ಮಕ್ಕಳ ದಾಖಲಾತಿಗೆ ಪೋಸ್ಟರ್‌ ಮೊರೆ ಹೋದ ಸರ್ಕಾರಿ ಶಾಲೆ!

KannadaprabhaNewsNetwork |  
Published : Jun 09, 2025, 01:51 AM IST
school | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ಮಕ್ಕಳ ದಾಖಲಾತಿ ಹೆಚ್ಚಿಸಲು ಖಾಸಗಿ ಶಾಲೆಗಳ ಮಾದರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಸೌಲಭ್ಯಗಳು ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಮಕ್ಕಳ ಸಾಧನೆಯ ಮಾಹಿತಿಯ ಪೋಸ್ಟರ್‌ಗಳನ್ನು ಅಳವಡಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ಮಕ್ಕಳ ದಾಖಲಾತಿ ಹೆಚ್ಚಿಸಲು ಖಾಸಗಿ ಶಾಲೆಗಳ ಮಾದರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಸೌಲಭ್ಯಗಳು ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಮಕ್ಕಳ ಸಾಧನೆಯ ಮಾಹಿತಿಯ ಪೋಸ್ಟರ್‌ಗಳನ್ನು ಅಳವಡಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಮತ್ತು ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಪೋಸ್ಟರ್‌ಗಳನ್ನು ಅಳವಡಿಸುವ ಮೂಲಕ ದಾಖಲಾತಿ ಹೆಚ್ಚಳಕ್ಕೆ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಮೇ 29ರಿಂದ ಶಾಲಾ ದಾಖಲಾತಿ ಆರಂಭಗೊಂಡಿದ್ದು, ಜೂನ್‌ ಅಂತ್ಯದವರೆಗೂ ದಾಖಲಾತಿಗೆ ಅವಕಾಶ ನೀಡಲಾಗಿದೆ.

ಪೋಸ್ಟರ್‌ನಲ್ಲಿ ಸರ್ಕಾರಿ ಶಾಲೆಗಳಲ್ಲಿ ಉಚಿತ ದಾಖಲಾತಿ, ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್‌ ಉಚಿತವಾಗಿ ನೀಡಲಾಗುತ್ತದೆ. ಪ್ರತಿದಿನ ಮಧ್ಯಾಹ್ನ ಬಿಸಿಯೂಟ, ಅಪೌಷ್ಟಿಕತೆ ಹೋಗಲಾಡಿಸಲು ವಾರದಲ್ಲಿ ಆರು ದಿನ ಮೊಟ್ಟೆ/ಬಾಳೆಹಣ್ಣು, ಕ್ಷೀರಭಾಗ್ಯದ ಜೊತೆಗೆ ರಾಗಿಮಾಲ್ಟ್‌ ವಿತರಣೆ ಸೇರಿ ಸರ್ಕಾರಿ ಶಾಲೆಗಳಲ್ಲಿನ ಇತರೆ ಸೌಲಭ್ಯಗಳು, ಜೊತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಇರುವ ಕಲಿಕಾ ಚಿಲುಮೆ, ಗಣಿತ ಗಣಕ, ಓದು ಕರ್ನಾಟಕ, ಕಲಿಕಾ ದೀಪ, ಜ್ಞಾನ ಸೇತು, ವಿದ್ಯಾ ವಿಜೇತ ಮತ್ತಿತರ ಕಾರ್ಯಕ್ರಮಗಳ ಮಾಹಿತಿ ಒಳಗೊಂಡಂತೆ ಪೋಸ್ಟರ್‌ ಸಿದ್ಧಪಡಿಸಲಾಗಿದೆ.

ಜೊತೆಗೆ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿ ಶಿರಸಿಯ ಸರ್ಕಾರಿ ಉರ್ದು ಪ್ರೌಢ ಶಾಲೆಯ ಶಗುಪ್ತಾ ಅಂಜುಂ, ಬೆಳಗಾವಿ ಜಿಲ್ಲೆಯ ದೇವಲಾಪುರದ ಸರ್ಕಾರಿ ಪ್ರೌಢ ಶಾಲೆಯ ರೂಪಾ ಚನ್ನೇಗೌಡ ಪಾಟೀಲ್‌ ಅವರು ಮಾಡಿರುವ ಅಮೋಘ ಸಾಧನೆಯನ್ನು ಪೋಸ್ಟರ್‌ನಲ್ಲಿ ಪ್ರದರ್ಶಿಸಲು ನಿರ್ದೇಶಿಸಲಾಗಿದೆ.

ಪೋಸ್ಟರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಭಾವಚಿತ್ರಗಳು ಇರಲಿದ್ದು, ಪ್ರಮುಖವಾಗಿ ಶಾಲೆಯ ಮುಂಭಾಗ, ಸ್ಥಳೀಯ ಗ್ರಾಪಂ, ಬಸ್‌ ನಿಲ್ದಾಣ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಬೇಕೆಂದು ನಿರ್ದೇಶಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ