ತು ಕ್ರೀಡಾಕೂಟದ ಸ್ಥಳಕ್ಕೆ ಸಂಚರಿಸಲು ಅನುಕೂಲವಾಗುವಂತೆ 40 ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ನೌಕರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್‌, ಕಾರ್ಯದರ್ಶಿ ಪಾಪಣ್ಣ, ಸಿದ್ಬಸಪ್ಪ, ದಿನೇಶ್, ರಂಗನಾಥ್, ಆರ್.ಮಾರುತಿ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.