ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ನೆಲಮಂಗಲ ಕ್ಷೇತ್ರಕ್ಕೆ ಗ್ಯಾರಂಟಿ ಯೋಜನೆಗಳ ಹಣದ ಜೊತೆಗೆ 1175 ಕೋಟಿ ರುಪಾಯಿಗೂ ಹೆಚ್ಚು ಅನುದಾನ ಸರ್ಕಾರ ನೀಡಿದ್ದು, ಅಭಿವೃದ್ಧಿಗೆ ದೊಡ್ಡಶಕ್ತಿಯಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನಕೇನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಶೂನ್ಯ ಎಂದು ಟೀಕೆ ಮಾಡುವವರು ನೆಲಮಂಗಲ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ನೋಡಬಹುದು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಬಡವರ, ಹಿಂದುಳಿದವರ ಜನತೆಯ ಬದುಕಿಗೆ ಶಕ್ತಿ ನೀಡಿವೆ ಎಂದರು.ನೆಲಮಂಗಲ ಮೀಸಲು ಕ್ಷೇತ್ರದಲ್ಲಿನ ಕಾಲೋನಿಗಳಲ್ಲಿ ಮೂಲಸೌಕರ್ಯಗಳು ಇಲ್ಲ. ಇಂದಿಗೂ ಗ್ರಾಮಕ್ಕೆ ಭೇಟಿ ನೀಡಿದಾಗ ಚರಂಡಿ, ರಸ್ತೆ, ವಿದ್ಯುತ್, ನೀರಿನ ಸಮಸ್ಯೆ ಕುರಿತು ಸ್ಥಳೀಯರು ಹೇಳುತ್ತಾರೆ. ಇವರಿಗೆ ಮಾಜಿ ಶಾಸಕ ಶ್ರೀನಿವಾಸಮೂರ್ತಿ ಮಾಡಿದ ಅನ್ಯಾಯ ನಾವು ಮಾಡುವುದಿಲ್ಲ. ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಮನಗಂಡು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಎತ್ತಿನಹೊಳೆ ನೀರಿಗೆ ಒತ್ತಾಯ:ನೆಲಮಂಗಲ ತಾಲೂಕಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಎತ್ತಿನಹೊಳೆ ಯೋಜನೆಯಡಿ ನೀರನ್ನು ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಸಿಕ್ಕರೆ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಮಾತನಾಡಿದರು.ಇದೇ ಸಂದರ್ಭದಲ್ಲಿ ಶಾಸಕರ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕನಕೇನಹಳ್ಳಿ ಕಾಲೋನಿಗೆ ಭೇಟಿ ನೀಡಿ ಜನತೆಯ ಅಹವಾಲುಗಳನ್ನು ಸ್ವೀಕರಿಸಿದರು.
ಎನ್ಪಿಎ ಸದಸ್ಯ ರಂಗಸ್ವಾಮಿ, ಬಿಟ್ಟಸಂದ್ರ ಗ್ರಾಪಂ ಅಧ್ಯಕ್ಷ ಗಂಗರಂಗಯ್ಯ, ಲಕ್ಕೇನಹಳ್ಳಿ ಗ್ರಾಪಂ ಅಧ್ಯಕ್ಷ ನಾರಾಯಣ್, ಸೋಲೂರು ಗ್ರಾಪಂ ಮಾಜಿ ಅಧ್ಯಕ್ಷ ತಟ್ಟೆಕೆರೆ ಬಾಬು, ಬಹುಜನ ಚಳವಳಿ ರಾಜ್ಯಾಧ್ಯಕ್ಷ ಕನಕೇನಹಳ್ಳಿ ಕೃಷ್ಣಪ್ಪ, ಗ್ರಾಪಂ ಸದಸ್ಯ ರಮೇಶ್, ಮುಖಂಡರಾದ ಕನಕೇನಹಳ್ಳಿ ಡಾ.ಕೃಷ್ಣ, ಗುಡೇಮಾರನಹಳ್ಳಿ ಶಂಕರಪ್ಪ ಮತ್ತಿತರರಿದ್ದರು.