ಎಲ್ಲ ಗ್ಯಾರಂಟಿ ಜಾರಿಗೊಳಿಸುವಲ್ಲಿ ಸರ್ಕಾರ ಯಶ

KannadaprabhaNewsNetwork | Published : Mar 2, 2024 1:46 AM

ಸಾರಾಂಶ

ಬಿಟ್ಟಿ ಭಾಗ್ಯ ಎಂದೆಲ್ಲ ಬೇಕಾಬಿಟ್ಟಿಯಾಗಿ ಮಾತನಾಡಿದವರಿಗೂ ಇದೀಗ ಮನವರಿಕೆಯಾಗಿದೆ. ಇವೆಲ್ಲ ಜನರ ಬದುಕು ಬದಲಿಸುವ ಗಟ್ಟಿ ಭಾಗ್ಯಗಳು ಎನ್ನುವುದು ಸಾಬೀತಾಗಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ನಾವು ಮಾತನಾಡುವ ಅಗತ್ಯವಿಲ್ಲ, ನಮ್ಮ ಯೋಜನೆ, ಯೋಚನೆ, ಅಭಿವೃದ್ಧಿ ಕಾರ್ಯಗಳೇ ಇನ್ನು ಮಾತನಾಡುತ್ತವೆ

ಹಾನಗಲ್ಲ: ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ರಚನೆಯಾದ ರಾಜ್ಯ ಸರ್ಕಾರ ಜನರ ನಿರೀಕ್ಷೆಯ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಸಕಾಲಿಕ ಹಾಗೂ ಸಾರ್ಥಕವಾಗಿ ಜಾರಿಗೊಳಿಸುವಲ್ಲಿ ಯಶ ಕಂಡಿದೆ. ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗೂ ಚಿತ್ತ ಹರಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನ ಶಾಸಕರ ಮಾದರಿ ಶಾಲೆಯ ಮೈದಾನದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ಹಾನಗಲ್ ಮತ್ತು ಬಮ್ಮನಹಳ್ಳಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಬಿಟ್ಟಿ ಭಾಗ್ಯ ಎಂದೆಲ್ಲ ಬೇಕಾಬಿಟ್ಟಿಯಾಗಿ ಮಾತನಾಡಿದವರಿಗೂ ಇದೀಗ ಮನವರಿಕೆಯಾಗಿದೆ. ಇವೆಲ್ಲ ಜನರ ಬದುಕು ಬದಲಿಸುವ ಗಟ್ಟಿ ಭಾಗ್ಯಗಳು ಎನ್ನುವುದು ಸಾಬೀತಾಗಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ನಾವು ಮಾತನಾಡುವ ಅಗತ್ಯವಿಲ್ಲ, ನಮ್ಮ ಯೋಜನೆ, ಯೋಚನೆ, ಅಭಿವೃದ್ಧಿ ಕಾರ್ಯಗಳೇ ಇನ್ನು ಮಾತನಾಡುತ್ತವೆ ಎಂದರು.

ಕಳೆದ ಕೇವಲ ೮-೯ ತಿಂಗಳಲ್ಲಿ ನಮ್ಮ ಹಾನಗಲ್ ತಾಲೂಕಿಗೆ ಕುಡಿವ ನೀರಿನ ಯೋಜನೆಗಳಿಗೆ ₹೧೮೦ ಕೋಟಿ ರಸ್ತೆ ನಿರ್ಮಾಣಕ್ಕಾಗಿ ₹೨೦೦ ಕೋಟಿ ಅನುದಾನ ಬಿಡುಗಡೆಯಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟು ದಾನಿಗಳ ಸಹಾಯ ಪಡೆದು ಸ್ಮಾರ್ಟ್ ಕ್ಲಾಸ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿದ್ದೇವೆ. ಐಎಎಸ್, ಕೆಎಎಸ್, ಸಿಇಟಿ ತರಬೇತಿಯ ಪ್ರಯೋಜನ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ.ಇನ್ನೊಂದು ವರ್ಷದಲ್ಲಿ ೧೩ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಕಂದಾಯ ಗ್ರಾಮ,ಉಪ ಗ್ರಾಮಗಳ ಘೋಷಣೆಗೆ ಸಜ್ಜಾಗಿದ್ದೇವೆ. ಭೂ ಸುರಕ್ಷಾ ಯೋಜನೆಯಲ್ಲಿ ತಾಲೂಕಿನಲ್ಲಿ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ.ಉದ್ದಿಮೆಗಳು ಶೀಘ್ರ ತಾಲೂಕಿನಲ್ಲಿ ಆರಂಭವಾಗಲಿವೆ.ಯುವಕ, ಯುವತಿಯರು, ಮಹಿಳೆಯರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಒದಗಿಸಲು ಹಾನಗಲ್ ಉದ್ಯೋಗ ಸಮೃದ್ಧಿ ಕೇಂದ್ರ ಆರಂಭಿಸುತ್ತಿದ್ದೇವೆ. ಈ ಎಲ್ಲ ಕಾರ್ಯಗಳ ಮೂಲಕ ರಾಮರಾಜ್ಯ ಆಡಳಿತದ ಪರಿಕಲ್ಪನೆ ನೀಡಲು ಶಕ್ತಿಮೀರಿ ಶ್ರಮ ವಹಿಸಿದ್ದಾಗಿ ಶ್ರೀನಿವಾಸ ಮಾನೆ ತಿಳಿಸಿದರು.

ತಹಶೀಲ್ದಾರ್ ರೇಣುಕಾ ಎಸ್. ಮಾತನಾಡಿ, ತಾಲೂಕಿನಲ್ಲಿ ಏನೂ ತೊಂದರೆ ಇಲ್ಲದಂತೆ ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸುವಲ್ಲಿ ತಾಲೂಕಾಡಳಿತ ಸಮರ್ಥವಾಗಿ ಕೆಲಸ ಮಾಡುತ್ತಿದೆ.ತಾಂತ್ರಿಕ ತೊಂದರೆಗಳಿಂದ ಯಾರಿಗಾದರೂ ಗ್ಯಾರಂಟಿ ಯೋಜನೆಗಳ ಸೌಲಭ್ಯ ತಲುಪದಿದ್ದಲ್ಲಿ ಕೂಡಲೇ ಸಂಬಂಧಿಸಿದ ಇಲಾಖೆಯಲ್ಲಿ ವಿಚಾರಿಸಿರಿ.ಅಲ್ಲೂ ಕೆಲಸವಾಗದಿದ್ದರೆ ನಮ್ಮ ಗಮನಕ್ಕೆ ತನ್ನಿ.ಎಲ್ಲವೂ ಸರಿಯಾಗುತ್ತದೆ. ಸಮಾನತೆ ಸಾಮಾಜಿಕ ನ್ಯಾಯ, ಮಹಿಳಾ ಸಶಕ್ತತೆಗೆ ಸಹಕಾರಿಯಾಗುವ ಈ ಗ್ಯಾರಂಟಿ ಯೋಜನೆ ಲಾಭ ಎಲ್ಲ ಫಲಾನುಭವಿಗಳು ಪಡೆಯಲಿ ಎಂದರು.

ಸವಣೂರು ಉಪವಿಭಾಗಾಧಿಕಾರಿ ಮಹ್ಮದ್ ಖಿಜರ, ಶಿಗ್ಗಾಂವಿ ಡಿವೈಎಸ್‌ಪಿ ಮಂಜುನಾಥ, ತಾಪಂ ಇಒ ಎಸ್. ದೇವರಾಜ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ.ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮುಖಂಡರು ಈ ಸಂದರ್ಭದಲ್ಲಿದ್ದರು. ಎರಡೂ ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಪಾಲ್ಗೊಂಡಿದ್ದರು.

Share this article